ಬಾಲಿವುಡ್ನ ಹಿರಿಯ ನಟಿ ಜಯಾ ಬಚ್ಚನ್ ಅಂದಾಕ್ಷಣ ನೆನಪಾಗುವುದು ಅವರ ಶಿಸ್ತುಬದ್ಧ ನಡವಳಿಕೆ ಮತ್ತು ನೇರ ಮಾತು. ಪಾಪರಾಜಿಗಳ ಮೇಲಿರಲಿ ಅಥವಾ ಅಭಿಮಾನಿಗಳ ಮೇಲಿರಲಿ, ತಪ್ಪು ಕಂಡರೆ ಸಾರ್ವಜನಿಕವಾಗಿಯೇ ಗದರಿಸುವ ಅವರ ಸ್ವಭಾವ ಸದಾ ಚರ್ಚೆಯಲ್ಲಿರುತ್ತದೆ. ಆದರೆ, ಅವರ ಈ ಕಟ್ಟುನಿಟ್ಟಿನ ಧೋರಣೆ ಕೇವಲ ಹೊರಗಿನವರಿಗೆ ಮಾತ್ರ ಸೀಮಿತವಾಗಿಲ್ಲ; ಸ್ವತಃ ಪತಿ ಅಮಿತಾಭ್ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ಅವರ ವಿಷಯದಲ್ಲೂ ಅವರು ಅಷ್ಟೇ ಕಟ್ಟುನಿಟ್ಟಾಗಿರುತ್ತಾರೆ.
2014ರಲ್ಲಿ ಶಾರುಖ್ ಖಾನ್ ಮತ್ತು ಅಭಿಷೇಕ್ ಬಚ್ಚನ್ ಅಭಿನಯದ ‘ಹ್ಯಾಪಿ ನ್ಯೂ ಇಯರ್’ ಸಿನಿಮಾ ತೆರೆಕಂಡಿತ್ತು. ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗಳಿಕೆ ಮಾಡಿದ್ದರೂ, ಜಯಾ ಬಚ್ಚನ್ ಅವರಿಗೆ ಮಾತ್ರ ಈ ಸಿನಿಮಾ ಕಿಂಚಿತ್ತೂ ಇಷ್ಟವಾಗಲಿಲ್ಲ. ಪ್ರಥಮ ಪ್ರದರ್ಶನದ ನಂತರ ಬಹಿರಂಗವಾಗಿಯೇ ಈ ಚಿತ್ರವನ್ನು ‘ಅಸಂಬದ್ಧ’ ಎಂದು ಕರೆದು ಮಗನಿಗೇ ಶಾಕ್ ನೀಡಿದ್ದರು. ಸಿನಿಮಾ ಕಲೆ ಮತ್ತು ಗುಣಮಟ್ಟದ ವಿಷಯದಲ್ಲಿ ಅವರು ಮಗನನ್ನೂ ಬಿಟ್ಟಿರಲಿಲ್ಲ.
ಜಯಾ ಬಚ್ಚನ್ ಅವರು ಅಮಿತಾಬ್ ಬಚ್ಚನ್ ಅವರ ಜೀವನದ ಅತಿದೊಡ್ಡ ವಿಮರ್ಶಕಿ ಎಂದರೆ ತಪ್ಪಾಗಲಾರದು. ಬಿಗ್ ಬಿ ಅವರೇ ಹೇಳಿಕೊಂಡಿರುವಂತೆ, 1997ರಲ್ಲಿ ತೆರೆಕಂಡ ‘ಮೃತ್ಯುದಾತ’ ಚಿತ್ರದ ಪ್ರಥಮ ಪ್ರದರ್ಶನಕ್ಕೆ ಜಯಾ ಹೋಗಿದ್ದರು. ಆದರೆ ಸಿನಿಮಾ ಎಷ್ಟು ಕಳಪೆಯಾಗಿತ್ತೆಂದರೆ, ಅವರು ಅದನ್ನು ಪೂರ್ತಿ ನೋಡುವ ತಾಳ್ಮೆಯನ್ನೂ ಕಳೆದುಕೊಂಡರು. ಸಿನಿಮಾ ಅರ್ಧಕ್ಕಿರುವಾಗಲೇ ಸಿಟ್ಟಿನಿಂದ ಥಿಯೇಟರ್ನಿಂದ ಹೊರಬಂದಿದ್ದರು.
ವಿಶೇಷವೆಂದರೆ ‘ಮೃತ್ಯುದಾತ’ ಚಿತ್ರವನ್ನು ಅಮಿತಾಬ್ ಬಚ್ಚನ್ ಅವರ ಸ್ವಂತ ಸಂಸ್ಥೆ ‘ABCL’ ನಿರ್ಮಿಸಿತ್ತು. ಮೆಹುಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಡಿಂಪಲ್ ಕಪಾಡಿಯಾ, ಕರಿಷ್ಮಾ ಕಪೂರ್ ಅಂತಹ ದೊಡ್ಡ ತಾರಾಗಣವೇ ಇತ್ತು. ಆದರೂ ಜಯಾ ಬಚ್ಚನ್ ಆ ಚಿತ್ರವನ್ನು ‘ಕಸ’ ಎಂದು ಜರಿದಿದ್ದರು. ಅಂತಿಮವಾಗಿ ಅವರ ಮಾತು ನಿಜವಾಯಿತು ಮತ್ತು ಆ ಸಿನಿಮಾ ಆ ವರ್ಷದ ದೊಡ್ಡ ಸೋಲನ್ನು ಅನುಭವಿಸಿತು.
ಇದನ್ನೂ ಓದಿ: ಅವರು ಯಾರ ಮನೆ ಬೇಕಿದ್ದರೂ ಪ್ರವೇಶಿಸುವ ಇಲಿಗಳಂತೆ; ಜಯಾ ಬಚ್ಚನ್ ಕೋಪ ಯಾರ ಮೇಲೆ?
ಮನೆಯಲ್ಲಿರುವ ನಟರು ಎಷ್ಟೇ ದೊಡ್ಡ ಸೂಪರ್ಸ್ಟಾರ್ಗಳಾಗಿದ್ದರೂ, ನಟನೆಯ ಗುಣಮಟ್ಟ ಮತ್ತು ಚಿತ್ರದ ಕಥೆಯ ವಿಷಯದಲ್ಲಿ ಜಯಾ ಬಚ್ಚನ್ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರೀತಿಗಿಂತ ಕಲೆಗೆ ಅವರು ನೀಡುವ ಆದ್ಯತೆ ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 8:00 am, Fri, 15 May 26
