Headlines

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೊಸ ಹಾದಿ; ಮಂಜು ಮುಸುಕಿದರೂ ಇನ್ನು ವಿಮಾನ ಹಾರಾಟ ಫುಲ್ ಸೇಫ್! – Kannada News | KIA Airport Gets Smarter: New AI Safety System Enhances Airside Operations

ವಿಮಾನ ನಿಲ್ದಾಣ ಸುರಕ್ಷತೆ, AI ತಂತ್ರಜ್ಞಾನ

ಬೆಂಗಳೂರು, ಮೇ.6: ಇತ್ತೀಚಿನ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಪ್ರಯಾಣಿಕರ ಮತ್ತು ವಿಮಾನಗಳ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟಿದೆ. ವಿಮಾನಗಳು ಓಡಾಡುವ ಜಾಗದಲ್ಲಿ (ಏರ್‌ಸೈಡ್) ಭದ್ರತೆ ಹೆಚ್ಚಿಸಲು ‘ಸ್ಮಾರ್ಟ್ ಏರ್‌ಸೈಡ್ ಸೇಫ್ಟಿ ಸಿಸ್ಟಂʼ ಎಂಬ ಹೊಸ ತಂತ್ರಜ್ಞಾನವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್‌) ಜಾರಿಗೆ ತಂದಿದೆ.

ಅಪಾಯಕಾರಿ ಜಾಗದಲ್ಲಿ ಹೊಸ ಸುರಕ್ಷತಾ ವ್ಯವಸ್ಥೆ

ವಿಮಾನ ನಿಲ್ದಾಣದೊಳಗೆ ‘ಕ್ರಾಸ್ ಸರ್ವಿಸ್ ರಸ್ತೆ’ಗಳಿರುತ್ತವೆ. ಇಲ್ಲಿ ವಿಮಾನಗಳು ಮತ್ತು ಸಿಬ್ಬಂದಿಯ ವಾಹನಗಳು ಒಟ್ಟೊಟ್ಟಿಗೆ ಓಡಾಡುತ್ತಿರುತ್ತವೆ. ಹೀಗಾಗಿ ಇಲ್ಲಿ ಅಪಘಾತ ಆಗುವ ಸಾಧ್ಯತೆ ಇರುತ್ತದೆ. ಹಿಂದೆ, ಇಲ್ಲಿ ವಾಹನಗಳನ್ನು ನಿಯಂತ್ರಿಸುವ ಲೈಟ್‌ಗಳನ್ನು ಸಿಬ್ಬಂದಿಗಳೇ ಖುದ್ದಾಗಿ ಆನ್/ಆಫ್ ಮಾಡುತ್ತಿದ್ದರು. ಇದರಲ್ಲಿ ಕೆಲವೊಮ್ಮೆ ತಪ್ಪುಗಳಾಗಿ, ವಿಮಾನಗಳ ಹಾರಾಟ ತಡವಾಗುವ ಘಟನೆಗಳೂ ನಡೆಯುತ್ತಿದ್ದವು. ಇದನ್ನು ತಪ್ಪಿಸಲು ಈಗ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಎಐ ಕ್ಯಾಮೆರಾಗಳಿಂದ ನಿಗಾ

ಹೊಸ ವ್ಯವಸ್ಥೆಯು ಸ್ಮಾರ್ಟ್ ಕ್ಯಾಮೆರಾಗಳು ಮತ್ತು ಎಐ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಗುರುತಿಸಿ, ಏನಾದರೂ ಅಪಾಯ ಎದುರಾದರೆ ತಕ್ಷಣವೇ ಎಚ್ಚರಿಕೆ ನೀಡುತ್ತದೆ. ಯಾರಾದರೂ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲದೆ, ಪ್ರತಿಯೊಂದು ಸಣ್ಣ ಅಂಶವೂ ಕಂಪ್ಯೂಟರ್‌ನಲ್ಲಿ ಡಿಜಿಟಲ್ ರೂಪದಲ್ಲಿ ದಾಖಲಾಗುತ್ತದೆ. ಇದರಿಂದ ವಿಮಾನ ನಿಲ್ದಾಣದೊಳಗಿನ ಟ್ರಾಫಿಕ್‌ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಜೊತೆಗೆ ಕಾರ್ಯಕ್ಷಮತೆ ಹೆಚ್ಚಾಗಲಿದ್ದು, ನಿಖರ ಕಾರ್ಯಾಚರಣೆಯೂ ಸಾಧ್ಯವಾಗಲಿದೆ.

ಕತ್ತಲು, ಮಂಜಿನಲ್ಲೂ ವಿಮಾನ ನಿಲ್ದಾಣ ಫುಲ್‌ ಸೇಫ್‌!

ಈ ಹೊಸ ತಂತ್ರಜ್ಞಾನವು ವಿಮಾನ ಹಾಗೂ ವಾಹನಗಳ ನಡುವೆ ಒಂದು ಸುರಕ್ಷಿತ ಅಂತರವನ್ನು ನಿರ್ವಹಿಸುತ್ತದೆ. ಇದರಿಂದ ರಾತ್ರಿ ವೇಳೆ ಅಥವಾ ಮಂಜು ಮುಸುಕಿ ಕಡಿಮೆ ಗೋಚರತೆ ಇದ್ದಾಗ ಮನುಷ್ಯರಿಂದ ನಡೆಯುವ ತಪ್ಪುಗಳು ತಪ್ಪಲಿವೆ. ಟ್ರಾಫಿಕ್ ಜಾಮ್ ಇಲ್ಲದೆ ವಿಮಾನಗಳು ಸರಿಯಾದ ಸಮಯಕ್ಕೆ ಹಾರಾಟ ನಡೆಸಲು ಇದು ಸಹಾಯ ಮಾಡಲಿದೆ. ಮುಂದಿನ ದಿನಗಳಲ್ಲಿ ಈ ಮಾಹಿತಿಯನ್ನು ಬಳಸಿಕೊಂಡು ವಿಮಾನ ನಿಲ್ದಾಣದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲೂ ಯೋಜನೆ ರೂಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ನಾಳೆಯಿಂದ ಮಂಗಳೂರಿನ ಜನ ಕೂಲ್​ ಕೂಲ್: ದಕ್ಷಿಣ ಕನ್ನಡ ಮತ್ತು ಉಡುಪಿಯ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಬಿಐಎಎಲ್‌ನಿಂದ ದಾಖಲೆ ಸಂಖ್ಯೆಯ ಪ್ರಯಾಣಿಕರಿಗೆ ಸೇವೆ

2024–25ನೇ ವರ್ಷದಲ್ಲಿ ಬಿಐಎಎಲ್‌ 4.18 ಕೋಟಿಗೂ ಹೆಚ್ಚು ಜನರಿಗೆ ಸೇವೆ ನೀಡಿದ್ದು, ದಕ್ಷಿಣ ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿರುವ ಕೆಐಎ ಮೂಲಕ ಈವರೆಗೆ 35 ಕೋಟಿಗೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ.

ಗ್ರಾಹಕರಿಗೆ ನೀಡುವ ಅತ್ಯುತ್ತಮ ಸೇವೆಗಾಗಿ ಜಾಗತಿಕ ಮಟ್ಟದ ಪ್ರತಿಷ್ಠಿತ ‘ಎಸಿಐ 5-ಸ್ಟಾರ್ ಏರ್‌ಪೋರ್ಟ್ ರೇಟಿಂಗ್’ ಅನ್ನು ಪಡೆದುಕೊಂಡಿರುವ ನಿಲ್ದಾಣವು, ಹಣ್ಣು, ತರಕಾರಿಯಂತಹ ಬೇಗ ಕೊಳೆಯುವ ವಸ್ತುಗಳ ಸಾಗಣೆಯಲ್ಲಿ ಸತತ 4ನೇ ವರ್ಷವೂ ಭಾರತದ ನಂ. 1 ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:03 pm, Tue, 5 May 26

Source link

Leave a Reply

Your email address will not be published. Required fields are marked *