ಏಪ್ರಿಲ್ 30ರಂದು ‘ಕೆಡಿ’ ಸಿನಿಮಾ (KD Movie) ರಿಲೀಸ್ ಆಗಲಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಅವರು ಮಾತನಾಡಿದರು. ‘ಕೆಡಿ ಸಿನಿಮಾ ಹೀರೋ ಯಾರು ಎಂದರೆ ಧ್ರುವ ಅಲ್ಲ, ಪ್ರೇಮ್ ಅಲ್ಲ, ರವಿಚಂದ್ರನ್ ಅಲ್ಲ, ರಮೇಶ್ ಅಲ್ಲ. ಅದು ಕೆವಿಎನ್ ಸರ್ ಮಾತ್ರ’ ಎಂದು ಪ್ರೇಮ್ ಹೇಳಿದ್ದಾರೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾ ಅದ್ದೂರಿಯಾಗಿ ಮೂಡಿಬರಲು ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಗೆ ಚಿತ್ರದ ಮೇಲಿರುವ ಪ್ಯಾಷನ್ ಕಾರಣ ಎಂದು ಅವರು ಹೇಳಿದರು.
‘ನನ್ನ ಸಿನಿಮಾಗೆ ಸಂಗೀತ ನಿರ್ದೇಶಕರೇ ಹೀರೋ ಅಂತ ನಾನು ಯಾವಾಗಲೂ ಹೇಳುತ್ತಿದ್ದೆ. ಆದರೆ ಈಗ ಕೆಡಿ ಸಿನಿಮಾಗೆ ನಿಜವಾಗಿಯೂ ಕೆವಿಎನ್ (ವೆಂಕಟ್ ಕೆ. ನಾರಾಯಣ್) ಸರ್ ಹೀರೋ. ಪ್ರತಿ ನಿರ್ಮಾಪಕರಿಗೆ ಒಂದು ಬಜೆಟ್ನ ಮಿತಿ ಇರುತ್ತದೆ. ಒಂದು ವರ್ಷದಲ್ಲಿ ಸಿನಿಮಾ ಮುಗಿಸಿ ರಿಲೀಸ್ ಮಾಡಬೇಕು ಎಂಬ ಲೆಕ್ಕಾಚಾರ ಇರುತ್ತದೆ. ಎಲ್ಲ ನಿರ್ಮಾಪಕರ ಆಸೆ ಇದೇ ಆಗಿರುತ್ತದೆ. ಯಾಕೆಂದರೆ, ಬಂಡವಾಳ ಹಾಕುವ ಎಲ್ಲರೂ ಅದೇ ರೀತಿ ಯೋಚನೆ ಮಾಡುತ್ತಾರೆ. ಆದರೆ ಕೆವಿಎನ್ ಅವರಿಗೆ ಅದಕ್ಕಿಂತ ಹೆಚ್ಚಾಗಿ ಪ್ಯಾಷನ್ ಇದೆ’ ಎಂದು ಜೋಗಿ ಪ್ರೇಮ್ ಹೇಳಿದರು.
‘ಸಿನಿಮಾದ ಯಾವುದೇ ಕಂಟೆಂಟ್ ಅವರಿಗೆ ಕಳಿಸಿದರೂ ಇನ್ನೂ ಏನಾದರೂ ಚೆನ್ನಾಗಿ ಮಾಡಬಹುದಾ ನೋಡಿ ಅಂತ ಹುರಿದುಂಬಿಸುತ್ತಾರೆ. ತಮ್ಮ ಕೆಲಸಗಳ ನಡುವೆಯೂ ಅದನ್ನೆಲ್ಲ ನೋಡಿ ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಇಷ್ಟು ಬೆಂಬಲ ನೀಡುವ ಈ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡದು. ಸಾವಿರಾರು ಜನರಿಗೆ ಅನ್ನ ಹಾಕಿದ್ದಾರೆ. ಹೀಗೆಯೇ ಈ ಸಂಸ್ಥೆ ದೊಡ್ಡದಾಗಿ ಬೆಳೆಯಲಿ ಅಂತ ನಾನು ಆಶಿಸುತ್ತೇನೆ’ ಎಂದಿದ್ದಾರೆ ಪ್ರೇಮ್.
ಇದನ್ನೂ ಓದಿ: ‘ಕೆಡಿ’ ಸಿನಿಮಾ ಟ್ರೇಲರ್ ಬಿಡುಗಡೆ; ಧ್ರುವ ಸರ್ಜಾ, ಸಂಜಯ್ ದತ್ ಆ್ಯಕ್ಷನ್ ಅಬ್ಬರ
ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್ ಆಗಿವೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಟ್ರೇಲರ್ನಲ್ಲಿ ಕ್ರೌರ್ಯ ಕಾಣಿಸಿದೆ. ಆದರೂ ಇದೊಂದು ಫ್ಯಾಮಿಲಿ ಎಂಟರ್ಟೇನರ್ ಸಿನಿಮಾ ಎಂದು ಧ್ರುವ ಸರ್ಜಾ ಅವರು ಹೇಳಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
