ಈ ಹಿಂದೆ 2021-22 ರಲ್ಲಿ ‘ಸಖತ್’, ‘ಬೈ ಟು ಲವ್’ ಅಂಥಹಾ ಸಾಮಾನ್ಯ ಬಜೆಟ್ನ ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದ ಕೆವಿಎನ್ ನಿರ್ಮಾಣ ಸಂಸ್ಥೆ ಎರಡನೇ ಇನ್ನಿಂಗ್ಸ್ ಅನ್ನು ಭಾರಿ ಉತ್ಸಾಹದಿಂದ ಆರಂಭಿಸಿತ್ತು. ಭಾರತದ ಇಬ್ಬರು ಅತಿ ದೊಡ್ಡ ಸ್ಟಾರ್ ನಟರ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಂಡವಾಳ ಹೂಡಿತು, ಆದರೆ ಕೆವಿಎನ್ ಅದೃಷ್ಟ ಕೈಕೊಟ್ಟು, ಎರಡೂ ಸಿನಿಮಾಗಳ ಬಿಡುಗಡೆ ಮುಂದೂಡಲ್ಪಟ್ಟಿದೆ. ಒಂದು ಸಿನಿಮಾದ ಬಿಡುಗಡೆಯೇ ಅಡಕತ್ತರಿಯಲ್ಲಿ ಸಿಲುಕಿದೆ.
2022 ರಲ್ಲಿ ‘ಬೈ ಟು ಲವ್’ ಸಿನಿಮಾ ನಿರ್ಮಿಸಿದ್ದ ಕೆವಿನ್ ಆ ಬಳಿಕ ಅಚಾನಕ್ಕಾಗಿ ದೊಡ್ಡ ಸಿನಿಮಾಗಳತ್ತ ಹೊರಳಿತು. ನಿರ್ಮಾಪಕ ವೆಂಕಟ್ ಅವರು ಕೆಲವೇ ತಿಂಗಳುಗಳ ಅಂತರದಲ್ಲಿ ಯಶ್ ಅವರೊಟ್ಟಿಗೆ ‘ಟಾಕ್ಸಿಕ್’ ಸಿನಿಮಾ ಮತ್ತು ದಳಪತಿ ವಿಜಯ್ ಅವರೊಟ್ಟಿಗೆ ‘ಜನ ನಾಯಗನ್’ ಸಿನಿಮಾ ಘೋಷಿಸಿದರು. ಒಟ್ಟಿಗೆ ಇಬ್ಬರು ಸೂಪರ್ ಸ್ಟಾರ್ ನಟರ ಬಹುದೊಡ್ಡ ಸಿನಿಮಾಗಳನ್ನು ನಿರ್ಮಾಣಕ್ಕೆ ಏಕಕಾಲದಲ್ಲಿ ಕೈಹಾಕಿದ್ದು ಅತ್ಯಂತ ಸಾಹಸಮಯ ನಿರ್ಧಾರವಾಗಿತ್ತು.
ಆದರೆ ಆ ಸವಾಲವನ್ನು ಸೂಕ್ತವಾಗಿ ಕೆವಿಎನ್ ನಿಭಾಯಿಸಿತಾದರೂ ಅದೃಷ್ಟ ಅವರಿಗೆ ಸಾಥ್ ನೀಡಿಲ್ಲ. ‘ಜನ ನಾಯಗನ್’ ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ ಎನ್ನುವಾಗ ರಾಜಕೀಯ ತಂತ್ರಗಳಿಗೆ ಸಿಲುಕಿ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಯ್ತು. ಕೆವಿಎನ್ ಅವರು ನ್ಯಾಯಾಲಯದ ಮೆಟ್ಟಿಲೇರಿದರೂ ಸಹ ಅವರಿಗಿನ್ನೂ ನ್ಯಾಯ ದೊರಕಿಲ್ಲ. ತಮಿಳುನಾಡು ಚುನಾವಣೆ ಮುಗಿವ ವರೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಜನ ನಾಯಗನ್’ ಬಿಡುಗಡೆ ವಿಳಂಬ ಆಗಿರುವುದರಿಂದ ಕೆವಿಎನ್ಗೆ ದೊಡ್ಡ ನಷ್ಟವೇ ಆಗಿದೆ.
ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು?
‘ಜನ ನಾಯಗನ್’ ವಿಳಂಬವಾದರೂ ‘ಟಾಕ್ಸಿಕ್’ ಸಿನಿಮಾ ಮೇಲೆ ಕೆವಿಎನ್ಗೆ ಬಹಳ ವಿಶ್ವಾಸವಿತ್ತು. ಮಾರ್ಚ್ 19ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಇದೀಗ ಹಠಾತ್ತನೆ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ. ಇಸ್ರೇಲ್-ಅಮರಿಕ ಮತ್ತು ಇರಾನ್ ದೇಶಗಳ ನಡುವೆ ಉಂಟಾಗಿರುವ ಯುದ್ಧ ರೀತಿ ಪರಿಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಇದು ಕೆವಿಎನ್ ನಿರ್ಮಾಣ ಸಂಸ್ಥೆಗೆ ಮತ್ತೊಂದು ದೊಡ್ಡ ಹೊಡೆತವನ್ನೇ ನೀಡಿದಂತಿದೆ.
ಕೆವಿಎನ್ ಅವರು ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಕ್ಕೂ ಸಹ ಬಂಡವಾಳ ಹೂಡಿದ್ದು, ಆ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡಲಿದ್ದಾರೆ. ಪ್ರೇಮ್-ದರ್ಶನ್ ಕಾಂಬಿನೇಷನ್ನ ಹೊಸ ಸಿನಿಮಾಕ್ಕೂ ಕೆವಿಎನ್ ಬಂಡವಾಳ ಹೂಡಬೇಕಿತ್ತು, ಆದರೆ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಇದೀಗ ‘ಜನ ನಾಯಗನ್’, ‘ಟಾಕ್ಸಿಕ್’ ಎರಡೂ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿದ್ದು, ‘ಕೆಡಿ’ ಬಿಡುಗಡೆಯೂ ಮುಂದೂಡಲ್ಪಡುತ್ತಾ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
