ಕೆಸಿಇಟಿ ಪರೀಕ್ಷೆಯಲ್ಲೂ ‘ನೀಟ್’ ಮಾದರಿ ಹಗರಣ?
ಹುಬ್ಬಳ್ಳಿ, ಮೇ 16: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಕೃಷಿ ವಿಜ್ಞಾನ ಕೋರ್ಸ್ಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಹುಬ್ಬಳ್ಳಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಮಟ್ಟದ ‘ನೀಟ್’ (NEET) ಪರೀಕ್ಷೆಯ ಹಗರಣದ ಮಾದರಿಯಲ್ಲೇ ರಾಜ್ಯದ ಕೆಸಿಇಟಿ (KCET) ಪ್ರಾಯೋಗಿಕ ಪರೀಕ್ಷೆಯಲ್ಲೂ ಬೃಹತ್ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಲಾಗಿದ್ದು, ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ.
ಮುಖ್ಯಾಂಶಗಳು
- ಕೆಸಿಇಟಿ ಕೃಷಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ.
- ಹಿರಿಯೂರು ಕೇಂದ್ರದ ಎಪ್ಪತ್ತನಾಲ್ಕು ವಿದ್ಯಾರ್ಥಿಗಳಿಗೆ ಇನ್ನೂರಕ್ಕೆ ಇನ್ನೂರು ಪೂರ್ಣ ಅಂಕಗಳು ಲಭ್ಯ.
- ನೀಟ್ ಮಾದರಿ ಹಗರಣ ಶಂಕೆ; ಮರುಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳಿಂದ ತೀವ್ರ ಆಗ್ರಹ.
ಏನಿದು ಅಕ್ರಮ?
ಕೃಷಿ ವಿಜ್ಞಾನ ಕೋರ್ಸ್ಗಳ ಆಯ್ಕೆಗಾಗಿ ಮೇ 10ರಂದು ರಾಜ್ಯಾದ್ಯಂತ ಒಟ್ಟು 17 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪರೀಕ್ಷಾ ಕೇಂದ್ರವೊಂದರಲ್ಲೇ ಬರೋಬ್ಬರಿ 74 ವಿದ್ಯಾರ್ಥಿಗಳು 200ಕ್ಕೆ 200 ಪೂರ್ಣ ಅಂಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದ ಇನ್ನುಳಿದ 16 ಪರೀಕ್ಷಾ ಕೇಂದ್ರಗಳನ್ನು ಒಟ್ಟಾಗಿ ಸೇರಿಸಿದರೂ ಕೇವಲ 24 ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಲು ಸಾಧ್ಯವಾಗಿದೆ. ಒಂದೇ ಕೇಂದ್ರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ ಬಂದಿರುವುದು ಪರೀಕ್ಷಾ ಅಕ್ರಮ ನಡೆದಿರುವುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಪೋಷಕರು ದೂರಿದ್ದಾರೆ.
ಪರೀಕ್ಷಾ ವಿಧಾನ ಮತ್ತು ಮೀಸಲಾತಿ
ರಾಜ್ಯದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಕೃಷಿ ವಿಜ್ಞಾನ ಕೋರ್ಸ್ಗಳಲ್ಲಿ ಶೇಕಡಾ 50 ರಷ್ಟು ಸೀಟುಗಳನ್ನು ಮೀಸಲಾಗಿಡಲಾಗಿದೆ. ಈ ವಿಶೇಷ ಸೀಟುಗಳ ಹಂಚಿಕೆಗಾಗಿಯೇ ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. 17 ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಪರೀಕ್ಷೆಯಲ್ಲಿ ತೋಟಗಾರಿಕೆ, ಕೃಷಿ, ಹೈನುಗಾರಿಕೆಗೆ ಸಂಬಂಧಿಸಿದ ವಿವಿಧ ಬೀಜಗಳು, ಗಿಡಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಇಡಲಾಗಿರುತ್ತದೆ. ಅಭ್ಯರ್ಥಿಗಳು ಅವುಗಳನ್ನು ಭೌತಿಕವಾಗಿ ನೋಡಿ ಗುರುತಿಸಿ ಉತ್ತರ ಬರೆಯಬೇಕು. ಪ್ರತಿಯೊಂದು ಕೇಂದ್ರಕ್ಕೂ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತದೆ. ಇಂತಹ ಪರೀಕ್ಷೆಯಲ್ಲಿ ಹಿರಿಯೂರು ಕೇಂದ್ರದಲ್ಲಿ ಮಾತ್ರ ಇಷ್ಟೊಂದು ಗರಿಷ್ಠ ಅಂಕಗಳು ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಮರುಪರೀಕ್ಷೆಗೆ ಹೆಚ್ಚಿದ ಒತ್ತಾಯ
ಒಂದೆಡೆ ಅಂಕಗಳ ಹಗರಣ ನಡೆದಿದ್ದರೆ, ಮತ್ತೊಂದೆಡೆ ಪರೀಕ್ಷೆ ಬರೆಯಲು ಅರ್ಹರಿದ್ದ ಹಲವು ವಿದ್ಯಾರ್ಥಿಗಳಿಗೆ ಕೆಸಿಇಟಿ ಹಾಲ್ ಟಿಕೆಟ್ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವೂ ಕೇಳಿಬಂದಿದೆ. ಕೆಸಿಇಟಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದಾಗಿ ಹಗಲಿರುಳು ಕಷ್ಟಪಟ್ಟು ಓದಿದ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ನಡೆದಿರುವ ಪರೀಕ್ಷೆಯನ್ನು ತಕ್ಷಣವೇ ರದ್ದುಗೊಳಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಕೂಡಲೇ ಮರುಪರೀಕ್ಷೆ (Re-exam) ನಡೆಸಬೇಕೆಂದು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ಸಮೂಹ ತೀವ್ರ ಒತ್ತಾಯಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
