ಕೇಂದ್ರ ಸಂಸ್ಕೃತ ವಿವಿಯಿಂದ ಸ್ವಾಮಿ ಭದ್ರೇಶದಾಸ್ಗೆ ‘ವೇದಾಂತವಿದ್ಯಾ-ವಿಶ್ವಗುರು’ ಬಿರುದು ಪ್ರದಾನImage Credit source: Central Sanskrit University
ನವದೆಹಲಿ, ಆಗಸ್ಟ್ 10: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು (Central Sanskrit University) ಬಿಎಪಿಎಸ್ನ ಖ್ಯಾತ ವಿದ್ವಾಂಸ ಹಾಗೂ ತತ್ವಜ್ಞಾನಿ ಮಹಾಮಹೋಪಾಧ್ಯಾಯ ಸ್ವಾಮಿ ಭದ್ರೇಶದಾಸ್ (Swami Bhadreshdas) ಅವರಿಗೆ ‘ವೇದಾಂತವಿದ್ಯಾ-ವಿಶ್ವಗುರು (Vedantavidya-Vishwaguru)’ ಎಂಬ ಗೌರವ ಬಿರುದನ್ನು ಪ್ರದಾನ ಮಾಡಿದೆ. ಆಗಸ್ಟ್ 9ರಂದು ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮದಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವ ನೀಡಲಾಯಿತು. ಸ್ವಾಮಿ ಭದ್ರೇಶದಾಸ್ ಅವರು ವೇದಾಂತದ ಮೂರು ಪ್ರಮುಖ ಆಧಾರ ಗ್ರಂಥಗಳಾದ ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಭಗವದ್ಗೀತೆಗಳಿಗೆ ಶಾಸ್ತ್ರೀಯ ಸಂಸ್ಕೃತ ಭಾಷ್ಯಗಳನ್ನು ರಚಿಸಿದ್ದಾರೆ. ಈ ಮೂರು ಗ್ರಂಥಗಳನ್ನು ಒಟ್ಟಾಗಿ ‘ಪ್ರಸ್ಥಾನತ್ರಯ’ ಎಂದು ಕರೆಯಲಾಗುತ್ತದೆ. ಪ್ರಸ್ಥಾನತ್ರಯದ ಮೂರೂ ಆಧಾರಗಳಿಗೂ ಸಂಪೂರ್ಣ ಸಂಸ್ಕೃತ ಭಾಷ್ಯ ರಚಿಸಿರುವುದು ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ.
ಪ್ರಮುಖ್ ಸ್ವಾಮಿ ಮಹಾರಾಜರ ಪ್ರೇರಣೆಯಿಂದ ಈ ಕಾರ್ಯವನ್ನು ಕೈಗೊಂಡಿರುವ ಸ್ವಾಮಿ ಭದ್ರೇಶದಾಸ್, ಮಹಾಂತ ಸ್ವಾಮಿ ಮಹಾರಾಜರ ಮಾರ್ಗದರ್ಶನದಲ್ಲಿ ಸಂಸ್ಕೃತ, ವೇದಾಂತ ಹಾಗೂ ಭಾರತೀಯ ಜ್ಞಾನ ಪರಂಪರೆಯ ಅಧ್ಯಯನ ಮತ್ತು ಜಾಗತಿಕ ಮಟ್ಟದ ಪ್ರಸಾರಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗೌರವ ಪ್ರದಾನ ಸಮಾರಂಭದಲ್ಲಿ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರ್ಖೇಡಿ, ಶ್ರೀ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುಕಾಂತ ಕುಮಾರ್ ಸೇನಾಪತಿ ಸೇರಿದಂತೆ ಹಲವು ಗಣ್ಯ ಸಂಸ್ಕೃತ ವಿದ್ವಾಂಸರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ವಿದ್ವಾಂಸರು ಸ್ವಾಮಿ ಭದ್ರೇಶದಾಸ್ ಅವರ ಸಂಸ್ಕೃತ ಮತ್ತು ವೇದಾಂತ ಕ್ಷೇತ್ರದ ಕೊಡುಗೆಯನ್ನು ಶ್ಲಾಘಿಸಿದರು. ಪ್ರೊ. ಶ್ರೀನಿವಾಸ ವರ್ಖೇಡಿ ಅವರು ಸಂಸ್ಕೃತ ಪ್ರಸ್ಥಾನತ್ರಯ ಪರಂಪರೆಯಲ್ಲಿ ಅಕ್ಷರ-ಪುರುಷೋತ್ತಮ ದರ್ಶನಕ್ಕೆ ಶಾಸ್ತ್ರೀಯ ಚೌಕಟ್ಟು ರೂಪಿಸುವಲ್ಲಿ ಸ್ವಾಮಿ ಭದ್ರೇಶದಾಸ್ ಅವರ ಕೊಡುಗೆಯನ್ನು ಉಲ್ಲೇಖಿಸಿದರು.
ಪ್ರೊ. ಸುಕಾಂತ ಕುಮಾರ್ ಸೇನಾಪತಿ ಮಾತನಾಡಿ, ಸ್ವಾಮಿ ಭದ್ರೇಶದಾಸ್ ಅವರ ವಿದ್ವತ್ ಪಯಣದಲ್ಲಿ ಪ್ರಮಖ್ ಸ್ವಾಮಿ ಮಹಾರಾಜರು ಮತ್ತು ಮಹಾಂತ ಸ್ವಾಮಿ ಮಹಾರಾಜರು ನೀಡಿದ ಆಶೀರ್ವಾದ ಹಾಗೂ ಮಾರ್ಗದರ್ಶನದ ಮಹತ್ವವನ್ನು ವಿವರಿಸಿದರು. ಪ್ರೊ. ವಿ. ನಾರಾಯಣನ್ ಅವರು ಅಧಿಕೃತ ಗೌರವ ಪತ್ರವನ್ನು ವಾಚಿಸಿದರು.
ಇದನ್ನೂ ಓದಿ: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯುಜಿಸಿ ಗುಡ್ನ್ಯೂಸ್; ವರ್ಷಕ್ಕೆ 1.5 ಲಕ್ಷ ರೂ. ವಿದ್ಯಾರ್ಥಿವೇತನ!
ಗೌರವ ಸ್ವೀಕರಿಸಿದ ಸ್ವಾಮಿ ಭದ್ರೇಶದಾಸ್, ಈ ವಿಶೇಷ ಮಾನ್ಯತೆಯನ್ನು ಭಗವಾನ್ ಸ್ವಾಮಿನಾರಾಯಣ ಹಾಗೂ ತಮ್ಮ ಗುರುಗಳಾದ ಪ್ರಮಖ್ ಸ್ವಾಮಿ ಮಹಾರಾಜ ಮತ್ತು ಮಹಾಂತ ಸ್ವಾಮಿ ಮಹಾರಾಜರ ಪಾದಗಳಿಗೆ ಸಮರ್ಪಿಸುವುದಾಗಿ ತಿಳಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
