ಪುಣೆ, ಜುಲೈ 05: ತೀವ್ರ ಭಾವನಾತ್ಮಕ ಆಘಾತ ಮನುಷ್ಯನ ಜೀವಕ್ಕೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಪುಣೆಯ ಉದ್ಯಮಿ ಕುಟುಂಬದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಜೂನ್ 18ರಂದು ಅನುಮಾನಾಸ್ಪದವಾಗಿ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಮೃತಪಟ್ಟ ಕೇವಲ 16 ದಿನಗಳ ಅಂತರದಲ್ಲಿ, ಅವರ ಅಜ್ಜ ದೇವಿಚಂದ್ ಅಗರ್ವಾಲ್ (71) ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೊಮ್ಮಗನ ಅಕಾಲಿಕ ಸಾವಿನ ಆಘಾತವನ್ನು ತಡೆಯಲಾರದೆ ಅವರು ಮೃತಪಟ್ಟಿರುವುದು ಇಡೀ ಕುಟುಂಬವನ್ನು ಮತ್ತಷ್ಟು ಕಣ್ಣೀರಿನಲ್ಲಿ ಮುಳುಗಿಸಿದೆ.
‘ಬ್ರೋಕನ್ ಹಾರ್ಟ್ ಸಿಂಡ್ರೋಮ್’ಗೆ ಬಲಿಯಾದ ಅಜ್ಜ
ಕುಟುಂಬದ ಸದಸ್ಯರ ಪ್ರಕಾರ, ಮೊಮ್ಮಗ ಕೇತನ್ ಅಗರ್ವಾಲ್ ನಿಧನರಾದ ದಿನದಿಂದಲೂ 71 ವರ್ಷದ ದೇವಿಚಂದ್ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇತ್ತೀಚೆಗಷ್ಟೇ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪ್ರೀತಿಯ ಮೊಮ್ಮಗ ಇನ್ನು ನೆನಪು ಮಾತ್ರ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಅವರು, ವೈದ್ಯಕೀಯ ಭಾಷೆಯಲ್ಲಿ ‘ಬ್ರೋಕನ್ ಹಾರ್ಟ್ ಸಿಂಡ್ರೋಮ್’ ಎಂಬ ಸ್ಥಿತಿಗೆ ತಲುಪಿದ್ದರು. ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶನಿವಾರ ರಾತ್ರಿ 9.45 ಕ್ಕೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದೇವಿಚಂದ್ ಅವರ ನಿಧನದ ನಂತರ ಅವರ ಪುತ್ರ ವಿಶಾಲ್ ಅಗರ್ವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಿಸ್ ಯು ಡ್ಯಾಡ್ ಎಂದು ಬರೆದು ತಮ್ಮ ತಂದೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮತ್ತಷ್ಟು ಓದಿ: ಕೇತನ್ ಅಗರ್ವಾಲ್ ಕೊಲೆ ಪ್ರಕರಣ; ಸಿಯಾ ಗೋಯಲ್, ಚೇತನ್ ಜುಲೈ 3ರವರೆಗೆ ಪೊಲೀಸ್ ವಶಕ್ಕೆ
ಕೇತನ್ ಸಾವು: ಅಪಘಾತವೋ? ಕೊಲೆಯೋ?
ಜೂನ್ 18, 2026 ರಂದು ಪುಣೆಯ ಲೋಹಗಢ ಕೋಟೆಯಿಂದ ಬಿದ್ದು ಕೇತನ್ ಅಗರ್ವಾಲ್ ಸಾವನ್ನಪ್ಪಿದ್ದರು. ಆರಂಭದಲ್ಲಿ ಇದನ್ನು ಕೇವಲ ಒಂದು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ, ದಿನ ಕಳೆದಂತೆ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು, ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಇತರರು ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಈ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದೆ.
ಒಂದೆಡೆ ಕೈಗೆ ಬಂದಿದ್ದ ಮಗನ ನಿಗೂಢ ಸಾವು, ಮತ್ತೊಂದೆಡೆ ಹಿರಿಯ ಜೀವದ ವಿಯೋಗ ಹೀಗೆ ಕೇವಲ ಎರಡು ವಾರಗಳ ಅಂತರದಲ್ಲಿ ಇಬ್ಬರು ಪ್ರೀತಿಪಾತ್ರರನ್ನು ಕಳೆದುಕೊಂಡ ಅಗರ್ವಾಲ್ ಕುಟುಂಬದ ದುಃಖವನ್ನು ನೋಡಿ ಇಡೀ ಪುಣೆ ನಗರವೇ ಕಂಬನಿ ಮಿಡಿಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಜನರು ಈ ದುರಂತಕ್ಕೆ ಸಂತಾಪ ಸೂಚಿಸುತ್ತಿದ್ದು, ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
