ಪುಣೆ, ಜುಲೈ 02: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಭೀಕರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅತ್ಯಂತ ಆಘಾತಕಾರಿ ಸತ್ಯವೊಂದು ತಿಳಿದುಬಂದಿದೆ. ಕೇತನ್ನನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡುವ ಮುನ್ನ, ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಪ್ರಿಯಕರ ಚೇತನ್ ಚೌಧರಿ ಸೇರಿ ಬೆಟ್ಟದ ಮೇಲೆ ಭೀಕರ ‘ಕೊಲೆ ಪೂರ್ವಾಭ್ಯಾಸ’ (Murder Rehearsal) ನಡೆಸಿದ್ದರು ಎಂದು ಪುಣೆ ಪೊಲೀಸರು ದೃಢಪಡಿಸಿದ್ದಾರೆ.
ಆರೋಪಿಗಳಿಬ್ಬರು ಪುಣೆಯ ಲೋಹಗಡ್ ಕೋಟೆಯ ಕಡಿದಾದ ಬಂಡೆಯಿಂದ ಕೇತನ್ನನ್ನು ಕೆಳಗೆ ತಳ್ಳಿ ಹತ್ಯೆ ಮಾಡಿದ್ದರು. ಪೊಲೀಸರ ವಿಚಾರಣೆಯ ವೇಳೆ, ಕೇತನ್ನನ್ನು ಬೆಟ್ಟದಿಂದ ಹೇಗೆ ತಳ್ಳಬೇಕು ಎಂಬುದನ್ನು ಈ ಇಬ್ಬರು ಆರೋಪಿಗಳು ಪುಣೆಯ ಲುಲ್ಲಾ ನಗರದ ಕ್ಲಬ್ ಬಳಿಯ ತೆರೆದ ಬೆಟ್ಟದ ಪ್ರದೇಶದಲ್ಲಿ ಮುಂಚಿತವಾಗಿಯೇ ತಾಲೀಮು ನಡೆಸಿದ್ದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಪೊಲೀಸರು ಪ್ರಮುಖ ಆರೋಪಿ ಸಿಯಾಳನ್ನು ಆಕೆ ಪೂರ್ವಾಭ್ಯಾಸ ನಡೆಸಿದ್ದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಪ್ರಸ್ತುತ ಇಬ್ಬರೂ ಆರೋಪಿಗಳು ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ಇಬ್ಬರೂ ಪ್ರೇಮಿಗಳಾಗಿದ್ದರು. ಆದರೆ ಸಿಯಾಳಿಗೆ ಕೇತನ್ ಅಗರ್ವಾಲ್ ಜೊತೆ ಮದುವೆ ನಿಶ್ಚಯವಾಗಿತ್ತು.
ಮತ್ತಷ್ಟು ಓದಿ: ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!
ಮದುವೆಗೆ ಅಡ್ಡಿಯಾಗುತ್ತಿದ್ದ ಕೇತನ್ನನ್ನು ಮುಗಿಸಲು ಸ್ಕೆಚ್ ಹಾಕಿದ ಈ ಜೋಡಿ, ಆತನನ್ನು ಪುಣೆಯ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಡ್ ಕೋಟೆಗೆ ಕರೆದೊಯ್ದಿತ್ತು. ಅಲ್ಲಿ ಕೋಟೆಯ ಕಡಿದಾದ ಬಂಡೆಯ ತುದಿಯಿಂದ ಕೇತನ್ನನ್ನು ಕೆಳಗೆ ತಳ್ಳಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಇದು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಲಾಗಿದ್ದರೂ, ಪೊಲೀಸರ ಚಾಣಾಕ್ಷ ತನಿಖೆಯಿಂದ ಇದು ವ್ಯವಸ್ಥಿತ ಕೊಲೆ ಎಂಬುದು ಪತ್ತೆಯಾಗಿತ್ತು.
ಬಂಧಿತ ಆರೋಪಿಗಳನ್ನು ಕಠಿಣ ವಿಚಾರಣೆಗೆ ಒಳಪಡಿಸಿದಾಗ ಅವರು ನೀಡಿರುವ ಜಾತಕ ಇಡೀ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಕೇತನ್ನನ್ನು ಬೆಟ್ಟದಿಂದ ಹೇಗೆ ತಳ್ಳಬೇಕು, ಎಷ್ಟು ಬಲ ಪ್ರಯೋಗಿಸಬೇಕು ಮತ್ತು ಯಾವ ಕೋನದಲ್ಲಿ ತಳ್ಳಿದರೆ ಆತ ಬದುಕುಳಿಯುವುದಿಲ್ಲ ಎಂಬುದನ್ನು ಈ ಇಬ್ಬರು ಪಾತಕಿಗಳು ಬೆಟ್ಟದ ಪ್ರದೇಶದಲ್ಲಿ ಮುಂಚಿತವಾಗಿಯೇ ತಾಲೀಮು ನಡೆಸಿದ್ದರು.
ಕೇತನ್ನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿಡುತ್ತಿದ್ದು, ಸದ್ಯ ನ್ಯಾಯಾಲಯವು ಇಬ್ಬರೂ ಆರೋಪಿಗಳನ್ನು ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಘೋರ ಪಿತೂರಿಯ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಇಬ್ಬರ ಮೊಬೈಲ್ ಚಾಟ್ಗಳ ವಿವರಗಳನ್ನು ಕಲೆಹಾಕಲು ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
