ಬಾಲಿವುಡ್ನ ವಿವಾದಿತ ಹಾಗೂ ಪ್ರತಿಭಾವಂತ ನಟಿ ಕಂಗನಾ ರಣಾವತ್ (Kangana Ranaut) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಭಾರತ ಭಾಗ್ಯವಿಧಾತ’ ಸಿನಿಮಾ ಜೂನ್ 12ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಆದರೆ, ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದ ಆರಂಭ ಸಿಕ್ಕಿಲ್ಲ. ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನವೇ ಸಿನಿಮಾ ಕಲೆಕ್ಷನ್ ಮಾಡಲು ತೀವ್ರವಾಗಿ ಪರದಾಡಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದ್ದು, ಸಿನಿಮಾ ಮೊದಲ ದಿನವೇ ಡಿಸಾಸ್ಟರ್ ಹಾದಿ ಹಿಡಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮೊದಲ ದಿನದ ಕಲೆಕ್ಷನ್ ವಿವರ:
ಚಿತ್ರದ ಗಳಿಕೆಯ ಬಗ್ಗೆ ಸ್ಯಾಸ್ನಿಲ್ಕ್ ಅಂಕಿ-ಅಂಶ ನೀಡಿದೆ.‘ಭಾರತ ಭಾಗ್ಯವಿಧಾತ’ ಸಿನಿಮಾ ದೇಶಾದ್ಯಂತ ಒಟ್ಟು 2,181 ಶೋಗಳನ್ನು ಕಂಡಿದ್ದರೂ, ಮೊದಲ ದಿನ ಕೇವಲ 1 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತದ ಗ್ರಾಸ್ ಗಳಿಕೆ 1.19 ಕೋಟಿ ರೂಪಾಯಿ ಗಳಿಸಿದೆ. ದೊಡ್ಡ ಬಂಡವಾಳ ಹಾಗೂ ಭಾರಿ ಪ್ರಚಾರದೊಂದಿಗೆ ತೆರೆಕಂಡ ಚಿತ್ರಕ್ಕೆ ಈ ಮಟ್ಟದ ಆರಂಭಿಕ ಗಳಿಕೆ ತೀವ್ರ ನಿರಾಸೆ ಮೂಡಿಸಿದೆ.
ತೂಗುಯ್ಯಾಲೆಯಲ್ಲಿ ಸಿನಿಮಾದ ಮುಂದಿನ ಭವಿಷ್ಯ:
ಮೊದಲ ದಿನವೇ ಅತ್ಯಂತ ಕನಿಷ್ಠ ಮಟ್ಟದ ಕಲೆಕ್ಷನ್ ಮಾಡಿರುವುದರಿಂದ ಸಿನಿಮಾದ ಮುಂದಿನ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ವೀಕೆಂಡ್ನಲ್ಲಿ ಚಿತ್ರದ ಗಳಿಕೆಯಲ್ಲಿ ಭಾರಿ ಚೇತರಿಕೆ ಕಂಡುಬರದಿದ್ದರೆ, ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಂಪೂರ್ಣವಾಗಿ ಧೂಳೀಪಟವಾಗುವುದು ಖಚಿತ ಎನ್ನಲಾಗಿದೆ. ಸದ್ಯ ಚಿತ್ರದ ಮೇಲಿರುವ ನೆಗೆಟಿವ್ ರಿವ್ಯೂಗಳು ಹಾಗೂ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ ನೋಡಿದರೆ, ಮುಂಬರುವ ದಿನಗಳಲ್ಲಿ ಚಿತ್ರಮಂದಿರಗಳಿಂದ ಈ ಸಿನಿಮಾ ಬೇಗನೇ ಎತ್ತಂಗಡಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಇದನ್ನೂ ಓದಿ: ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್
ಚಿತ್ರದ ಕಥಾವಸ್ತು ಏನಿದೆ?:
ಈ ಚಿತ್ರವು ಕಂಗನಾ ರಣಾವತ್ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಆಗಿದ್ದು, ದೇಶಭಕ್ತಿ ಹಾಗೂ ಗಂಭೀರ ರಾಜಕೀಯ ವಿದ್ಯಮಾನಗಳ ಸುತ್ತ ಕಥೆ ಸಾಗುತ್ತದೆ.2008ರ ಮುಂಬೈ ದಾಳಿ ಆಧರಿಸಿ ಸಿನಿಮಾ ಮಾಡಲಾಗಿದೆ. ಮುಂಬೈನ ಆಸ್ಪತ್ರೆಯೊಂದರಲ್ಲಿದ್ದ ಸುಮಾರು 400 ರೋಗಿಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಸಾಮಾನ್ಯ ನರ್ಸ್ಗಳು ಹಾಗೂ ಆರೋಗ್ಯ ಕಾರ್ಯಕರ್ತರ ಧೈರ್ಯ ಮತ್ತು ಸಾಹಸದ ಕಥೆ ಇದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
