ಕೇವಲ 5 ಶಾಟ್​ಗಳಲ್ಲಿ ಸಿದ್ಧವಾಯ್ತು ‘ಅದಿತಿ’ ಸಿನಿಮಾ; ಇದು ಮಹಿಳಾ ಪ್ರಧಾನ ಚಿತ್ರ

ಕೇವಲ 5 ಶಾಟ್​ಗಳಲ್ಲಿ ಸಿದ್ಧವಾಯ್ತು ‘ಅದಿತಿ’ ಸಿನಿಮಾ; ಇದು ಮಹಿಳಾ ಪ್ರಧಾನ ಚಿತ್ರ

ಬಹುಭಾಷೆಯಲ್ಲಿ ಬಿಡುಗಡೆ ಆಗಲಿರುವ ‘ಅದಿತಿ’ ಸಿನಿಮಾದಲ್ಲಿ ಒಂದು ಡಿಫರೆಂಟ್ ಪ್ರಯತ್ನ ಮಾಡಲಾಗಿದೆ. ಇಡೀ ಸಿನಿಮಾವನ್ನು ಕೇವಲ 5 ಶಾಟ್​ಗಳಲ್ಲಿ ಚಿತ್ರಿಸಲಾಗಿದೆ. ಇದು ನಿಜಕ್ಕೂ ಸವಾಲಿನ ಕೆಲಸ. ಆ ಮೂಲಕ ‘ಅದಿತಿ’ ಸಿನಿಮಾ (Aditi Movie) ಕುತೂಹಲ ಮೂಡಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇದೆ. ಬಹುತೇಕ ಮಹಿಳೆಯರೇ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ‘ಅದಿತಿ’ ಸಿನಿಮಾದ ಟೀಸರ್ (Teaser) ಬಿಡುಗಡೆ ಮಾಡಲಾಯಿತು. ಈ ಚಿತ್ರದ ಶೀರ್ಷಿಕೆಗೆ ‘ಲಿಬರ್ಟಿ’ ಎಂಬ ಟ್ಯಾಗ್​ಲೈನ್ ಇದೆ.

‘ಮಿಲೆನಿಯಮ್ ಆಡ್ ಮೀಡಿಯಾ’ ಮೂಲಕ ‘ಅದಿತಿ’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾಗೆ ನೆಲ್ಸನ್ ರೋಜರ್ಸ್ ಡಬ್ಲ್ಯೂ. ಮತ್ತು ಸೋಲೋಮನ್ ಕೆ. ಜಾರ್ಜ್ ಅವರು ನಿರ್ದೇಶನ ಮಾಡಿದ್ದಾರೆ. ವ್ಯಾಲೆರಿನಾ ಮರಿಯಾ ರೋಜರ್ಸ್ ಮತ್ತು ನೆಲ್ಸನ್ ರೋಜರ್ಸ್ ಡಬ್ಲ್ಯೂ. ಅವರು ಬಂಡವಾಳ ಹೂಡಿದ್ದಾರೆ. ನೆಲ್ಸನ್ ರೋಜರ್ಸ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

ಈ ಸಿನಿಮಾದ ಪ್ರಚಾರದ ಮೊದಲ ಹಂತವಾಗಿ ಹಾಡುಗಳು, ಟೀಸರ್ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ವೈ2ಕೆ ಮ್ಯೂಸಿಕ್ ಆಡಿಯೋ ಕಂಪನಿ ಲೋಗೋ ಅನಾವರಣ ಸಮಾರಂಭವು ಕೂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ‘ಆ ದಿನಗಳು’ ಖ್ಯಾತಿಯ ಚೇತನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ಅದಿತಿ’ ಚಿತ್ರತಂಡಕ್ಕೆ ವಿಶ್ ಮಾಡಿದರು.

ಇಶಾನಾ, ಹರ್ಷಿತಾ ಕಲ್ಲಿಂಗಲ್, ಆರತಿ, ನಿಸರ್ಗ ಮಂಜುನಾಥ್, ಯಶಾ, ಸುನಿಲ್, ಡ್ಯಾನಿ ಕುಟ್ಟಪ್ಪ, ಅಜಿತ್‌ ಕುಮಾರ್, ಗೋಪಿ ಮುಂತಾದವರು ‘ಅದಿತಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರು ಈ ಸಿನಿಮಾದ ವಿಶೇಷತೆಗಳ ಬಗ್ಗೆ ತಿಳಿಸಿದರು. ಈ ಸಿನಿಮಾದಲ್ಲಿ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮೊನಾಲಿಸಾ ವಯಸ್ಸು ಕೇವಲ 16: ಗಂಡ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್

‘ಈ ಸಿನಿಮಾವನ್ನು ಕೇವಲ 5 ಶಾಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರತಿಯೊಂದು ದೃಶ್ಯಗಳು 20-25 ನಿಮಿಷ ಇರುತ್ತದೆ. ಇದಕ್ಕಾಗಿ ತಿಂಗಳುಗಟ್ಟಲೆ ಕಲಾವಿದರಿಗೆ ತರಬೇತಿ ನೀಡಿದ್ದೇವೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್ ಅವರ ಸಲಹೆ, ಸಹಕಾರ ನೀಡುವುದಲ್ಲದೇ ಬಹಳ ಚೆನ್ನಾಗಿ ಶಾಟ್ಸ್‌ ಸೆರೆ ಹಿಡಿದುಕೊಟ್ಟಿದ್ದಾರೆ. ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕೊಂಕಣಿ ಭಾಷೆಗಳಲ್ಲಿ ಸಿನಿಮಾವು ಏಕಕಾಲಕ್ಕೆ ಬರಲಿದೆ’ ಎಂದು ಅವರು ಹೇಳಿದರು.

‘ಅದಿತಿ’ ಸಿನಿಮಾದ ಟೀಸರ್:

ಈ ಚಿತ್ರದ ಎಲ್ಲ ಭಾಷೆಯ ಅವತರಣಿಕೆಗಳಿಗೆ ಮಹಿಳೆಯರೇ ಸಂಭಾಷಣೆ ಬರೆದಿದ್ದಾರೆ. ಕನ್ನಡದಲ್ಲಿ ಕುಮುದಹಳ್ಳಿ ಅರುಣ್‌ಮೂರ್ತಿ ಅವರ ಸಂಭಾಷಣೆ ಇರಲಿದೆ. ಗ್ಲಾಮರಸ್ ಹಾಡುಗಳಿಗೆ ಪ್ರಿಯಾ ಮಾಲಿ, ಚೇತನ ನಾಯಕ್ ಧ್ವನಿಯಾಗಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ರಮೇಶ್ ಕೃಷ್ಣ, ಕೃಷ್ಣ ಪ್ರಿಯದರ್ಶನ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೊನೆ ಹಂತದ ಛಾಯಾಗ್ರಹಣವನ್ನು ವೆಂಕಟೇಶ್ ಆರ್. ಮಾಡಿದ್ದಾರೆ. ಸೋಲೋಮನ್ ಕೆ. ಜಾರ್ಜ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *