ಕೊಪ್ಪಳ ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ; ತಂಗಡಗಿ, ರಾಯರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ವಾಗ್ದಾಳಿ – Kannada News | Koppal Congress Rift: Iqbal Ansari Hits Out at Shivraj Tangadagi, Basavaraj Rayareddy

ಇಕ್ಬಾಲ್ ಅನ್ಸಾರಿ (ಸಂಗ್ರಹ ಚಿತ್ರ)Image Credit source: tv9

ಕೊಪ್ಪಳ, ಆಗಸ್ಟ್ 7: ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ನಲ್ಲಿ (Congress) ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಚಿವ ಶಿವರಾಜ್ ತಂಗಡಗಿ, ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಆಡಿಯೋ ಮೂಲಕ ಮಾತನಾಡಿರುವ ಅನ್ಸಾರಿ, ತಮ್ಮ ಸೋಲಿಗೆ ಈ ನಾಯಕರೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಶಿವರಾಜ್ ತಂಗಡಗಿ, ‘ಇತರರ ಬಗ್ಗೆ ಮಾತನಾಡುವ ಬದಲು ಇಕ್ಬಾಲ್ ಅನ್ಸಾರಿ ಜನರ ಮಧ್ಯೆ ಹೋಗಿ ಗೆದ್ದು ತೋರಿಸಲಿ’ ಎಂದು ನೀಡಿದ್ದ ಹೇಳಿಕೆಗೆ ಅನ್ಸಾರಿ ತಿರುಗೇಟು ನೀಡಿದ್ದಾರೆ. ಗಂಗಾವತಿಗೆ ಬಂದು ಮಾಧ್ಯಮಗೋಷ್ಠಿ ನಡೆಸಿ ತಮ್ಮ ವಿರುದ್ಧ ಮಾತನಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಅವರು, ‘ಬಹಿರಂಗ ವೇದಿಕೆಗೆ ಬನ್ನಿ, ಯಾರು ಯಾರಿಗೆ ಮೋಸ ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ’ ಎಂದು ಸವಾಲು ಹಾಕಿದ್ದಾರೆ.

ನನ್ನ ಸೋಲಿಗೆ ನೀವೇ ಕಾರಣ: ಇಕ್ಬಾಲ್ ಅನ್ಸಾರಿ

ತಮ್ಮ ಸೋಲಿಗೆ ರಾಘವೇಂದ್ರ ಹಿಟ್ನಾಳ, ಅವರ ಕುಟುಂಬ, ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ್ ತಂಗಡಗಿ ಕಾರಣ ಎಂದು ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ತಮ್ಮ ವಿರುದ್ಧ ಯಾರು ಕೆಲಸ ಮಾಡಿದ್ದಾರೆ ಎಂಬುದು ತಮಗೆ ಗೊತ್ತಿದೆ ಎಂದಿರುವ ಅವರು, ಹಿಂದೆ ಬಸವರಾಜ ರಾಯರೆಡ್ಡಿ ಅವರ ಬಗ್ಗೆ ಗೌರವವಿತ್ತು ಎಂದು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರಕ್ಕೆ ಬಾರದಂತೆ ರಾಯರೆಡ್ಡಿ ಮಾಡಿದ್ದಾರೆ ಎಂದು ಅನ್ಸಾರಿ ಆರೋಪಿಸಿದ್ದಾರೆ. ತಾವು ರಾಯರೆಡ್ಡಿ ಅವರ ಕ್ಷೇತ್ರದಲ್ಲಿ ಮತ ಹಾಕಿಸಿದ್ದರೂ, ತಮ್ಮ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಮತ ಹಾಕುವಂತೆ ಸಮಾಜದವರನ್ನು ಪ್ರೇರೇಪಿಸಲಾಗಿದೆ ಎಂದು ದೂರಿದ್ದಾರೆ.

‘ಅಧಿಕಾರಿಗಳ ವರ್ಗಾವಣೆಯಲ್ಲಿ ಕಮಿಷನ್ ಆರೋಪ’

ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ಪಡೆದು ತಮ್ಮ ಮಾತನ್ನು ಅಧಿಕಾರಿಗಳು ಕೇಳದಂತೆ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಅನ್ಸಾರಿ ಮಾಡಿದ್ದಾರೆ. ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಎಸ್‌ಪಿಗೆ ಸೂಚಿಸಲಾಗಿತ್ತು ಎಂದು ಹೇಳಿರುವ ಅವರು, ‘ಎಸ್‌ಪಿ ಅವರು ಸರ್ಕಾರದ ಪ್ರತಿನಿಧಿಯೋ ಅಥವಾ ನಿಮ್ಮ ಪ್ರತಿನಿಧಿಯೋ’ ಎಂದು ತಂಗಡಗಿಯನ್ನು ಪ್ರಶ್ನಿಸಿದ್ದಾರೆ.

ಗಂಗಾವತಿ ಕ್ಷೇತ್ರದ ನಿಗಮ-ಮಂಡಳಿಗಳಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹಿನ್ನೆಲೆಯವರನ್ನು ನೇಮಕ ಮಾಡಲಾಗಿತ್ತು ಎಂಬ ಆರೋಪವನ್ನೂ ಮಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನ ಹಾಗೂ ಪದ್ಧತಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವಂತೆ ತಂಗಡಗಿಗೆ ತಿರುಗೇಟು ನೀಡಿದ್ದಾರೆ.

‘58 ಸಾವಿರ ಮತ ಬಂದಿದ್ದು ಹೇಗೆ?’

ತಾವು ಕ್ಷೇತ್ರದಲ್ಲಿ ಪ್ರಚಾರ ಮಾಡದೇ ಇದ್ದಿದ್ದರೆ 58 ಸಾವಿರ ಮತಗಳು ಹೇಗೆ ಬರುತ್ತಿದ್ದವು ಎಂದು ಪ್ರಶ್ನಿಸಿರುವ ಅನ್ಸಾರಿ, ತಮ್ಮ ಸೋಲಿನ ಬಗ್ಗೆ ಮಾತನಾಡಿದಾಗ ತಂಗಡಗಿಗೆ ಉರಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ಬಗ್ಗೆ ಮಾತನಾಡುವಾಗ ತಂಗಡಗಿ ಬೆವರಿಕೊಂಡು ಮಾತನಾಡಿದ್ದಾರೆ ಎಂದೂ ಟೀಕಿಸಿದ್ದಾರೆ.

ಇದನ್ನೂ ಓದಿ: ‘ನನಗೆ 2 ಸೆಕೆಂಡ್ ಸಾಕು, ಮಸೀದಿಗೆ ಒಂದು ಪತ್ರ ಬರೆದರೆ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

ಇದು ತಮ್ಮ ಮೊದಲ ಎಪಿಸೋಡ್ ಎಂದು ಹೇಳಿರುವ ಅನ್ಸಾರಿ, ತಂಗಡಗಿ ಸಣ್ಣ ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ನಡೆದ ವಿಚಾರಗಳ ಬಗ್ಗೆ ಮುಂದಿನ ಎಪಿಸೋಡ್‌ನಲ್ಲಿ ಮಾತನಾಡುವುದಾಗಿ ಎಚ್ಚರಿಸಿದ್ದಾರೆ. ಮುಂದಿನ ಎಲ್ಲ ವಿಚಾರಗಳನ್ನು ಜನರ ಮುಂದೆ ಬಹಿರಂಗಪಡಿಸುವುದಾಗಿ ಹೇಳಿರುವ ಅವರು, ‘ಮುಂದೆ ನಿಮಗೆ ತಕ್ಕ ಪಾಠ ಕಲಿಸುತ್ತೇನೆ’ ಎಂದು ಆಡಿಯೋ ಮೂಲಕ ಗುಡುಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *