ಕೋಟ್ಯಂತರ ರೂ ನಷ್ಟದಲ್ಲಿ ಹುಬ್ಬಳ್ಳಿ ಹೆಸ್ಕಾಂ: ಗ್ರಾಹಕರಿಗೆ ಹೊಡೆಯುತ್ತಾ ಕರೆಂಟ್​ ಶಾಕ್​? – Kannada News | Hubballi KERC Meeting: Public Outrage Over HESCOM Services and 188 Cr Loss Claim

ಹುಬ್ಬಳ್ಳಿ, ಫೆಬ್ರವರಿ 26: ಜನರಿಂದ ತಪ್ಪದೇ ವಿದ್ಯುತ್ ಬಿಲ್ ವಸೂಲಿ ಮಾಡುವ ಹೆಸ್ಕಾಂ (HESCOM), ಅದಕ್ಕೆ ಸರಿಯಾಗಿ ಸೇವೆಯನ್ನು ಮಾತ್ರ ನೀಡುತ್ತಿಲ್ಲ. ಇದೀಗ ಹೆಸ್ಕಾಂ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದ್ದು, ಅದನ್ನು ಸರಿದೂಗಿಸಲು ಅವಕಾಶ ನೀಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಹೆಸ್ಕಾಂ ವಿರುದ್ದ ಆಯೋಗದ ಮುಂದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಜನರ ಮೇಲೆ ನಷ್ಟದ ಹೊರೆಯನ್ನು ಹಾಕಬಾರದು ಅಂತ ಆಗ್ರಹಿಸಿದರು.

ಆರ್ಥಿಕ ನಷ್ಟದಲ್ಲಿ ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ

ಹುಬ್ಬಳ್ಳಿ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಏಳು ಜಿಲ್ಲೆಯ ಜನರು, ಕೈಗಾರಿಕೆಗಳು, ಐಪಿ ಸೆಟ್​ಗಳಿಗೆ ವಿದ್ಯುತ್ ಸರಬರಾಜು ಮಾಡುವ ಕಂಪನಿ, ವಿದ್ಯುತ್ ನೀಡಿದ್ದಕ್ಕೆ ಪ್ರತಿಯಾಗಿ ಬಿಲ್​ನ್ನು ವಸೂಲಿ ಮಾಡುತ್ತದೆ. ಆದರೂ ಕೂಡ ಸಂಸ್ಥೆಗೆ 2024-25 ರ ಸಾಲಿನಲ್ಲಿ 188 ಕೋಟಿ ರೂ ಆದಾಯ ಕೊರತೆಯಾಗಿದೆಯಂತೆ. ಈ ಹಿಂದೆ ಅದನ್ನು 604 ಕೋಟಿ ರೂ ಆದಾಯ ಕೊರತೆ ಅಂತ ಹೇಳಿದ್ದ ಹೆಸ್ಕಾಂ, ಅದರಲ್ಲಿ ಕೆಲವನ್ನು ತಗೆದು 188 ಕೋಟಿ ರೂಪಾಯಿಗೆ ತಂದು ನಿಲ್ಲಿಸಿದೆ.

ಇದನ್ನೂ ಓದಿ: ಕಚೇರಿ ಬದಲು ಡಾಬಾದಲ್ಲಿ ಕೆಲಸ, ಎಣ್ಣೆ ಪಾರ್ಟಿ ಮಾಡುತ್ತಲೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್

ಆರ್ಥಿಕ ನಷ್ಟವನ್ನು ಸರಿದೂಗಿಸಲು ಅವಕಾಶ ನೀಡಬೇಕು ಅಂತ ಹೆಸ್ಕಾಂ, ಕೆಲ ದಿನಗಳ ಹಿಂದೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ ಆಯೋಗದ ಅಧ್ಯಕ್ಷ ಪಿ ರವಿಕುಮಾರ್, ಜನರ ಅಭಿಪ್ರಾಯ ಸಂಗ್ರಹಿಸಿದರು. ಈ ಸಮಯದಲ್ಲಿ ಹೆಸ್ಕಾಂ ವಿರುದ್ದ ಏಳು ಜಿಲ್ಲೆಗಳಿಂದ ಬಂದಿದ್ದ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಒಂದಡೆ ಹೆಸ್ಕಾಂ ಬೇಕಾಬಿಟ್ಟಿ ವೆಚ್ಚಗಳನ್ನು ಮಾಡುತ್ತಿದೆ. ಕಾಮಗಾರಿಗಳಲ್ಲಿ ಹಗರಣಗಳನ್ನು ಮಾಡುತ್ತಿದೆ. ಬರಬೇಕಾದ ಬಿಲ್​ನ್ನು ಸರಿಯಾಗಿ ವಸೂಲಿ ಮಾಡುತ್ತಿಲ್ಲ. ಅಧಿಕಾರಿಗಳು ತಾವು ಪ್ರಮಾಣಿಕವಾಗಿ ಮಾಡಬೇಕಾದ ಕೆಲಸವನ್ನು ಮಾಡದೇ, ಸಂಸ್ಥೆಗೆ ನಷ್ಟವನ್ನುಂಟು ಮಾಡುತ್ತಿದ್ದು, ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಅಂತ ಅರವಿಂದ್ ಪೈ ಎನ್ನುವವರು ಆಗ್ರಹಿಸಿದರು.

ಸಭೆಯಲ್ಲಿ ಹೆಸ್ಕಾಂನ ಅನೇಕ ಹಗರಣಗಳು, ಅಕ್ರಮ ಕೆಲಸಗಳನ್ನು ವಿವಿಧ ಜಿಲ್ಲೆಯಿಂದ ಬಂದಿದ್ದ ಗ್ರಾಹಕರು ಆಯೋಗದ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಮತ್ತೊಂದಡೆ ಸರಿಯಾಗಿ ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸದೇ ಇರೋದಕ್ಕೆ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಬಿಲ್ ಪಡೆಯುವ ಹೆಸ್ಕಾಂ, ಸೇವೆಯನ್ನು ಮಾತ್ರ ಸರಿಯಾಗಿ ನೀಡುತ್ತಿಲ್ಲ ಅಂತ ಹರಿಹಾಯ್ದರು. ರೈತರ ಪಂಪಸೆಟ್​ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಇರೋದು, ಟ್ರಾನ್ಸಪಾರ್ಮ್​ಗಳು ಸುಟ್ಟಾಗ ಅವುಗಳನ್ನು ಬೇಗನೆ ರಿಪೇರಿ ಮಾಡದೇ ನೀಡದೇ ಇರೋದು ಸೇರಿದಂತೆ ಅನೇಕ ದೂರುಗಳನ್ನು ರೈತರು ಮತ್ತು ಸಾರ್ವಜನಿಕರು ಆಯೋಗದ ಮುಂದೆ ಪ್ರಸ್ತಾಪಿಸಿದರು.

ವಿದ್ಯುತ್ ಬಿಲ್ ಹೆಚ್ಚಳಕ್ಕೆ ಮಾಡುತ್ತಿರುವ ಸಭೆ ಅಲ್ಲ: ಅಧ್ಯಕ್ಷ ಪಿ ರವಿಕುಮಾರ್

ಇನ್ನು ಹೆಸ್ಕಾಂ ಹೊರೆಯನ್ನು ಯಾವುದೇ ಕಾರಣಕ್ಕೂ ಗ್ರಾಹಕರ ಮೇಲೆ ಹಾಕಬಾರದು ಅಂತ ಸಭೆಯಲ್ಲಿ ಭಾಗಿಯಾಗಿದ್ದವರು ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ಆಯೋಗದ ಅಧ್ಯಕ್ಷ ಪಿ ರವಿಕುಮಾರ್, ಇಂದಿನ ಸಭೆ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಮಾಡುತ್ತಿರುವ ಸಭೆ ಅಲ್ಲ. ಈಗಾಗಲೇ ಕಳೆದ ವರ್ಷ ಬೆಲೆ ಹೆಚ್ಚಳ ಮಾಡಿರೋದರಿಂದ ಮತ್ತೆ ವಿದ್ಯುತ್ ಬಿಲ್ ಹೆಚ್ಚಳ ಮಾಡಲ್ಲ. ಆದರೆ ಹೆಸ್ಕಾಂ ಆರ್ಥಿಕ ನಷ್ಟವನ್ನು ಸರಿದೂಗಿಸಲು ಆಯೋಗಕ್ಕೆ ಮನವಿ ಮಾಡಿದೆ. ಈ ಬಗ್ಗೆ ಸಾರ್ವಜನಿಕರ ವಿಚಾರಗಳನ್ನು ಆಲಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ

ಒಂದೆಡೆ ಹೆಸ್ಕಾಂಗೆ ಆದಾಯ ಬರುತ್ತಿದ್ದರೂ ಬರುತ್ತಿರುವ ಆದಾಯದಲ್ಲಿ ದೊಡ್ಡ ಮಟ್ಟದಲ್ಲಿ ಸೋರಿಕೆ ಆಗುತ್ತಿದೆ. ಜೊತೆಗೆ ಅನೇಕ ಹಗರಣಗಳು ಹೆಸ್ಕಾಂ ಆರ್ಥಿಕ ಸ್ಥಿತಿಯನ್ನು ಹಾಳು ಮಾಡುತ್ತಿವೆ. ಹೀಗಾಗಿ ಅಧಿಕಾರದಲ್ಲಿರುವವರು ಹೆಸ್ಕಾಂನಲ್ಲಿ ಆಗುತ್ತಿರುವ ಅವ್ಯವಹಾರ, ಅಕ್ರಮಗಳನ್ನು ತಡೆದರೆ ಸಂಸ್ಥೆ ನಷ್ಟದಿಂದ ಲಾಭದ ಹಳಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಹೆಸ್ಕಾಂ ಮತ್ತು ಇಂದನ ಇಲಾಖೆ ಚಿಂತಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *