ಠಂಠಣಿಯಾ ಕಾಳಿಬಾರಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ
ಕೋಲ್ಕತಾ, ಏಪ್ರಿಲ್ 26: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಕೋಲ್ಕತ್ತಾದಲ್ಲಿ ತಮ್ಮ ಐತಿಹಾಸಿಕ ರೋಡ್ಶೋ ಆರಂಭಿಸುವ ಮುನ್ನ ಪ್ರಸಿದ್ಧ ‘ಠಣಠಣಿಯಾ ಕಾಳಿಬಾರಿ’ (Thanthania Kalibari) ದೇವಸ್ಥಾನಕ್ಕೆ ಭೇಟಿ ನೀಡಿ ಮಾ ಕಾಳಿಯ ಆಶೀರ್ವಾದ ಪಡೆದರು. ಠಣಠಣಿಯಾ ಕಾಳಿಬಾರಿ ಕೋಲ್ಕತಾದ ಅತ್ಯಂತ ಹಳೆಯ ಕಾಳಿ ಮಂದಿರಗಳಲ್ಲಿ ಒಂದು.
ಕೋಲ್ಕತ್ತಾದ ಅತ್ಯಂತ ಹಳೆಯ ಮತ್ತು ಪೂಜ್ಯ ಕಾಳಿ ದೇವಾಲಯಗಳಲ್ಲಿ ಇದೂ ಒಂದು. 1703 ರಲ್ಲಿ ಸ್ಥಾಪನೆಯಾದ ಈ ದೇವಾಲಯದ ಇತಿಹಾಸ 300 ವರ್ಷಗಳಷ್ಟು ಹಳೆಯದು. ಕೋಲ್ಕತ್ತಾ ನಗರವು ಔಪಚಾರಿಕವಾಗಿ ಅಭಿವೃದ್ಧಿ ಹೊಂದುವುದಕ್ಕಿಂತಲೂ ಹಳೆಯದಾಗಿದೆ. ಇಲ್ಲಿ ಕಾಳಿ ದೇವಿಯನ್ನು ‘ಮಾ ಸಿದ್ಧೇಶ್ವರಿ’ ರೂಪದಲ್ಲಿ ಆರಾಧಿಸಲಾಗುತ್ತದೆ. ಇಲ್ಲಿನ ದೇವತೆಯು ಅತ್ಯಂತ ಶಕ್ತಿಶಾಲಿ ಮತ್ತು ‘ಜಾಗೃತ’ ದೈವ ಎಂದು ಭಕ್ತರು ನಂಬುತ್ತಾರೆ.
ಶ್ರೀ ರಾಮಕೃಷ್ಣ ಪರಮಹಂಸರ ಸಂಬಂಧ
ಈ ದೇವಾಲಯಕ್ಕೂ ಆಧ್ಯಾತ್ಮಿಕ ಗುರು ಶ್ರೀ ರಾಮಕೃಷ್ಣ ಪರಮಹಂಸರಿಗೂ ಅವಿನಾಭಾವ ಸಂಬಂಧವಿದೆ. ಅವರು ಆಗಾಗ್ಗೆ ಈ ದೇವಾಲಯಕ್ಕೆ ಭೇಟಿ ನೀಡಿ ಮಾ ಸಿದ್ಧೇಶ್ವರಿಯ ಮುಂದೆ ಭಕ್ತಿಗೀತೆಗಳನ್ನು ಹಾಡುತ್ತಿದ್ದರು.
ಇದನ್ನೂ ಓದಿ: Mann Ki Baat: ಭಾರತದ ಅಭಿವೃದ್ಧಿಗೆ ಸೌರ ಹಾಗೂ ಪವನ ಶಕ್ತಿ ಬಹಳ ಮುಖ್ಯ: ಪ್ರಧಾನಿ ಮೋದಿ
ಅವರು ದೇವಾಲಯದ ಒಳಗೆ ಹೇಳಿದ ನುಡಿಮುತ್ತುಗಳನ್ನು ಇಂದಿಗೂ ಗೋಡೆಗಳ ಮೇಲೆ ಕೆತ್ತಲಾಗಿದೆ. ಬೆಂಗಾಲಿಯಲ್ಲಿರುವ ‘ಶಂಕರೇರ್ ಹೃದಯ ಮಾಝೆ, ಕಾಳಿ ಬಿರಾಜೆ’ (ಶಂಕರನ ಹೃದಯದಲ್ಲಿ ಕಾಳಿ ನೆಲೆಸಿದ್ದಾಳೆ) ಎಂಬ ಸಾಲುಗಳು ಇಲ್ಲಿ ಪ್ರಸಿದ್ಧವಾಗಿವೆ.
ಮಾಂಸಾಹಾರ ಪ್ರಸಾದದ ವಿಶಿಷ್ಟ ಸಂಪ್ರದಾಯ
ಭಾರತದಲ್ಲಿ ಮಾಂಸಾಹಾರ ಪ್ರಸಾದವನ್ನು ನೀಡುವ ಕೆಲವೇ ಕೆಲವು ಕಾಳಿ ದೇವಾಲಯಗಳಲ್ಲಿ ಇದೂ ಒಂದು.
ಈ ವಿಶಿಷ್ಟ ಸಂಪ್ರದಾಯವನ್ನು ಸ್ವತಃ ಶ್ರೀ ರಾಮಕೃಷ್ಣ ಪರಮಹಂಸರೇ ಆರಂಭಿಸಿದರು ಎಂದು ಹೇಳಲಾಗುತ್ತದೆ. ಒಮ್ಮೆ ಬ್ರಹ್ಮಾನಂದ ಕೇಶವ ಚಂದ್ರ ಸೇನ್ ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಿದ ಪರಮಹಂಸರು, ದೇವಿಗೆ ‘ದಾಬ್-ಚಿಂಗ್ರಿ’ (ಸಿಗಡಿ ಖಾದ್ಯ) ನೈವೇದ್ಯ ಅರ್ಪಿಸಿದ್ದರು.
ಅಂದಿನಿಂದ ಇಂದಿನವರೆಗೆ ದೇವಿಗೆ ಮಾಂಸಾಹಾರ ಪ್ರಸಾದ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ. ರಾಮಕೃಷ್ಣ ಪರಮಹಂಸರು ಶ್ಯಾಮಪುಕುರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಅವರ ಅನುಯಾಯಿಗಳು ಮಾ ಸಿದ್ಧೇಶ್ವರಿಯ ಮುಂದೆ ಮಾಂಸಾಹಾರ ಪ್ರಸಾದ ಅರ್ಪಿಸಿ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದರು.
ಇದನ್ನೂ ಓದಿ: ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಪ್ರಧಾನಿಯವರ ಈ ಭೇಟಿಯು ಬಂಗಾಳದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯೊಂದಿಗೆ ಅವರು ಹೊಂದಿರುವ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿಗಳು ಬಂಗಾಳ ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಕೋಲ್ಕತಾಗೆ ತೆರಳಿದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ದೇಗುಲಕ್ಕೂ ಭೇಟಿ ನೀಡಿ, ಸಿದ್ದೇಶ್ವರಿ ಮಾತೆಯ ದರುಶನ ಪಡೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ಇದ್ದು, ಮೊದಲ ಹಂತದ ಮತದಾನವಾಗಿದೆ. ಎರಡನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯುತ್ತದೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
