‘ಕ್ಷಮೆಯಾಚಿಸಿ ರಾಜೀನಾಮೆ ನೀಡಿ’; ಪ್ರತಿಭಟನಾಕಾರರ ಮೇಲಿನ ಹಲ್ಲೆ ಕುರಿತು ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ – Kannada News | Mallikarjun Kharge says Amit Shah should be dragged out of his office and hand over to public

ನವದೆಹಲಿ, ಜುಲೈ 30: ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ವೇಳೆ ನಡೆದ ಪೊಲೀಸರ ಹಲ್ಲೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಹಿಸಿರುವ ಮೌನವನ್ನು ಕಾಂಗ್ರೆಸ್ ಮುಖ್ಯಸ್ಥ ರಾಗೂ ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಪರೀಕ್ಷಾ ಅಕ್ರಮ ತಡೆ ವಿಧೇಯಕವನ್ನು ಮೇಲ್ಮನೆಯಲ್ಲಿ ಮಂಡಿಸಿದ ನಂತರ ಮಾತನಾಡಿದ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ, ಸಂಸತ್ತಿನ ಕಲಾಪಕ್ಕೆ ಗೈರುಹಾಜರಾಗಿರುವುದಕ್ಕೆ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಪಷ್ಟನೆ ಕೋರಿದರು. ಕಚೇರಿಯೊಳಗೆ ಅಡಗಿ ಕುಳಿತಿರುವ ಅಮಿತ್ ಶಾ ಅವರನ್ನು ಎಳೆದುಕೊಂಡು ಬಂದು ಜನರಿಗೆ ಒಪ್ಪಿಸಬೇಕು ಎಂದು ಖರ್ಗೆ ವಾಗ್ದಾಳಿ ನಡೆಸಿದರು. ಇದರಿಂದ ಸದನದಲ್ಲಿ ಗದ್ದಲ ಉಂಟಾಯಿತು.

ಇಂದು ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕವನ್ನು ಮೇಲ್ಮನೆಯಲ್ಲಿ ಮಂಡಿಸಿದ ನಂತರ ಮಾತನಾಡಿದ ರಾಜ್ಯಸಭಾ ಹಿರಿಯ ಸಂಸದ ಹಾಗೂ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, “ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ವಿರುದ್ಧ ನಡೆದ ಹಿಂಸಾಚಾರದ ಕುರಿತು ಸರ್ಕಾರ ಸತ್ಯವನ್ನು ಹೊರಹಾಕಬೇಕು. ಅಮಿತ್ ಶಾ ಅವರು ಮುಚ್ಚಿದ ಬಾಗಿಲ ಹಿಂದೆ ಅಡಗಿರಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಬಾಯಿ ಹೊಲಿದಿದ್ದಾರಾ?:

ಸದನವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಜುಲೈ 20ರಂದು ಸಿಜೆಪಿ ಹಮ್ಮಿಕೊಂಡಿದ್ದ ‘ಚಲೋ ಸಂಸತ್’ ಮೆರವಣಿಗೆಯ ವೇಳೆ ಪ್ರತಿಭಟನಾಕಾರರ ವಿರುದ್ಧ ನಡೆದ ಭದ್ರತಾ ಪಡೆಗಳ ಕ್ರಮದ ಕುರಿತು ಗೃಹ ಸಚಿವರು ಮೌನ ವಹಿಸಿರುವುದನ್ನು ಕಂಡು “ಯಾರಾದರೂ ನಿಮ್ಮ ಬಾಯಿಯನ್ನು ಹೊಲಿದಿದ್ದಾರೆಯೇ?” ಎಂದು ಪ್ರಶ್ನಿಸಿದರು. “ನೀವು ದೇಶದ ಗೃಹ ಸಚಿವರು. ಈ ಘಟನೆ ನಡೆದಿದ್ದು ದೆಹಲಿಯಲ್ಲಿ. ಇಷ್ಟೆಲ್ಲಾ ನಡೆಯುತ್ತಿದ್ದರೂ ನೀವು ಬಾಯಿ ಬಿಡುತ್ತಿಲ್ಲ. ಯಾರಾದರೂ ನಿಮ್ಮ ಬಾಯಿಯನ್ನು ಹೊಲಿದಿದ್ದಾರೆಯೇ?” ಎಂದು ಖರ್ಗೆ ಕೇಳಿದರು.

ಇದನ್ನೂ ಓದಿ: ‘ಗುಂಡಿನ ದಾಳಿ ನಡೆದಿಲ್ಲ, ಅಶ್ರುವಾಯು ಮಾತ್ರ ಬಳಸಲಾಗಿದೆ’; ರಾಹುಲ್ ಗಾಂಧಿ ಆರೋಪಕ್ಕೆ ಸರ್ಕಾರ ಸ್ಪಷ್ಟನೆ

“ಹಳ್ಳಿಗಳಿಂದ ಮತ್ತು ಇತರ ರಾಜ್ಯಗಳಿಂದ ಬಂದ ಮಕ್ಕಳ ಮೇಲೆ ಅವರು ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸುತ್ತಿದ್ದಾರೆ. ಒಬ್ಬರು ಕಣ್ಣು ಕಳೆದುಕೊಂಡಿದ್ದಾರೆ, ಇನ್ನೊಬ್ಬರು ಕಿವಿ ಕಳೆದುಕೊಂಡಿದ್ದಾರೆ, ಮತ್ತೊಬ್ಬರು ಕೈ ಕಳೆದುಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ? ಗೃಹ ಸಚಿವರೇ ಇದಕ್ಕೆ ಹೊಣೆ. ಅಮಿತ್ ಶಾ ಮುಚ್ಚಿದ ಬಾಗಿಲಿನ ಹಿಂದಿನಿಂದ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿರಬಹುದು. ಅವರು ಸದಾ ಮುಚ್ಚಿದ ಕೋಣೆಯಲ್ಲೇ ಅಡಗಿರಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ನಾವು ನಿಮ್ಮನ್ನು ಹೊರಗೆಳೆಯುತ್ತೇವೆ” ಎಂದು ಖರ್ಗೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟೀಕಿಸಿದ ಖರ್ಗೆ, “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತು ಮೋದಿ ಸರ್ಕಾರ ಮಾತನಾಡದಿದ್ದರೆ, ಯುವಜನತೆ ಮತ್ತು ವಿದ್ಯಾರ್ಥಿಗಳು ಅವರಿಗೆ ಮತ್ತೊಮ್ಮೆ ತಕ್ಕ ಪಾಠ ಕಲಿಸಬೇಕು” ಎಂದು ಕರೆ ನೀಡಿದರು.

ಇದನ್ನೂ ಓದಿ: ‘ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಅಮಿತ್ ಶಾ ಆದೇಶ’; ರಾಹುಲ್ ಗಾಂಧಿ ಆರೋಪಕ್ಕೆ ರಣರಂಗವಾದ ಸಂಸತ್

“ಈ ವಿಧೇಯಕದಲ್ಲಿ ಕೇವಲ ಅಂಕಿ-ಅಂಶಗಳನ್ನು ಬದಲಾಯಿಸುತ್ತಾ ಬರಲಾಗಿದೆ. ಇದರಿಂದ ಏನೂ ಆಗುವುದಿಲ್ಲ. ಹೆಚ್ಚಿನ ದಂಡ, ಕಠಿಣ ಶಿಕ್ಷೆ, ವಿಶೇಷ ಕಾರ್ಯಪಡೆ (STF), ಶೀಘ್ರ ಗತಿ ನ್ಯಾಯಾಲಯಗಳಂತಹ ನಿಬಂಧನೆಗಳನ್ನು ನೀವು ಸೇರಿಸಿದ್ದೀರಿ. ಆದರೆ ಇದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ನೀವು ಪರೀಕ್ಷೆಯನ್ನು ಹೇಗೆ ನಡೆಸುತ್ತೀರಿ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಬದಲಾವಣೆ ನಿರ್ಧಾರವಾಗುತ್ತದೆ. ಇಂತಹ ಕಠಿಣ ಕಾನೂನನ್ನು ತರಲು ನಾವು 2024ರಲ್ಲೇ ಆಗ್ರಹಿಸಿದ್ದೆವು. ಆದರೆ ಆಗ ನೀವು ನಮ್ಮ ಮಾತನ್ನು ಒಪ್ಪಿಕೊಳ್ಳಲಿಲ್ಲ” ಎಂದು ಪರೀಕ್ಷಾ ಅಕ್ರಮ ತಡೆ ಕಾಯ್ದೆಯ ಮೇಲಿನ ಚರ್ಚೆಯ ವೇಳೆ ಖರ್ಗೆ ಹೇಳಿದರು.

ಇಡೀ ದೇಶಾದ್ಯಂತ ಇರುವ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿದ ಖರ್ಗೆ, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು. ಇದು ಮೇಲ್ಮನೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತಲ್ಲದೆ, ಬಿಜೆಪಿ ಸಂಸದರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *