
ಬಾಗಲಕೋಟೆ, ಏಪ್ರಿಲ್ 08: ವೈಮನಸ್ಸಿನ ಕಾರಣಕ್ಕೆ ಪ್ರೇಮಿಗಳಿಬ್ಬರು ದುರಂತ ಅಂತ್ತ ಕಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬನಹಟ್ಟಿಯ KHDC ಕಾಲೋನಿಯಲ್ಲಿ ಪ್ರಿಯತಮೆ ನೇಣಿಗೆ ಶರಣಾಗಿದ್ದರೆ, ವಿಷಯ ತಿಳಿದ ಪ್ರಿಯತಮ ರಬಕವಿಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಪವಿತ್ರಾ(19) ಮತ್ತು ಕಾರ್ತಿಕ್ ನಾಯಕ್(19) ಮೃತ ಪ್ರೇಮಿಗಳಾಗಿದ್ದಾರೆ. ನಿನ್ನೆ ಇಬ್ಬರ ಮಧ್ಯೆಯೂ ವೈಮನಸ್ಸು ಉಂಟಾಗಿ ಜಗಳ ನಡೆದಿತ್ತು. ಇದಾದ ಬಳಿಕ ಮನನೊಂದು ಮೊದಲು ಪವಿತ್ರಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು ಎನ್ನಲಾಗಿದೆ. ಸ್ಥಳಕ್ಕೆ ಬನಹಟ್ಟಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದ ಶರಣಬಸವೇಶ್ವರರ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ವಿನೋದ್ ರೆಡ್ಡಿ(40) ಮೃತರಾಗಿದ್ದು, ನಿನ್ನೆ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫರಹತಬಾದ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಪತ್ನಿಯ ಪ್ರಿಯಕರನಿಂದಲೇ ನಡೀತು ಪತಿಯ ಕೊಲೆ! ಸ್ನೇಹಿತನಂತೆ ನಟಿಸಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?
ಈಜಲು ಹೋಗಿ ನೀರುಪಾಲಾಗಿದ್ದ ಯುವಕನ ಶವ ಪತ್ತೆ
ತುಂಗಾ ನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ ಯುವಕನ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ಕಲ್ಲು ಬಂಡೆ ಮೇಲೆ ಮೊಬೈಲ್, ಚಪ್ಪಲಿ, ಬಟ್ಟೆ ಇಟ್ಟು ಈಜಲು ಹೋಗಿದ್ದ ಯುವಕ ಅಕ್ಷಯ್ (26) ನೀರುಪಾಲಾಗಿದ್ದ. ತುಂಗಾ ನದಿಯಲ್ಲಿ ಈಜು ತಜ್ಞ ಈಶ್ವರ ಮಲ್ಪೆ ಶೋಧ ಕಾರ್ಯಾಚರಣೆ ನಡೆಸಿದ್ದು, ಅಕ್ಷಯ್ ಶವ ಪತ್ತೆ ಮಾಡಿದ್ದಾರೆ. ಮೃತದೇಹವನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.