ಖಾಲಿ ಹುದ್ದೆಗಳ ಭರ್ತಿಗೆ ಹೋರಾಟಕ್ಕಿಳಿದವರ ಬಂಧನ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬಿತ್ತು ಬ್ರೇಕ್ – Kannada News | Karnataka Job Vacancies: Dharwad Protest for 2.84 Lakh Posts Faces Police Crackdown

ಪ್ರತಿಭಟನಾಕಾರರ ಬಂಧಿಸಿದ ಪೊಲೀಸ್​Image Credit source: tv9 kannada

ಧಾರವಾಡ, ಏಪ್ರಿಲ್​ 14: ರಾಜ್ಯದಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳ ಭರ್ತಿಗಾಗಿ (government jobs) ಧಾರವಾಡದಲ್ಲಿ ನಿರಂತರವಾಗಿ ಉದ್ಯೋಗಾಕಾಂಕ್ಷಿಗಳು ಹೋರಾಟ (Protest) ಮಾಡುತ್ತಲೇ ಬಂದಿದ್ದಾರೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಹೋರಾಟ ಮಾಡಿದ ಬಳಿಕವಷ್ಟೇ ಸರಕಾರ ಹುದ್ದೆಗಳ ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಇದೀಗ ಹೋರಾಟದ ಮುಂದುವರೆದ ಭಾಗವಾಗಿ ಇಂದು ವಿದ್ಯಾರ್ಥಿಗಳ ಸಂಘಟನೆಯಿಂದ ಹೋರಾಟವನ್ನು ಆಯೋಜಿಸಲಾಗಿತ್ತು. ಆದರೆ ಹೋರಾಟಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು, ಬೆಳಿಗ್ಗೆಯೇ ಮುಖಂಡರನ್ನು ಬಂಧಿಸಿ, ಹೋರಾಟಕ್ಕೆ ಬ್ರೇಕ್ ಹಾಕಿದರು.

ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಸರಕಾರಿ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿ ವಿದ್ಯಾರ್ಥಿಗಳ ಸಂಘಟನೆ ಕರೆ ಕೊಟ್ಟಿತ್ತು. ಈ ಕರೆಗೆ ರೈತ ಸಂಘಟನೆ ಹಾಗೂ ಇತರೆ ಎಡಪಂಥೀಯ ಸಂಘಟನೆಗಳು ಕೂಡ ಸಾಥ್ ನೀಡಿದ್ದವು. ಆದರೆ ಹೋರಾಟಕ್ಕೆ ಉಪನಗರ ಠಾಣೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿಂದೆ ನಡೆದಿದ್ದ ಅನೇಕ ಹೋರಾಟದ ವೇಳೆಯಲ್ಲಿ ಅಹಿತಕರ ಘಟನೆಗಳು ನಡೆದಿದ್ದವಲ್ಲದೇ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ಇದನ್ನೇ ಕಾರಣವಾಗಿಟ್ಟುಕೊಂಡು ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಹೋರಾಟ ಮಾಡೋದಾಗಿ ವಿದ್ಯಾರ್ಥಿ ಸಂಘಟನೆ ಮುಖಂಡರು ಹೇಳಿದ್ದರು.

ಐವರು ಮುಖಂಡರ ಬಂಧನ 

ಅಲ್ಲದೇ ಅಂಬೇಡ್ಕರ್ ಜಯಂತಿ ದಿನವೇ ನಮ್ಮ ನಡಿಗೆ ಭೀಮನೆಡೆಗೆ ಘೋಷವಾಕ್ಯದಡಿ ಪ್ರತಿಭಟನೆ ನಡೆಸಲು ಯೋಚಿಸಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಮುಖಂಡರು ಹೋರಾಟ ಮಾಡಿಯೇ ತೀರೋದಾಗಿ ಹೇಳಿ ಬೀದಿಗೆ ಇಳಿದರು. ಈ ವೇಳೆ ಯಲ್ಲಪ್ಪ ಹೆಗಡೆ, ನಾಗರಾಜ ಸೇರಿದಂತೆ ಐವರು ಮುಖಂಡರನ್ನು ಪೊಲೀಸರು ಜಯನಗರ ವೃತ್ತದ ಬಳಿ ಬಂಧಿಸಿ, ಕರೆದೊಯ್ದರು. ಪೊಲೀಸರ ಈ ಕ್ರಮಕ್ಕೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್​​ ಗ್ರೀನ್​​ ಸಿಗ್ನಲ್​​: ಷರತ್ತು ಅನ್ವಯ

ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಹೋರಾಟದಿಂದಾಗಿ ರಾಜ್ಯ ಸರಕಾರಕ್ಕೆ ಮುಜುಗರ ಉಂಟಾಗಿತ್ತು. ಇದೇ ವೇಳೆ ನಗರದ ಜ್ಯುಬಿಲಿ ವೃತ್ತದ ಬಳಿ ರಸ್ತೆ ತಡೆ ನಡೆಸಿದ್ದಕ್ಕೆ ಗಂಟೆಗಳ ಕಾಲ ಇಡೀ ಧಾರವಾಡ ಸ್ತಬ್ಧವಾಗಿತ್ತು. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ ಧಾರವಾಡ ಹೈಕೋರ್ಟ್ ಮೊರೆ ಹೋಗಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಸಂಘಟನೆಗೆ ಹೋರಾಟ ಮಾಡಲು ಅನುಮತಿ ನೀಡಿ, ಹುಬ್ಬಳ್ಳಿಯ ನೆಹರು ಮೈದಾನದಲ್ಲಿ 100 ಜನರಷ್ಟೇ ಹೋರಾಟ ಮಾಡಲು ಸೂಚಿಸಿತ್ತು.

ಸರಕಾರ ಸ್ಪಂದಿಸಿದಲೂ ಹೋರಾಟ ಮಾಡೋದು ಎಷ್ಟು ಸರಿ? ಸಚಿವ ಸಂತೋಷ ಲಾಡ್

ಅಲ್ಲದೇ ಹೋರಾಟದಲ್ಲಿ ಭಾಗಿಯಾಗುವವರ ಮಾಹಿತಿಯನ್ನು ಮುಂಚೆಯೇ ಪೊಲೀಸರಿಗೆ ನೀಡಿ, ಬಳಿಕ ಹೋರಾಟ ಮಾಡುವಂತೆ ಸೂಚನೆ ನೀಡಿತ್ತು. ಇದೇ ಕಾರಣಗಳನ್ನಿಟ್ಟುಕೊಂಡು ಪೊಲೀಸರು ಅನುಮತಿ ನಿರಾಕರಿಸಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಹೋರಾಟಕ್ಕೆ ರಾಜ್ಯ ಸರಕಾರ ಸ್ಪಂದಿಸಿದೆ. ಆದರೂ ಅದೇಕೆ ಮತ್ತೆ ಹೋರಾಟ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರ ಹೋರಾಟವನ್ನು ನಾನು ಕೂಡ ಬೆಂಬಲಿಸುವೆ. ಆದರೆ ಇಷ್ಟೆಲ್ಲಾ ಸ್ಪಂದನೆ ಸಿಕ್ಕ ಬಳಿಕವೂ ಹೋರಾಟ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗಾಕಾಕ್ಷಿಗಳಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ: ಧಾರವಾಡದಲ್ಲಿ ನಾಳೆ ನಡೆಯಲಿದ್ಯಾ ಹೈಡ್ರಾಮಾ?

ಇದೇ ವೇಳೆ ಹೋರಾಟಕ್ಕೆ ದಲಿತ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು. ಅಂಬೇಡ್ಕರ್ ಜಯಂತಿ ದಿನ ಇಂಥ ಹೋರಾಟ ಮಾಡುವ ಅವಶ್ಯಕತೆ ಇದೆಯೇ ಅನ್ನೋದು ದಲಿತ ಸಂಘಟನೆಗಳ ಪ್ರಶ್ನೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಪೊಲೀಸರು ಹೋರಾಟಕ್ಕೆ ಬ್ರೇಕ್ ಹಾಕಿದ್ದರು. ಆದರೆ ಇದೀಗ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಅನ್ನೋ ಆರೋಪಕ್ಕೆ ಪೊಲೀಸರು ಗುರಿಯಾಗಿದ್ದಂತೂ ಸತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *