ಶ್ರೀಗಳ ಜೀವ ಬೆದರಿಕೆ ಆರೋಪಕ್ಕೆ ಟ್ರಸ್ಟಿಗಳ ಬಿಗ್ ಟ್ವಿಸ್ಟ್!
ಗದಗ, ಜೂನ್ 27: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಗದಗದ (Gadag) ವೀರೇಶ್ವರ ಪುಣ್ಯಾಶ್ರಮ ಹಾಗೂ ಪುಟ್ಟರಾಜ ಗವಾಯಿಗಳ ಮಠದಲ್ಲಿ ಪೀಠಾಧಿಪತಿ ಮತ್ತು ಟ್ರಸ್ಟಿಗಳ ನಡುವಿನ ಜಟಾಪಟಿ ಈಗ ತಾರಕಕ್ಕೇರಿದೆ. ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಕಣ್ಣೀರು ಹಾಕಿದ ಬೆನ್ನಲ್ಲೇ, ಮಠದ ಮೂವರು ಪ್ರಮುಖ ಟ್ರಸ್ಟಿಗಳು ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದು, ಶ್ರೀಗಳ ವಿರುದ್ಧವೇ ಗಂಭೀರ ಹಗರಣಗಳ ತಿರುಗೇಟು ನೀಡಿದ್ದಾರೆ.
ಶ್ರೀಗಳ ಆರೋಪ ಶುದ್ಧ ಸುಳ್ಳು; ನಾವು ಗೂಂಡಾಗಳಲ್ಲ: ಟ್ರಸ್ಟಿಗಳ ಸ್ಪಷ್ಟನೆ
ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ತಮಗೆ ಮೂವರು ಟ್ರಸ್ಟಿಗಳಿಂದ ಜೀವ ಬೆದರಿಕೆ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಟಿವಿ9 ಮೂಲಕ ಸ್ಪಷ್ಟನೆ ನೀಡಿರುವ ಟ್ರಸ್ಟಿಗಳಾದ ವಸಂತಗೌಡ, ಶಿವರುದ್ರಪ್ಪ ಇಟಗಿ ಹಾಗೂ ಪ್ರಕಾಶ್ ಬಸರಿಗಿಡದ, ನಾವು ರೌಡಿಗಳು ಅಥವಾ ಗೂಂಡಾಗಳಲ್ಲ, 40 ವರ್ಷಗಳಿಂದ ಮಠಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಭಕ್ತರು. ಶ್ರೀಗಳು ಯಾರದ್ದೋ ಪ್ರೇರಣೆಯಿಂದ ಆತ್ಮಸಾಕ್ಷಿಗೆ ವಿರುದ್ಧವಾಗಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಟ್ರಸ್ಟಿ ಶಿವರುದ್ರಪ್ಪ ಇಟಗಿ ಮಾತನಾಡಿ, ಶ್ರೀಗಳಿಂದ ನಾನು 10 ಲಕ್ಷ ರೂಪಾಯಿ ಹಣ ಕೇಳಿಲ್ಲ. ನಾನೇ ಮಠಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದೇನೆ. ಮಠದಲ್ಲಿ ನಡೆಯಬಾರದ ಘಟನೆಗಳು ನಡೆದಾಗ ಧ್ವನಿ ಎತ್ತಿದ್ದಕ್ಕೆ ನನ್ನ ಧ್ವನಿ ಅಡಗಿಸಲು ಈ ಹುನ್ನಾರ ನಡೆಸಲಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ನಡೆದಿದ್ದೇನು?
ಕೆಲ ದಿನಗಳ ಹಿಂದೆ ಪೀಠಾಧಿಪತಿ ಕಲ್ಲಯ್ಯಜ್ಜನವರು ಟ್ರಸ್ಟಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ನಾನು ಪೀಠಾಧಿಪತಿಯಾದಾಗ ಮಠಕ್ಕೆ 59 ಲಕ್ಷ ರೂ. ಸಾಲವಿತ್ತು, ಅದನ್ನು ತೀರಿಸಿ ಈಗ 4 ಕೋಟಿ ರೂ. ಬ್ಯಾಂಕ್ ಠೇವಣಿ ಇಟ್ಟಿದ್ದೇನೆ. ಮಠದ ಪ್ರತಿಯೊಂದು ಪೈಸೆಗೂ ಲೆಕ್ಕ ಇಟ್ಟಿದ್ದರೂ ನನ್ನ ಕುರಿತು ಅಪಪ್ರಚಾರ ಮಾಡಿ, ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಶ್ರೀಗಳು ಆರೋಪಿಸಿದ್ದರು.
ಹಣ ದುರುಪಯೋಗದ ಗಂಭೀರ ಆರೋಪ
ಆದರೆ ಟ್ರಸ್ಟಿಗಳು ಪೀಠಾಧಿಪತಿಗಳ ವಿರುದ್ಧವೇ ಗಂಭೀರ ಆರ್ಥಿಕ ಅಕ್ರಮಗಳ ಆರೋಪ ಹೊರಿಸಿದ್ದಾರೆ. ಕಲ್ಲಯ್ಯಜ್ಜನವರು ಮಠದ ಶಿಕ್ಷಣ ಸಂಸ್ಥೆಗೆ ಸೇರಿದ 11 ಗುಂಟೆ ಬೆಲೆಬಾಳುವ ಜಮೀನನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದಾರೆ ಹಾಗೂ ಸಂಸ್ಥೆಯ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಟ್ರಸ್ಟಿ ಶಿವರುದ್ರಪ್ಪ ಆರೋಪಿಸಿದ್ದಾರೆ. ಈ ಹಗರಣದ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿರುವ ಅವರು, ತಾವು ಗದ್ದಿಗೆ ಮುಟ್ಟಿ ಆಣೆ ಮಾಡಲು ಸಿದ್ಧ ಎಂದಿದ್ದಾರೆ.
ಇದನ್ನೂ ಓದಿ ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ: ಹಣ ನೀಡುವಂತೆ ಮಾನಸಿಕ ಹಿಂಸೆ?
ಮತ್ತೊಬ್ಬ ಟ್ರಸ್ಟಿ ಪ್ರಕಾಶ್ ಬಸರಿಗಿಡದ ಮಾತನಾಡಿ, ನಮ್ಮ ಅಜ್ಜ ಮಠಕ್ಕೆ ಜಮೀನು ದಾನ ಮಾಡಿದ್ದರು. ಅವರ ಗದ್ದುಗೆ ಬಳಿ ಬಾವಿ ತೋಡಲು ಯತ್ನಿಸಿದ್ದನ್ನು ನಾವು ವಿರೋಧಿಸಿದ್ದಕ್ಕೆ ಈ ಸುಳ್ಳು ದೂರು ನೀಡಲಾಗಿದೆ. ವಾಸ್ತವವಾಗಿ ಶ್ರೀಗಳಿಂದಲೇ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
