ಗೃಹ ಸಚಿವರ ತವರಲ್ಲೇ ಮತ್ತೆ ಮತ್ತೆ ಪರಾರಿಯಾಗ್ತಿದ್ದಾರೆ ಕೈದಿಗಳು! ಕಲಬುರಗಿ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್ – Kannada News | Kalaburagi Jail Escape: Three Convicted Prisoners Flee Central Prison by Scaling Compound Wall

ಕಲಬುರಗಿ ಜೈಲಿನಿಂದ ಪರಾರಿಯಾಗಿರುವ ಸಜಾ ಕೈದಿಗಳುImage Credit source: tv9

ಕಲಬುರಗಿ, ಜುಲೈ 14: ಕಲಬುರಗಿ (Kalaburagi) ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿಯಾಗಿದ್ದು, ಈ ಘಟನೆ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಮಂಗಳವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಜೈಲಿನ ಸುಮಾರು 15 ರಿಂದ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಹಾರಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾದ ಕೈದಿಗಳನ್ನು ಮಸ್ತಾನ್, ಸಂತೋಷ್ ಹಾಗೂ ಸಾಗರ್ ಎಂದು ಗುರುತಿಸಲಾಗಿದೆ. ಇವರು ಬೀದರ್ ಜಿಲ್ಲೆಯ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಘಟನೆ ಸಂಬಂಧ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕೈದಿಗಳ ಕರೆದೊಯ್ಯಲು ಮೊದಲೇ ಸಿದ್ಧವಾಗಿತ್ತೇ ಕಾರು?

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಬ್ಯಾರಕ್‌ನ ಕಬ್ಬಿಣದ ಕಂಬಿಗಳನ್ನು ಕತ್ತರಿಸಿ, ಟವೆಲ್ ಹಾಗೂ ಹಾಸಿಗೆಯನ್ನು ಬಳಸಿಕೊಂಡು ಕಾಂಪೌಂಡ್ ಗೋಡೆ ದಾಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜೈಲಿನ ಹೊರಭಾಗದಲ್ಲಿ ಕಾರೊಂದು ಮೊದಲೇ ಸಿದ್ಧವಾಗಿದ್ದು, ಅದರಲ್ಲಿ ಪರಾರಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ.

ಜೈಲು ಭದ್ರತೆ ಬಗ್ಗೆ ಅನುಮಾನ

ಈ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೈದಿಗಳು ಹಲವು ದಿನಗಳಿಂದಲೇ ಯೋಜನೆ ರೂಪಿಸಿ ಪರಾರಿಯಾಗಿದ್ದಾರೆಯೇ? ಜೈಲಿನೊಳಗೆ ಇಷ್ಟೊಂದು ಸಿದ್ಧತೆ ನಡೆದರೂ ಸಿಬ್ಬಂದಿಗೆ ಮಾಹಿತಿ ಇರಲಿಲ್ಲವೇ? ಅಥವಾ ಭದ್ರತಾ ಲೋಪ ಸಂಭವಿಸಿದ್ದೇ? ಎಂಬ ಅನುಮಾನಗಳು ಮೂಡಿವೆ.

ಕಲಬುರಗಿ ನಗರ ಪೊಲೀಸ್ ಆಯುಕ್ತ ಜೈಲಿಗೆ ಭೇಟಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದ ತಂಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜೈಲಿನ ವಿವಿಧ ಬ್ಯಾರಕ್‌ಗಳು, ಕಾಂಪೌಂಡ್ ಗೋಡೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಪರಾರಿಯಾದ ಕೈದಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.

ಪ್ರಿಯಾಂಕ್ ಖರ್ಗೆ ಇರಾನ್-ಅಮೆರಿಕ ಯುದ್ಧದಲ್ಲಿ ಬ್ಯುಸಿ: ವಿಜಯೇಂದ್ರ ವ್ಯಂಗ್ಯ

ಈ ಘಟನೆ ಸದ್ಯ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಕಲಬುರಗಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸದ್ಯ ಇರಾನ್-ಅಮೆರಿಕ ಯುದ್ಧದಲ್ಲಿ ವ್ಯಸ್ತರಾಗಿದ್ದಾರೆ. ಅದನ್ನು ಮುಗಿಸಿ ಇಲ್ಲಿಗೆ ಬರುತ್ತಾರೆ’ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!

ಗಮನಾರ್ಹ ಸಂಗತಿಯೆಂದರೆ, ಇತ್ತೀಚೆಗಷ್ಟೇ ಜುಲೈ 3ರಂದು ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೋ ಪ್ರಕರಣದ ಆರೋಪಿ ಕೈಕೋಳವನ್ನು ಬಿಚ್ಚಿಕೊಂಡು ಪರಾರಿಯಾಗಿದ್ದ ಘಟನೆ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಕೇಂದ್ರ ಕಾರಾಗೃಹದಿಂದಲೇ ಮೂವರು ಶಿಕ್ಷಿತ ಕೈದಿಗಳು ತಪ್ಪಿಸಿಕೊಂಡಿರುವುದು ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಸದ್ಯ ಪರಾರಿಯಾದ ಕೈದಿಗಳ ಬಂಧನಕ್ಕೆ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *