ಬಸ್ಗಳು ಬೆಂಕಿಗಾಹುತಿImage Credit source: tv9 kannada
ಆನೇಕಲ್, ಜುಲೈ 26: ಬೆಂಗಳೂರು (Bangaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಳೆ ಚಂದಾಪುರ ಬಳಿಯ ಪಾರ್ಕಿಂಗ್ ಲಾಟ್ನಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಖಾಸಗಿ ಬಸ್ಗಳು ಏಕಾಏಕಿ ಬೆಂಕಿಗಾಹುತಿಯಾದ (bus fire) ಘಟನೆ ನಡೆದಿದೆ. ಮೊದಲು ಒಂದು ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಒಂದರ ನಂತರ ಮೊತ್ತೊಂದರಂತೆ ನಾಲ್ಕು ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಪಾರ್ಕಿಂಗ್ ಲಾಟ್ನಲ್ಲಿ ನಿಲ್ಲಿಸಿದ್ದ 4 ಬಸ್ಗಳು ಏಕಾಏಕಿ ಹೊತ್ತಿ ಉರಿದಿವೆ. ಮೊದಲು ಒಂದು ಖಾಸಗಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದಲ್ಲಿದ್ದ ಇತರ ಬಸ್ಗಳಿಗೂ ಹರಡಿದೆ. ಪರಿಣಾಮ ನಾಲ್ಕೂ ಬಸ್ಗಳು ಧಗಧಗನೆ ಹೊತ್ತಿ ಉರಿದು ಸಂಪೂರ್ಣವಾಗಿ ಭಸ್ಮವಾಗಿವೆ.
ಇನ್ನು ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸದ್ಯಕ್ಕೆ ಈ ಬಸ್ಗಳ ಮಾಲೀಕರ ವಿವರಗಳು ಲಭ್ಯವಾಗಿಲ್ಲ. ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ಕೂಡ ತಿಳಿದುಬಂದಿಲ್ಲ.
ಕಿಡಿಗೇಡಿಗಳಿಂದ ಗುಡಿಸಲಿಗೆ ಬೆಂಕಿ: ವೃದ್ಧೆ ಪ್ರಾಣಾಪಾಯದಿಂದ ಪಾರು
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಕಾಲೋನಿ ಗೇಟ್ ಸಮೀಪ ಕಿಡಿಗೇಡಿಗಳು ವೃದ್ಧೆಯೊಬ್ಬರ ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ಇತ್ತೀಚೆಗೆ ನಡೆದಿದೆ. 75 ವರ್ಷದ ಕದಿರಮ್ಮ ಎಂಬ ವೃದ್ಧೆ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಗುಡಿಸಲಿಗೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಂಕಿ ಹಚ್ಚಲಾಗಿದ್ದು, ಪೀಠೋಪಕರಣ, ಟಿವಿ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಭಸ್ಮವಾಗಿದ್ದವು.
ಇದನ್ನೂ ಓದಿ: Car Blast Case: ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್ಪಿ ಹೇಳಿದ್ದೇನು?
ಇನ್ನು ಅದೃಷ್ಟವಶಾತ್ ಘಟನೆ ವೇಳೆ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಶ್ರೀನಿವಾಸಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಂಕಷ್ಟದಲ್ಲಿರುವ ವೃದ್ಧೆಗೆ ನೆರವು ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
