ರಾಮನಗರ, ಜುಲೈ 8: ಚನ್ನಪಟ್ಟಣ ತಹಶೀಲ್ದಾರ್ ಬಿಎನ್ ಗಿರೀಶ್ ಮೇಲೆ ರೌಡಿಶೀಟರ್ಗಳು ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ, ವಿಡಿಯೋ ಮಾಡಿ 10 ಲಕ್ಷ ರೂಪಾಯಿಗೆ ಬ್ಲಾಕ್ಮೇಲ್ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ. ಜೂನ್ 29ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ತಹಶೀಲ್ದಾರ್ ಸರ್ಕಾರಿ ವಸತಿ ಗೃಹದಲ್ಲೇ ಈ ಕೃತ್ಯ ನಡೆದಿದೆ. ಮೈಸೂರು ಮೂಲದ ರೌಡಿಶೀಟರ್ ಅನುಷ್, ಶೋಭರಾಜ್ ಮತ್ತು ನವೀನ್ ಎಂಬುವರು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ತಹಶೀಲ್ದಾರ್ ಗಿರೀಶ್ ಅವರಿಗೆ ಜ್ಯೂಸ್ನಲ್ಲಿ ಮದ್ಯ ಬೆರೆಸಿ ಕುಡಿಸಿ ಪ್ರಜ್ಞಾಹೀನರನ್ನಾಗಿಸಿದ್ದಾರೆ. ನಂತರ ಅವರನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಇಟ್ಟುಕೊಂಡು 10 ಲಕ್ಷ ರೂ. ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದಾರೆ. ಅಲ್ಲದೆ, ಅವರ 8 ಗ್ರಾಂ ಚಿನ್ನದ ಉಂಗುರ ಮತ್ತು 14 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ.
ತಹಶೀಲ್ದಾರ್ ಗಿರೀಶ್ ಸದ್ಯ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೌಡಿಶೀಟರ್ ಅನುಷ್ನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
