ಬೆಂಗಳೂರು, ಜು.13: ಯಲಹಂಕ ಕ್ಷೇತ್ರದ ಪ್ರಭಾವಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಕುಖ್ಯಾತ ರೌಡಿಶೀಟರ್ ಒಬ್ಬನ ಅದ್ಧೂರಿ ಹುಟ್ಟುಹಬ್ಬದ ಆಚರಣೆಯಲ್ಲಿ ಖುದ್ದಾಗಿ ಭಾಗಿಯಾಗಿ ಕೇಕ್ ತಿನ್ನಿಸಿರುವ ಫೋಟೋ ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಯಲಹಂಕ ಕ್ಷೇತ್ರದ ಆಲೂರು ಗ್ರಾಮದಲ್ಲಿ ಈ ಅದ್ಧೂರಿ ಬರ್ತಡೇ ಪಾರ್ಟಿ ನಡೆದಿದ್ದು, ಭಾರೀ ಸಂಚಲನ ಮೂಡಿಸಿದೆ. ಚಿಕ್ಕಜಾಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ದಾಸ ಅಲಿಯಾಸ್ ‘ಕಿಂಗ್ ಮೇಕರ್ ದಾಸ’ ಎಂಬಾತನೇ ಈಗ ಶಾಸಕರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಈ ರೌಡಿಶೀಟರ್ ದಾಸ ಯಲಹಂಕ, ನೆಲಮಂಗಲ ಹಾಗೂ ದಾಸರಹಳ್ಳಿ ಭಾಗಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂ ಕಬಳಿಕೆ ಮತ್ತು ರಿಯಲ್ ಎಸ್ಟೇಟ್ ದಂಧೆಗಳಲ್ಲಿ ಸಕ್ರಿಯನಾಗಿದ್ದಾನೆ ಎನ್ನಲಾಗಿದೆ. ಕಳೆದ ಬಾರಿ ಈತನ ಬರ್ತ್ಡೇ ಪಾರ್ಟಿಯಲ್ಲಿ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಭಾಗಿಯಾಗಿದ್ದರು. ಒಬ್ಬ ರೌಡಿಶೀಟರ್ ಪಾರ್ಟಿಯಲ್ಲಿ ಪೊಲೀಸ್ ಅಧಿಕಾರಿಯೇ ಭಾಗಿಯಾಗಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಆ ಪ್ರಕರಣ ದೊಡ್ಡ ಸದ್ದು ಮಾಡಿದ ಬೆನ್ನಲ್ಲೇ ಇನ್ಸ್ಪೆಕ್ಟರ್ ನಾಗರಾಜ್ ಅವರನ್ನ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿತ್ತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
