ಚಿನ್ನ ಅಡವಿಟ್ಟ ಗ್ರಾಹಕರಿಗೆ ‘ಮಕ್ಮಲ್ ಟೋಪಿ’! ಕೋಟ್ಯಾಂತರ ರೂ. ವಂಚಿಸಿ ಜ್ಯುವೆಲರಿ ಶಾಪ್ ಮಾಲೀಕ ಪರಾರಿ – Kannada News | Bengaluru Gold Fraud: Raghavendra Jewellery Owner Tejas Gowda Cons Customers; FIR Registered

ತೇಜಸ್ ಗೌಡ ಮತ್ತು ಆತನ ಜ್ಯುವೆಲರಿ ಶಾಪ್

ಬೆಂಗಳೂರು, ಮೇ 09: ಜನರು ಕಷ್ಟ ಅಂತ ತಮ್ಮ ಬೆಲೆಬಾಳುವ ಚಿನ್ನಾಭರಣವನ್ನು (Gold Jewellery)ಅಡವಿಟ್ಟರೆ, ಇಲ್ಲೊಬ್ಬ ಜ್ಯುವೆಲರಿ ಶಾಪ್ ಮಾಲೀಕ ಜನರಿಗೇ ಪಂಗನಾಮ ಹಾಕಿದ್ದಾನೆ. ಬೆಂಗಳೂರಿನಲ್ಲಿ ಕಡಿಮೆ ಬಡ್ಡಿಯ ಆಸೆ ತೋರಿಸಿ ಗ್ರಾಹಕರಿಂದ ಚಿನ್ನ ಪಡೆದ ಆಸಾಮಿ ಈಗ ಅಂಗಡಿ ಬಾಗಿಲು ಮುಚ್ಚಿಕೊಂಡು ಪರಾರಿಯಾಗಿದ್ದಾನೆ.

ಮುಖ್ಯಾಂಶಗಳು

  • ಕಡಿಮೆ ಬಡ್ಡಿ ಆಸೆ ತೋರಿಸಿ ಗ್ರಾಹಕರಿಗೆ ಮೋಸ
  • ತನ್ನ ಶಾಪ್​ನಲ್ಲೇ ಚಿನ್ನ ಅಡವಿರಿಸಿ ಮೋಸ
  • ಶಾಪ್ ಬಂದ್ ಮಾಡಿ ವ್ಯಕ್ತಿ ಪರಾರಿ

ವಂಚನೆಯ ಜಾಲ ಹೇಗಿತ್ತು ಗೊತ್ತಾ?

ರಾಘವೇಂದ್ರ ಜ್ಯುವಲರಿ ಶಾಪ್ ಮಾಲೀಕ ತೇಜಸ್ ಗೌಡ ಅಲಿಯಾಸ್ ಮೂರ್ತಿ ಈ ಹಗರಣದ ಮುಖ್ಯ ಆರೋಪಿ. ಈತ ಒಂದು ತಂಡವನ್ನು ರಚಿಸಿಕೊಂಡು, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಯಾರು ಚಿನ್ನ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಕಲೆಹಾಕುತ್ತಿದ್ದ. ನಂತರ ಅಂತಹ ಗ್ರಾಹಕರನ್ನು ಸಂಪರ್ಕಿಸಿ, ಕಡಿಮೆ ಬಡ್ಡಿಗೆ ಹೆಚ್ಚು ಸಾಲ ನೀಡುತ್ತೇನೆ ಎಂದು ಆಮಿಷ ಒಡ್ಡುತ್ತಿದ್ದ. ಗ್ರಾಹಕರು ನಂಬಿದ ತಕ್ಷಣ, ಅವರು ಅಡವಿಟ್ಟಿದ್ದ ಜಾಗಕ್ಕೆ ಹೋಗಿ ಹಣ ಪಾವತಿಸಿ ಚಿನ್ನ ಬಿಡಿಸುತ್ತಿದ್ದ. ಬಳಿಕ ಆ ಚಿನ್ನವನ್ನು ತನ್ನದೇ ರಾಘವೇಂದ್ರ ಜ್ಯುವಲರಿ ಶಾಪ್‌ನಲ್ಲಿ ಇರಿಸಿಕೊಳ್ಳುತ್ತಿದ್ದ.

ಆರೋಪಿ ಎಸ್ಕೇಪ್!

ಕಳೆದ ಒಂದು ವರ್ಷದಿಂದ ಈ ವ್ಯವಹಾರ ನಡೆಸುತ್ತಿದ್ದ ತೇಜಸ್, 50 ಪೈಸೆ ಬಡ್ಡಿಯ ಆಸೆ ತೋರಿಸಿ ನೂರಾರು ಜನರನ್ನು ವಂಚಿಸಿದ್ದಾನೆ. ಆದರೆ, ಕಳೆದ ಮೂರು ತಿಂಗಳಿಂದ ಜ್ಯುವಲರಿ ಶಾಪ್ ಕ್ಲೋಸ್ ಮಾಡಿದ್ದಾನೆ. ಅಡವಿಟ್ಟ ಚಿನ್ನ ಬಿಡಿಸಲು ಹೋದ ಗ್ರಾಹಕರಿಗೆ ಅಂಗಡಿ ಮುಚ್ಚಿರುವುದು ಕಂಡುಬಂದಿದೆ. ಈ ನಡುವೆ ಜ್ಯುವಲರಿ ಶಾಪ್ ಮುಚ್ಚಿದ ಮೇಲೆ ಹೊಸದಾಗಿ ಫೈನಾನ್ಸ್ ಕಂಪನಿಯೊಂದನ್ನು ಆರಂಭಿಸಿದ್ದ ತೇಜಸ್, ಕಳೆದ ಒಂದು ವಾರದಿಂದ ಅದಕ್ಕೂ ಬೀಗ ಜಡಿದು ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ ಲಂಚ ಪಡೆಯುತ್ತಿದ್ದಾಗ ರೆಡ್​ ಹ್ಯಾಂಡೆಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್​ಪೆಕ್ಟರ್!

ಲಕ್ಷಾಂತರ ರೂಪಾಯಿ ವಂಚನೆ

ಯಲಹಂಕ ಅಳ್ಳಾಳಸಂದ್ರ ನಿವಾಸಿ ಸೌಮ್ಯಲತಾ ಎಂಬಾಕೆಗೆ ಈತ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಮೊತ್ತದ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ವಿವಿಧ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಸೌಮ್ಯಲತಾ ಅವರು ಇಟ್ಟಿದ್ದ ಚಿನ್ನವನ್ನು ಬಿಡಿಸಿದ್ದ ತೇಜಸ್, ನಂತರ ಅದನ್ನು ತನ್ನಲ್ಲಿಯೇ ಇಟ್ಟುಕೊಂಡು ವಂಚಿಸಿದ್ದಾನೆ. ಇದರಿಂದ ಕಂಗಾಲಾದ ಸೌಮ್ಯಲತಾ ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಸೌಮ್ಯಲತಾ ಅವರ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ತೇಜಸ್ ಗೌಡ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *