ಚಿರಂಜೀವಿ ಕ್ರೇಜ್: ಒಂದೇ ಕುಟುಂಬದ 140 ಮಂದಿಯಿಂದ ಸಿನಿಮಾ ವೀಕ್ಷಣೆ – Kannada News | 140 members of a family watched Chiranjeevi’s Mana Shankara Vara Prasad garu movie

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ಆದರೆ ಕಳೆದ ಐದಾರು ವರ್ಷಗಳಿಂದ ಅವರಿಗೆ ಸೂಕ್ತ ಗೆಲುವು ಸಿಕ್ಕಿರಲೇ ಇಲ್ಲ. ನಟಿಸಿದ ಸಿನಿಮಾಗಳು ಒಂದರ ಹಿಂದೊಂದರಂತೆ ಫ್ಲಾಪ್ ಆಗಿದ್ದವು. ಚಿರಂಜೀವಿ ಎಂದರೆ ಕಲೆಕ್ಷನ್ ಇಲ್ಲದ ನಟ ಎಂಬ ಅಭಿಪ್ರಾಯ ಹೊಸ ತೆಲುಗು ಸಿನಿಮಾ ವೀಕ್ಷಕರಲ್ಲಿ ಮೂಡಿಬಿಟ್ಟಿತ್ತು. ಆದರೆ ನಿಜಕ್ಕೂ ಚಿರಂಜೀವಿಯ ಕ್ರೇಜ್ ಎಂಬುದನ್ನು ಮತ್ತೆ ತೋರಿಸಿದೆ ಅವರ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ಕುಟುಂಬದ 140 ಮಂದಿ ಒಟ್ಟಿಗೆ ಚಿತ್ರಮಂದಿರಕ್ಕೆ ಬಂದು ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ವೀಕ್ಷಿಸಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಒಂದೇ ಕುಟುಂಬಕ್ಕೆ ಸೇರಿದ 140 ಮಂದಿ ಒಟ್ಟಿಗೆ ಚಿತ್ರಮಂದಿರಕ್ಕೆ ತೆರಳಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ವೀಕ್ಷಿಸಿದ್ದಾರೆ. ಟ್ರ್ಯಾಕ್ಟರ್​, ಕಾರು, ಬಸ್ಸುಗಳಲ್ಲಿ ಒಂದೇ ಕುಟುಂಬದ ಮಂದಿ ಚಿತ್ರಮಂದಿರಕ್ಕೆ ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇದಲ್ಲವೇ ‘ಬಾಸ್ ಕ್ರೇಜು’ ಎಂದು ಅಭಿಮಾನಿಗಳು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅದು ಮಾತ್ರವೇ ಅಲ್ಲದೆ, ತೆಲುಗು ರಾಜ್ಯಗಳಲ್ಲಿಯೇ ಮತ್ತೊಂದೆಡೆ ಒಂದೇ ಕುಟುಂಬದ 70 ಮಂದಿ ಒಟ್ಟಿಗೆ ತೆರಳಿ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ವೀಕ್ಷಿಸಿದ್ದಾರೆ. ಬಸ್ಸಿನಲ್ಲಿ ತೆರಳಿದ್ದ ಈ ಕುಟುಂಬ ದಾರಿಯುದ್ದಕ್ಕೂ ಬಾಸ್​​ಗೆ ಜಯಕಾರ ಹಾಕಿಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹಲವು ತೆಲುಗು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಮುಂಚೆಯೆಲ್ಲ ಹಳ್ಳಿಗಳಿಂದ ಟ್ರ್ಯಾಕ್ಟರ್​​ನಲ್ಲಿ ಪಟ್ಟಣಕ್ಕೆ ಬಂದು ಸಿನಿಮಾ ನೋಡುವ ಪದ್ಧತಿ ಇತ್ತು, ಇದೀಗ ಚಿರಂಜೀವಿಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾಕ್ಕೆ ಮತ್ತೆ ಹಳ್ಳಿಯ ಜನ ಟ್ರ್ಯಾಕ್ಟರುಗಳಲ್ಲಿ ಬಂದು ಸಿನಿಮಾ ನೋಡಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ:ಆ ಒಂದು ಕಾರಣಕ್ಕೆ ರಾಜಮೌಳಿ ಸಿನಿಮಾದಲ್ಲಿ ನಟಿಸುವುದಿಲ್ಲವಂತೆ ಮೆಗಾಸ್ಟಾರ್ ಚಿರಂಜೀವಿ

ಚಿರಂಜೀವಿ, ತೆಲುಗು ರಾಜ್ಯಗಳ ಸ್ಟಾರ್ ನಟ. ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಚಿತ್ರಮಂದಿರಕ್ಕೆ ಸೆಳೆದಿರುವ ನಟ. ಆದರೆ ಕಳೆದ ಕೆಲ ವರ್ಷಗಳಿಂದ ಅವರ ಸಿನಿಮಾಗಳು ಯಶಸ್ವಿ ಆಗದೆ ಅಭಿಮಾನಿಗಳಿಗೆ ಬೇಸರ ಮೂಡಿತ್ತು, ಆದರೆ ಇದೀಗ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಮತ್ತೆ ಚಿರಂಜೀವಿಯ ಹಳೆ ಖದರು ಮತ್ತೆ ಮೂಡಿದೆ. ಸಿನಿಮಾ ಬಗ್ಗೆ ಕೆಲ ವಿಮರ್ಶಕರು ಇದೊಂದು ಸಾಮಾನ್ಯ ಸಿನಿಮಾ ಎಂದಿದ್ದಾರೆ ಆದರೆ ಚಿರಂಜೀವಿ ಕೇವಲ ತಮ್ಮ ನಟನೆ ಮತ್ತು ಹಾಸ್ಯದಿಂದಲೇ ಮೋಡಿ ಮಾಡಿದ್ದು, ಪ್ರೇಕ್ಷಕರನ್ನು ಮತ್ತೆ ಮತ್ತೆ ಚಿತ್ರಮಂದಿರದತ್ತ ಸೆಳೆಯುತ್ತಿದ್ದಾರೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ನಯನತಾರಾ ನಾಯಕಿ. ಇದೇ ಸಿನಿಮಾನಲ್ಲಿ ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಈಗಾಗಲೇ 300 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಈ ವರ್ಷದ ಸಂಕ್ರಾಂತಿಯ ಹಿಟ್ ಸಿನಿಮಾ ಎನಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *