ತಮಿಳುನಾಡು ಮುಖ್ಯಮಂತ್ರಿ, ಕಾಲಿವುಡ್ ನಟ ವಿಜಯ್ (CM Vijay) ಅವರ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23ರಂದು ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ನಿರ್ದೇಶಕ ಹೆಚ್. ವಿನೋದ್ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮುಂದಿನ ವಾರದಿಂದ ‘ಜನ ನಾಯಗನ್’ (Jana Nayagan) ಚಿತ್ರಕ್ಕೆ ಡಿಲೀಟ್ ಮಾಡಲಾಗಿದ್ದ 6 ಹೊಸ ದೃಶ್ಯಗಳನ್ನು ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚೆನ್ನೈನಲ್ಲಿ ಸೋಮವಾರ (ಜುಲೈ 27) ನಡೆದ ‘ಜನ ನಾಯಗನ್’ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಿರ್ದೇಶಕ ಹೆಚ್. ವಿನೋದ್ ಭಾಗವಹಿಸಿ ಚಿತ್ರದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು. ಈ ವೇಳೆ ನಿರೂಪಕರು, ‘ಸಿನಿಮಾದಲ್ಲಿ ಡಿಲೀಟ್ ಮಾಡಿದ ದೃಶ್ಯಗಳಿವೆಯೇ’ ಎಂದು ಪ್ರಶ್ನಿಸಿದಾಗ, ನಿರ್ದೇಶಕರು ಈ ವಿಚಾರವನ್ನು ಬಹಿರಂಗಪಡಿಸಿದರು.
ಯಾವೆಲ್ಲಾ ದೃಶ್ಯಗಳು ಸೇರ್ಪಡೆಯಾಗಲಿವೆ?
‘ಹೌದು, ನಾವು ಸಿನಿಮಾದಿಂದ ಡಿಲೀಟ್ ಮಾಡಿದ್ದ 6 ದೃಶ್ಯಗಳಿವೆ. ಅದರಲ್ಲಿ ವಿಜಯ್ ಅವರ 2 ಕಾಮಿಡಿ ದೃಶ್ಯಗಳು, 2 ಆಕ್ಷನ್ ದೃಶ್ಯಗಳು ಹಾಗೂ 2 ಎಮೋಷನಲ್ ದೃಶ್ಯಗಳಿವೆ. ಇವುಗಳನ್ನು ಥಿಯೇಟರ್ಗಳಲ್ಲಿ ಪ್ರದರ್ಶಿಸುವ ಕುರಿತು ನಿರ್ಮಾಣ ಸಂಸ್ಥೆ ಯೋಜನೆ ರೂಪಿಸುತ್ತಿದೆ. ನನ್ನ ಕಡೆಯಿಂದ ನಾನು ಸಿದ್ಧನಿದ್ದು, ಮುಂದಿನ ವಾರದಿಂದ ಇವುಗಳನ್ನು ಚಿತ್ರಮಂದಿರಗಳಲ್ಲಿ ಸೇರಿಸಲು ಆಲೋಚಿಸುತ್ತಿದ್ದೇವೆ’ ಎಂದು ಹೆಚ್. ವಿನೋದ್ ಸ್ಪಷ್ಟಪಡಿಸಿದ್ದಾರೆ.
ಅನಿರುದ್ಧ್ ರವಿಚಂದರ್ ಭಾವುಕ ಪೋಸ್ಟ್:
‘ಜನ ನಾಯಗನ್’ ಬಿಡುಗಡೆಯಾದ ಬೆನ್ನಲ್ಲೇ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವಿಜಯ್ ಅವರ ಕೊನೆಯ ಸಿನಿಮಾಗೆ ಸಂಗೀತ ಸಂಯೋಜಿಸುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ತಿಳಿಸಿರುವ ಅವರು, ವಿಜಯ್ ಜೊತೆಗಿನ ಅಪರೂಪದ ಫೋಟೋ ಒಂದನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.
ಚಿತ್ರದ ತಾರಾಗಣ ಹಾಗೂ ಹಿನ್ನೆಲೆ:
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ನಿರ್ಮಿಸಿರುವ ‘ಜನ ನಾಯಗನ್’ ಚಿತ್ರವನ್ನು ಹೆಚ್. ವಿನೋದ್ ನಿರ್ದೇಶಿಸಿದ್ದಾರೆ. ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ವಿಳಂಬ ಮತ್ತು ಏಪ್ರಿಲ್ನಲ್ಲಿ ಎದುರಾದ ಪೈರಸಿ ಸಮಸ್ಯೆಯಿಂದಾಗಿ ಜುಲೈಗೆ ಮುಂದೂಡಲ್ಪಟ್ಟಿತ್ತು.
ಇದನ್ನೂ ಓದಿ: ಎ ಸರ್ಟಿಫಿಕೇಟ್ ಸಿನಿಮಾಗೆ ಮಕ್ಕಳನ್ನು ಕರೆತಂದ ಪೋಷಕರು; ‘ಜನ ನಾಯಗನ್’ ಪ್ರದರ್ಶನ ಬಂದ್
ಈ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ಬಾಬಿ ಡಿಯೋಲ್, ಪೂಜಾ ಹೆಗ್ಡೆ ಹಾಗೂ ಮಮಿತಾ ಬೈಜು ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಸರ್, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ನಾರಾಯಣ್ ಮತ್ತು ಪ್ರಿಯಾಮಣಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು 2023ರಲ್ಲಿ ತೆಲುಗಿನಲ್ಲಿ ಮೂಡಿಬಂದಿದ್ದ ‘ಭಗವಂತ್ ಕೇಸರಿ’ ಸಿನಿಮಾದ ರಿಮೇಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
