‘ಜನ ನಾಯಗನ್’ ಸಿನಿಮಾ ಬಿಡುಗಡೆ ತಡೆದಿದ್ದು ಯಾರು? ಮಾಹಿತಿ ನೀಡಿದ ನಿರ್ಮಾಪಕ – Kannada News | What really happened to Jana Nayagan movie why it is not released yet

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ತಮಿಳುನಾಡು ರಾಜಕೀಯದಲ್ಲಿ ಇತಿಹಾಸ ಬರೆದಿದ್ದು, ಇದೀಗ ರಾಜ್ಯದ ಸಿಎಂ ಆಗಿದ್ದಾರೆ. ಆದರೆ ಕೆಲವು ತಿಂಗಳುಗಳ ಮುಂಚೆ ಪರಿಸ್ಥಿತಿ ಭಿನ್ನವಾಗಿತ್ತು. ಅವರ ರಾಜಕೀಯ ಪಯಣಕ್ಕೆ ಹಲವು ಅಡ್ಡಗಾಲುಗಳು ಎದುರಾಗಿದ್ದವು. ಅವರ ಮೇಲೆ ಸತತ ವಾಗ್ದಾಳಿ, ಚಾರಿತ್ರ್ಯ ವಧೆಯ ಪ್ರಯತ್ನಗಳು ನಡೆದಿದ್ದವು, ಮಾತ್ರವಲ್ಲದೆ, ಅವರ ಸಿನಿಮಾ ‘ಜನ ನಾಯಗನ್’ ಬಿಡುಗಡೆಯನ್ನು ರಾಜಕೀಯ ಪ್ರಭಾವ ಬಳಸಿ ತಡೆಯಲಾಗಿತ್ತು. ಇದು ತಮ್ಮ ಕೊನೆಯ ಸಿನಿಮಾ ಎಂದು ವಿಜಯ್ ಹೇಳಿದ್ದರು, ಅಭಿಮಾನಿಗಳು ಸಹ ‘ಜನ ನಾಯಗನ್’ ನೋಡಲು ಕಾತರರಾಗಿದ್ದರು. ಆದರೆ ಸಿನಿಮಾ ಬಿಡುಗಡೆ ಆಗದಂತೆ ತಡೆಯಲಾಯ್ತು. ಈ ಸಿನಿಮಾದ ನಿರ್ಮಾಪಕ ವೆಂಕಟೇಶ್ ಕೆ ನಾರಾಯಣ್ (ಕೆವಿಎನ್ ಪ್ರೊಡಕ್ಷನ್) ಇದೀಗ ತಮ್ಮ ಸಿನಿಮಾದ ಬಿಡುಗಡೆ ನಿಲ್ಲಲು ಕಾರಣವೇನು? ಕಾರಣ ಯಾರು ಎಂದು ತಿಳಿಸಿದ್ದಾರೆ.

ಇಂಗ್ಲೀಷ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕೆವಿಎನ್, ‘2025ರ ಡಿಸೆಂಬರ್​​ನಲ್ಲಿಯೇ ನಾವು ಸಿಬಿಎಫ್​​ಸಿಗೆ ನಮ್ಮ ಸಿನಿಮಾವನ್ನು ಸಲ್ಲಿಕೆ ಮಾಡಿದ್ದೆವು. ಸಿಬಿಎಫ್​​ಸಿ ಸಮಿತಿಯು ಸಿನಿಮಾವನ್ನು ವೀಕ್ಷಿಸಿ ಯು/ಎ ಪ್ರಮಾಣ ಪತ್ರ ನೀಡಿತ್ತು. ಆದರೆ ಅದಾದ ಬಳಿಕ ವ್ಯಕ್ತಿಯೊಬ್ಬರ ದೂರಿನ ಆಧಾರದ ಮೇಲೆ ಸಿನಿಮಾವನ್ನು ರಿವಿಷನ್ ಕಮಿಟಿಗೆ ಕಳಿಸಲು ಮುಂದಾದರು. ಇದು ಸರಿಯಲ್ಲ, ಖಾಸಗಿ ವ್ಯಕ್ತಿಗಳ ದೂರುಗಳನ್ನು ಸಿಬಿಎಫ್​​ಸಿ ಪರಿಗಣಿಸುವಂತಿಲ್ಲ ಮತ್ತು ಸಿನಿಮಾ ಬಿಡುಗಡೆಗೆ ಮುಂಚೆ ಸಲ್ಲಿಕೆ ಆದ ದೂರುಗಳನ್ನು ಮಾನ್ಯ ಮಾಡುವಂತಿಲ್ಲ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಉದಾಹರಣೆಗಳು ನ್ಯಾಯಾಂಗದಲ್ಲಿವೆ. ಹಾಗಾಗಿ ನಾವು ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆವು’ ಎಂದಿದ್ದಾರೆ ಕೆವಿಎನ್.

‘ಆದರೆ ನ್ಯಾಯಾಲಯಕ್ಕೆ ಹೋದ ಬಳಿಕ ನಮಗೆ ಗೊತ್ತಾಗಿದ್ದು, ಸಿನಿಮಾದ ವಿರುದ್ಧ ದೂರು ನೀಡಿರುವುದು ಸಿಬಿಎಫ್​​ಸಿಯ ಸದಸ್ಯನೇ ಒಬ್ಬಾತ ಎಂದು. ಮೊದಲಿಗೆ ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ನೀಡಿದ ತಂಡದಲ್ಲಿ ಇದ್ದ ವ್ಯಕ್ತಿಯೇ ಆ ಬಳಿಕ ಸಿನಿಮಾದ ವಿರುದ್ಧ ದೂರು ಸಲ್ಲಿಸಿದ್ದ. ಬಳಿಕ ನಾವು ರಿವಿಷನ್ ಕಮಿಟಿಗೆ ಸಿನಿಮಾವನ್ನು ಕಳಿಸಲು ಒಪ್ಪಿಗೆ ಸೂಚಿಸಿದವು. ಆದರೆ ಆಗಿನಿಂದಲೂ ಸಿನಿಮಾ ಅಲ್ಲಿಯೇ ಸಿಲುಕಿಕೊಂಡಿದೆ. ಎಲ್ಲ ಫಾರ್ಮಾಲಿಟಿಗಳು ಪೂರ್ಣಗೊಂಡ ಬಳಿಕವಷ್ಟೆ ನಾವು ಸಿನಿಮಾ ಬಿಡುಗಡೆ ಮಾಡಬಹುದಾಗಿದೆ’ ಎಂದಿದ್ದಾರೆ ನಿರ್ಮಾಪಕ ವೆಂಕಟ್.

ಇದನ್ನೂ ಓದಿ:ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

‘ನಾವು ಸಿನಿಮಾ ಶುರು ಮಾಡಿದಾಗ, ಇದನ್ನೆಲ್ಲಾ ಎದುರಿಸಬೇಕಾಗುತ್ತದೆ ಅಂತ ನಮಗೆ ಗೊತ್ತಿರಲಿಲ್ಲ. ಈಗ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾರೆ. ಮತ್ತು ನಿಜವಾಗಿಯೂ ತಮಿಳುನಾಡಿನ ಜನನಾಯಕ ಆಗಿರುವುದು ನಮಗೆ ಅತೀವ ಸಂತೋಷ ತಂದಿದೆ. ಬಹುಶಃ ಅವರು ಮುಖ್ಯಮಂತ್ರಿಯಾದ ನಂತರ ಈ ಸಿನಿಮಾ ಬಿಡುಗಡೆಯಾಗಬೇಕೆಂಬುದು ವಿಧಿಯಾಗಿರಬಹುದು’ ಎಂದು ವೆಂಕಟ್ ಹೇಳಿದ್ದಾರೆ. ಆ ಮೂಲಕ ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.

‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಪೂಜಾ ಹೆಗ್ಡೆ, ಮಲಯಾಳಂನ ಮಮಿತಾ ಬಿಜು ನಟಿಸಿದ್ದಾರೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಬಿಡುಗಡೆ ತಡವಾಗುತ್ತಲೇ ಬರುತ್ತಿದೆ. ಇತ್ತೀಚೆಗಷ್ಟೆ ‘ಜನ ನಾಯಗನ್’ ಸಿನಿಮಾ ಆನ್​ಲೈನ್​​ನಲ್ಲಿ ಪೂರ್ಣವಾಗಿ ಲೀಕ್ ಸಹ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *