Headlines

ಜಮೀನಿನ ಕಾಗದಗಳು ಮಿಸ್ಸಿಂಗ್, ನಿಮ್ಮ ಮೆಮೊರಿ ಸುಧಾರಿಸಿಕೊಳ್ಳಿ ಎಂದು ಅಧಿಕಾರಿಯ ಟೇಬಲ್ ಮೇಲೆ ಬಾದಾಮಿ ಎಸೆದ ವ್ಯಕ್ತಿ – Kannada News | Almond Protest: Man Targets Officer Over Missing File in Unusual Way

ಛತ್ತೀಸ್​ಗಢ, ಏಪ್ರಿಲ್ 19: ಸರ್ಕಾರಿ ಕಚೇರಿಗಳಲ್ಲಿ ಫೈಲ್ ಕಳೆದುಹೋಗಿದೆ ಅಥವಾ ನಾಳೆ ಬನ್ನಿ ಎಂಬ ಮಾತುಗಳು ಅದೆಷ್ಟು ಜನಸಾಮಾನ್ಯರ ನಿದ್ದೆ ಗೆಡಿಸಿವೆಯೋ ಗೊತ್ತಿಲ್ಲ. ಆದರೆ ಬಿಲಾಸ್‌ಪುರದ ಟಿಫ್ರಾ ಹೌಸಿಂಗ್ ಬೋರ್ಡ್ ಕಚೇರಿಯಲ್ಲಿ ತರುಣ್ ಸಾಹು ಎಂಬ ಯುವಕ ಈ ನಿರ್ಲಕ್ಷ್ಯಕ್ಕೆ ನೀಡಿದ ಉತ್ತರ ಮಾತ್ರ ಅತ್ಯಂತ ಸೃಜನಶೀಲ ಮತ್ತು ಖಾರವಾಗಿತ್ತು. ತರುಣ್ ಸಾಹು ಒಂದು ವರ್ಷದ ಹಿಂದೆ ಮ ಒಂದು ಫ್ಲಾಟ್ ಖರೀದಿಸಿದ್ದರು. ಆಸ್ತಿಯ ಮಾಲೀಕತ್ವ ಅವರ ಹೆಸರಿಗೆ ಬದಲಾಗಬೇಕಾದರೆ (Mutation) ಹೌಸಿಂಗ್ ಬೋರ್ಡ್‌ನ ಫೈಲ್ ಅತ್ಯಗತ್ಯ. ಆದರೆ ಕಳೆದ ಒಂದು ವರ್ಷದಿಂದ ಅವರು ಕಚೇರಿಗೆ ಅಲೆದರೂ ಸಿಕ್ಕ ಉತ್ತರ ಮಾತ್ರ ಒಂದೇ ನಿಮ್ಮ ಫೈಲ್ ಕಾಣೆಯಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತ ತರುಣ್, ಅವರು ಅದೆಷ್ಟು ಬಾರಿ ಕೇಳಿದರೂ ನೆನಪಿಲ್ಲ ಎಂದು ಹೇಳುತ್ತಿದ್ದುದ್ದನ್ನು ಕಂಡು ಒಂದು ಉಪಾಯ ಮಾಡಿದರು. ಕಚೇರಿಗೆ ಬಂದ ತರುಣ್ ನೇರವಾಗಿ ಡೆಪ್ಯೂಟಿ ರಿಜಿಸ್ಟ್ರಾರ್ ಅವರ ಕೋಣೆಗೆ ನುಗ್ಗಿದರು. ಆದರೆ ಅಲ್ಲಿ ಅವರು ಕೂಗಾಡಲಿಲ್ಲ, ಗಲಾಟೆ ಮಾಡಲಿಲ್ಲ. ಬದಲಿಗೆ, ತಮ್ಮ ಕೈಯಲ್ಲಿದ್ದ ಬಾದಾಮಿಯ ಪೊಟ್ಟಣವನ್ನು ಬಿಚ್ಚಿ ಅಧಿಕಾರಿಯ ಮೇಜಿನ ಮೇಲೆ ಹರಡಿದರು.

ಬಾದಾಮಿ ತಿಂದರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂಬುದು ನಂಬಿಕೆ. ಅದನ್ನೇ ಅಸ್ತ್ರವಾಗಿ ಬಳಸಿದ ತರುಣ್, ಅಧಿಕಾರಿಗಳೇ, ನಿಮ್ಮ ಸ್ಮರಣಶಕ್ತಿ ತುಂಬಾ ಕಡಿಮೆಯಾಗಿದೆ ಎಂದು ಕಾಣುತ್ತದೆ. ಈ ಬಾದಾಮಿ ತಿನ್ನಿ, ಬಹುಶಃ ಆಗಲಾದರೂ ನನ್ನ ಫೈಲ್ ಎಲ್ಲಿದೆ ಎಂದು ನಿಮಗೆ ನೆನಪಾಗಬಹುದು ಎಂದು ಹೇಳಿದ್ದಾರೆ.

ತರುಣ್ ಸಾಹು ಈ ಇಡೀ ಘಟನೆಯನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಕೆಲವೇ ಗಂಟೆಗಳಲ್ಲಿ ಈ ವೀಡಿಯೊ ಲಕ್ಷಾಂತರ ಜನರನ್ನು ತಲುಪಿತು. ಸಾಮಾನ್ಯ ನಾಗರಿಕನೊಬ್ಬ ಅಧಿಕಾರಶಾಹಿಯ ವಿಳಂಬ ನೀತಿಗೆ ನೀಡಬಹುದಾದ ಅತ್ಯುತ್ತಮ ಉತ್ತರ ಇದೇ ಎಂದು ನೆಟ್ಟಿಗರು ತರುಣ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಈ ವೀಡಿಯೊದ ನಂತರ ಜಿಲ್ಲಾ ಆಡಳಿತದಲ್ಲಿ ಸಂಚಲನ ಮೂಡಿದ್ದು, ಕಾಣೆಯಾದ ದಾಖಲೆಗಳನ್ನು ಪತ್ತೆಹಚ್ಚಲು ಮತ್ತು ಕೂಡಲೇ ರೂಪಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ಈಗ ಒತ್ತಡಕ್ಕೆ ಸಿಲುಕಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Leave a Reply

Your email address will not be published. Required fields are marked *