ಕನ್ನಡ ನೆಲ, ಜಲ ಹಾಗೂ ಭಾಷೆಯ ಹಿರಿಮೆಯನ್ನು ಸಾರುವ ನೂರಾರು ಗೀತೆಗಳು ಕನ್ನಡ ಚಿತ್ರರಂಗದಲ್ಲಿ ಮೂಡಿಬಂದಿವೆ. ಆದರೆ, ಡಾ. ರಾಜ್ಕುಮಾರ್ ಅಭಿನಯದ ‘ಆಕಸ್ಮಿಕ’ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಹಾಡಿಗೆ ಇರುವ ಕ್ರೇಜ್ ಹಾಗೂ ಗೌರವವೇ ಬೇರೆ. ಕನ್ನಡಿಗರ ಪಾಲಿಗೆ ಇದು ಕೇವಲ ಒಂದು ಸಿನಿಮಾದ ಹಾಡಲ್ಲ, ಇದೊಂದು ಅನಧಿಕೃತ ನಾಡಗೀತೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸ ಬರೆದ ಈ ಕಲ್ಟ್ ಹಾಡು ಮೊದಲು ಸಿನಿಮಾದ ಕಥೆಯಲ್ಲೇ ಇರಲಿಲ್ಲ ಎಂಬ ಅಚ್ಚರಿಯ ಸಂಗತಿ ನಿಮಗೆ ಗೊತ್ತೇ?
- ಹಂಸಲೇಖ ಕಲ್ಪನೆಯಲ್ಲಿ ಮೂಡಿತ್ತು ‘ಹುಟ್ಟಿದರೆ ಕನ್ನಡ ನಾಡಲಿ’ ಹಾಡು
- ಸಾಹಿತ್ಯದ ಪುಸ್ತಕಗಳನ್ನು ಓದಲು ನಿರಾಕರಿಸಿದ್ದ ಹಂಸಲೇಖ
- ಡಿವಿಜಿ ಕಗ್ಗದಿಂದ ಪ್ರೇರಣೆಗೊಂಡು ಸಾಲುಗಳನ್ನು ಬರೆದರು
ಹೌದು, ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ‘ಆಕಸ್ಮಿಕ’ ಚಿತ್ರದ ಚಿತ್ರಕಥೆ ಸಿದ್ಧಪಡಿಸಿ ಅಣ್ಣಾವ್ರ ಮುಂದೆ ವಿವರಿಸಿದಾಗ ಆ ಸನ್ನಿವೇಶದಲ್ಲಿ ಯಾವುದೇ ಹಾಡಿನ ಪ್ಲ್ಯಾನ್ ಇರಲಿಲ್ಲವಂತೆ. ಆದರೆ ಚಿತ್ರಕಥೆಯ ಜೀನಿಯಸ್ ಒಬ್ಬರ ಮಾಸ್ಟರ್ ಐಡಿಯಾದಿಂದಾಗಿ ಈ ಹಾಡು ಜನ್ಮತಾಳಿತು.
ಕ್ಲೈಮ್ಯಾಕ್ಸ್ ಟ್ವಿಸ್ಟ್ ಬೇಡ ಎಂದಿದ್ದ ನಾಗಾಭರಣ!
ನಾಗಾಭರಣ ಅವರು ಸಿನಿಮಾದ ಸಂಪೂರ್ಣ ಕಥೆಯನ್ನು ಡಾ. ರಾಜ್ಕುಮಾರ್ ಅವರ ಸಹೋದರ ವರದಣ್ಣ ಅವರಿಗೆ ವಿವರಿಸಿದಾಗ, ಕಥೆಯ ಆ ನಿರ್ದಿಷ್ಟ ಜಾಗದಲ್ಲಿ ಒಂದು ಹಾಡಿದ್ದರೆ ಚೆನ್ನಾಗಿರುತ್ತದೆ ಎಂದು ವರದಣ್ಣ ಸಲಹೆ ನೀಡಿದರು. ಆದರೆ ನಾಗಾಭರಣ ಅವರಿಗೆ ಈ ಆಲೋಚನೆ ಇಷ್ಟವಾಗಲಿಲ್ಲ. ‘ಚಿತ್ರವು ಕ್ಲೈಮ್ಯಾಕ್ಸ್ ಹಂತ ತಲುಪಿರುವಾಗ ಹಾಡೊಂದನ್ನು ತೂರಿಸಿದರೆ ಸಿನಿಮಾದ ರೋಚಕತೆ ಕಮ್ಮಿಯಾಗುತ್ತದೆ, ಪ್ರೇಕ್ಷಕರ ಗಮನ ಬೇರೆಡೆಗೆ ಸರಿಯುತ್ತದೆ’ ಎಂಬುದು ನಿರ್ದೇಶಕರ ವಾದವಾಗಿತ್ತು.
ಆದರೆ ವರದಣ್ಣ ಅವರ ಯೋಚನೆಯೇ ಬೇರೆಯಾಗಿತ್ತು. ‘ನಮಗೆ ಬೇಕಿರುವುದೂ ಅದೇ! ಪ್ರೇಕ್ಷಕ ಕಥೆಯ ಗಂಭೀರತೆಯನ್ನು ಮರೆತು ಹಾಡಿನ ಮಜಾದಲ್ಲಿ ತೇಲಬೇಕು. ಹಾಡು ಮುಗಿಯುತ್ತಿದ್ದಂತೆಯೇ ದಿಢೀರ್ ಅಂತ ಒಂದು ಶಾಕ್ ಕೊಟ್ಟು ಮತ್ತೆ ಅವನನ್ನು ಕಥೆಯೊಳಗೆ ಎಳೆದುಕೊಂಡು ಬರಬೇಕು. ಇದು ಚಿತ್ರಕ್ಕೆ ದೊಡ್ಡ ಪ್ಲಸ್ ಆಗುತ್ತದೆ’ ಎಂದು ಮನವರಿಕೆ ಮಾಡಿಕೊಟ್ಟರು. ವರದಣ್ಣ ಅವರ ಈ ವಿಭಿನ್ನ ಆಲೋಚನೆಗೆ ನಾಗಾಭರಣ ಕೊನೆಗೂ ಒಪ್ಪಿಗೆ ಸೂಚಿಸಿದರು.
ಕುವೆಂಪು ಪುಸ್ತಕ ಬೇಡ ಎಂದಿದ್ದ ನಾದಬ್ರಹ್ಮ!
ಯಾವ ತರಹದ ಹಾಡು ಬೇಕು ಎಂದು ಚರ್ಚೆ ನಡೆದಾಗ, ಅಣ್ಣಾವ್ರು ಕನ್ನಡದ ಹಿರಿಮೆ ಸಾರುವ ಸಾಲುಗಳನ್ನು ಹಾಡಿ ಬಹಳ ದಿನಗಳಾಗಿವೆ, ಹಾಗಾಗಿ ಕನ್ನಡದ ಕುರಿತೇ ಹಾಡು ಮಾಡೋಣ ಎಂದು ವರದಣ್ಣ ಐಡಿಯಾ ಕೊಟ್ಟರು. ತಕ್ಷಣವೇ ನಾಗಾಭರಣ ಅವರು ರೆಫರೆನ್ಸ್ಗಾಗಿ ಕುವೆಂಪು ಸೇರಿದಂತೆ ಪ್ರಸಿದ್ಧ ಸಾಹಿತಿಗಳ ಕವನ ಸಂಕಲನಗಳನ್ನು ತಂದು ಹಂಸಲೇಖ ಅವರ ಕೈಗಿಟ್ಟರು. ಆದರೆ ಹಂಸಲೇಖ ಅವರು, “ನನಗೆ ಇಷ್ಟೊಂದು ಪುಸ್ತಕಗಳನ್ನು ಓದಲು ಸಮಯವಿಲ್ಲ, ಇವೆಲ್ಲವನ್ನೂ ವಾಪಸ್ ತಗೊಂಡು ಹೋಗಿ” ಎಂದು ಬೇಸರ ಮಾಡಿಕೊಂಡರಂತೆ!
ಡಿವಿಜಿಯವರ ಸಾಲಿನಿಂದ ಹುಟ್ಟಿತು ಮಹಾಕಾವ್ಯ!
ಪುಸ್ತಕಗಳನ್ನು ಬದಿಗಿಟ್ಟ ಹಂಸಲೇಖ ಅವರು ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಮಂಕುತಿಮ್ಮನ ಕಗ್ಗದ “ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ” ಎಂಬ ಸಾಲಿನಿಂದ ಪ್ರೇರಣೆ ಪಡೆದುಕೊಂಡರು. ಅದನ್ನೇ ಕೊಂಚ ಬದಲಾಯಿಸಿ “ಬದುಕಿದು ಜಟಕಾ ಬಂಡಿ, ವಿಧಿ ಓಡಿಸುವಾ ಬಂಡಿ” ಎಂದು ಸಾಲುಗಳನ್ನು ಹೊಸದಾಗಿ ಹೆಣೆದು ಅಣ್ಣಾವ್ರ ಮನೆಗೆ ಹೋಗಿ ಹಾಡಿ ತೋರಿಸಿದರು.
ಇದನ್ನೂ ಓದಿ: ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು
ಹಾಡಿನ ಸಾಲುಗಳ ಬಗ್ಗೆ ಚರ್ಚೆ ಮುಂದುವರಿದಾಗ, ಹಂಸಲೇಖ ಅವರ ಕಲ್ಪನೆಯಲ್ಲಿ ಮೂಡಿದ್ದೇ “ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು” ಎಂಬ ಅಮರ ಸಾಲು. ಇದನ್ನೇ ಹಾಡಿನ ಪಲ್ಲವಿಯನ್ನಾಗಿ ಮಾಡಲು ಇಡೀ ತಂಡ ಒಪ್ಪಿಕೊಂಡಿತು. ಅಲ್ಲಿಂದ ಮುಂದೆ ಹಂಸಲೇಖ ಅವರು ಬರೆದ ಪ್ರತಿಯೊಂದು ಸಾಲುಗಳು ಇಂದಿಗೂ ಕೋಟ್ಯಂತರ ಕನ್ನಡಿಗರ ರಕ್ತದಲ್ಲಿ ದೇಶಾಭಿಮಾನದ ಕಿಚ್ಚು ಹೊತ್ತಿಸುತ್ತಿವೆ. ಇಬ್ಬರು ಸಿನಿಮೀಯ ಜೀನಿಯಸ್ಗಳ ದೂರದೃಷ್ಟಿಯಿಂದ ಮೂಡಿಬಂದ ಈ ಹಾಡು ಇಂದಿಗೂ ಮರೆಯಲಾಗದ ಇತಿಹಾಸ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
