ಬೈಲಹೊಂಗಲ, ಜು.23: ನದಿಯ ನೀರಿನ ಭಾರಿ ಸೆಳೆತದ ನಡುವೆಯೂ ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು ಮಲಪ್ರಭಾ ನದಿಗೆ ಧುಮುಕಿ, ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಸಾಹಸಿಕವಾಗಿ ರಕ್ಷಿಸಿರುವ ಶ್ಲಾಘನೀಯ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ನಡೆದಿದೆ. ನದಿಗೆ ಜಿಗಿದು ಯುವತಿಯ ಜೀವ ಉಳಿಸಿದ ಈ ಸಾಹಸಿ ಯುವಕನನ್ನು ಮಲ್ಲಿಕಾರ್ಜುನ ಗಾಣಿಗೇರ ಎಂದು ಗುರುತಿಸಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮನನೊಂದಿದ್ದ ಯುವತಿ, ಬೈಲಹೊಂಗಲ ತಾಲೂಕಿನ ನಯಾನಗರ ಸಮೀಪದ ಸೇತುವೆಯ ಮೇಲಿಂದ ಬರೋಬ್ಬರಿ 120 ಅಡಿ ಎತ್ತರದಿಂದ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನದಿಯಲ್ಲಿ ಸದ್ಯ ನೀರು ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಯುವತಿ ಕೊಚ್ಚಿ ಹೋಗಿ ಮುಳುಗುತ್ತಿದ್ದಳು. ಈ ದೃಶ್ಯವನ್ನು ಕಂಡ ಸ್ಥಳೀಯ ಯುವಕ ಮಲ್ಲಿಕಾರ್ಜುನ ಗಾಣಿಗೇರ, ಒಂದು ಕ್ಷಣವೂ ಯೋಚಿಸದೆ ತಕ್ಷಣವೇ ನದಿಗೆ ಜಿಗಿದಿದ್ದಾರೆ. ಮುಳುಗುತ್ತಿದ್ದ ಯುವತಿಯನ್ನು ಸುರಕ್ಷಿತವಾಗಿ ದಡಕ್ಕೆ ತಂದು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯಪ್ರಜ್ಞೆ ಹಾಗೂ ಅಪಾರ ಧೈರ್ಯ ಪ್ರದರ್ಶಿಸಿ ಯುವತಿಯ ಜೀವ ಉಳಿಸಿದ ಮಲ್ಲಿಕಾರ್ಜುನ ಗಾಣಿಗೇರ ಅವರ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ