ಜುಲೈ 27ರಂದು ಸಂಸತ್​​ನಲ್ಲಿ ಮಹತ್ವದ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕ ಮಂಡನೆ – Kannada News | Modi Government to introduce Public Examinations Amendment Bill 2026 in Lok Sabha on July 27 after NEET row

ನವದೆಹಲಿ, ಜುಲೈ 25: ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮಗಳನ್ನು ಖಂಡಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ್ದು, ಸಿಜೆಪಿ ನೇತೃತ್ವದ ಪ್ರತಿಭಟನಾಕಾರರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಇದರ ಬೆನ್ನಲ್ಲೇ, ಜುಲೈ 27ರ ಸೋಮವಾರದಂದು ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ (Public Examinations Amendment Bill 2026) ಮಂಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ.

ಲೋಕಸಭೆಯ ಶಾಸನಸಭಾ ಕಲಾಪಗಳ ಕಾರ್ಯಸೂಚಿಯಂತೆ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು 2024ರ ಕಾಯ್ದೆಗೆ ತಿದ್ದುಪಡಿ ತರುವ ಈ ಮಸೂದೆಯನ್ನು ಮಂಡಿಸಲಿದ್ದಾರೆ. ಮಸೂದೆ ಮಂಡನೆಯಾದ ತಕ್ಷಣವೇ, ಅದನ್ನು ಪರಿಶೀಲನೆಗೆ ತೆಗೆದುಕೊಂಡು ಸದನದಲ್ಲಿ ಅಂಗೀಕರಿಸಲು ಪ್ರಸ್ತಾವನೆ ಸಲ್ಲಿಸಲಿದ್ದಾರೆ.

‘ನೀಟ್’ (NEET-UG 2026) ಪೇಪರ್ ಲೀಕ್ ವಿವಾದವು ರಾಷ್ಟ್ರವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಗೆ ಕಾರಣವಾಗಿತ್ತು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಇಡೀ ಪರೀಕ್ಷಾ ವ್ಯವಸ್ಥೆಯಲ್ಲಿ ಜವಾಬ್ದಾರಿಯನ್ನು ತರಲು ಈ ಕಠಿಣ ತಿದ್ದುಪಡಿಗಳನ್ನು ತರಲಾಗುತ್ತಿದೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ 2 ಪುಟಗಳ ರಾಜೀನಾಮೆ ಪತ್ರದಲ್ಲೇನಿದೆ?

ಹೊಸ ವಿಧೇಯಕದಲ್ಲಿ ಏನಿದೆ?

ಪರೀಕ್ಷಾ ಪೇಪರ್ ಲೀಕ್ ಮತ್ತು ಅಕ್ರಮಗಳನ್ನು ತಡೆಯಲು ಈ ಮಸೂದೆಯು ಅತ್ಯಂತ ಕಠಿಣ ಕಾನೂನು ಚೌಕಟ್ಟು, ಕಾಲಮಿತಿಯ ತನಿಖೆ ಮತ್ತು ಫಾಸ್ಟ್-ಟ್ರ್ಯಾಕ್ ವಿಚಾರಣೆಯನ್ನು ಪ್ರಸ್ತಾಪಿಸುತ್ತದೆ.

ಕಾಲಮಿತಿಯ ತನಿಖೆ: ಪೇಪರ್ ಲೀಕ್ ಪ್ರಕರಣಗಳ ತನಿಖೆಯನ್ನು 2 ತಿಂಗಳ ಒಳಗೆ ಪೂರ್ಣಗೊಳಿಸಬೇಕು.

ಅಕ್ರಮಗಳಿಗೆ ಶಿಕ್ಷೆ: ಪೇಪರ್ ಲೀಕ್ ಅಥವಾ ಅಕ್ರಮ ಎಸಗಿದ ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷದಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.

ಸಂಘಟಿತ ಅಪರಾಧಗಳಿಗೆ ಶಿಕ್ಷೆ: ಸಂಘಟಿತ ಪರೀಕ್ಷಾ ವಂಚನೆ/ಮಾಫಿಯಾಗಳಿಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿಯವರೆಗೆ ದಂಡ ಪ್ರಸ್ತಾಪಿಸಲಾಗಿದೆ.

ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳು: ಇಂತಹ ಪ್ರಕರಣಗಳ ವಿಚಾರಣೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಇವು ಚಾರ್ಜ್‌ಶೀಟ್ ಸಲ್ಲಿಸಿದ 3 ತಿಂಗಳ ಒಳಗೆ ವಿಚಾರಣೆ ನಡೆಸಿ ತೀರ್ಪು ನೀಡಬೇಕು.

ವಿಶೇಷ ಟಾಸ್ಕ್ ಫೋರ್ಸ್: ಅಗತ್ಯ ಬಿದ್ದಾಗ ಪೇಪರ್ ಲೀಕ್ ಪ್ರಕರಣಗಳ ತನಿಖೆಗೆ ಕೇಂದ್ರ ಸರ್ಕಾರವು ವಿಶೇಷ ಕಾರ್ಯಪಡೆಯನ್ನು ರಚಿಸಲು ಈ ಕಾನೂನು ಅಧಿಕಾರ ನೀಡುತ್ತದೆ.

ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಶುಕ್ರವಾರವೇ ಕೇಂದ್ರ ಸಂಪುಟವು ಈ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪರೀಕ್ಷಾ ಅಕ್ರಮ ಎಸಗುವವರ ವಿರುದ್ಧ ಕಠಿಣ ಕಾನೂನು ತರುವುದಾಗಿ ಹಾಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದ್ದರು.

ವಿದ್ಯಾರ್ಥಿಗಳಿಗೆ ಸರ್ಕಾರದ ಭರವಸೆಗಳು:

ಕೇಂದ್ರ ಸರ್ಕಾರವು ಪ್ರಮುಖ ಬೇಡಿಕೆಗಳನ್ನು ಒಪ್ಪಿಕೊಂಡು ಭರವಸೆ ನೀಡಿದ ಬೆನ್ನಲ್ಲೇ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇಂದು ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಿತು. ಸಿಜೆಪಿ ವಕ್ತಾರರ ಜೊತೆ 3ನೇ ಸುತ್ತಿನ ಮಾತುಕತೆಯ ನಂತರ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತನಾಡಿ, ಪ್ರತಿಭಟನಾಕಾರರು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಳನ್ನು ಒಳಗೊಂಡ 5 ಅಂಶಗಳ ಬೇಡಿಕೆಗಳ ಚಾರ್ಟರ್ ಅನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನಾಕಾರರು ಅಥವಾ ಸಂಘಟಕರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ ಮತ್ತು ಈ ಚಳವಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸುವುದಿಲ್ಲ. ನೀಟ್ ಬಿಕ್ಕಟ್ಟಿನಿಂದಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ನಿಯಮಾವಳಿಗಳ ಪ್ರಕಾರ ನೀಡಬಹುದಾದ ಗರಿಷ್ಠ ಪರಿಹಾರವನ್ನು ಒದಗಿಸುವ ಭರವಸೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *