‘ಜೇಡರ ಬಲೆ’ ಸಿನಿಮಾ ಕತೆ ಕೇಳಿ ಬಿದ್ದು-ಬಿದ್ದು ನಕ್ಕಿದ್ದ ಅಣ್ಣಾವ್ರು: ಕಾರಣವೇನು? – Kannada News | How Kannada’s first spy action movie Jedara Bale made, what was Dr Rajkumar’s reaction

ಜೇಡರ ಬಲೆ’ (Jedara Bale) ಕನ್ನಡದ ಮೊಟ್ಟ ಮೊದಲ ಬಾಂಡ್ ಸಿನಿಮಾ. ಡಾ ರಾಜ್​ಕುಮಾರ್ ಅವರು ಈ ಸಿನಿಮಾದ ನಾಯಕ. 1968ರಲ್ಲಿ ಬಿಡುಗಡೆ ಆದ ಈ ಸಿನಿಮಾ ನಿರ್ದೇಶನ ಮಾಡಿದ್ದು ದೊರೈ-ಭಗವಾನ್. ಸಿನಿಮಾ ಆಗಿನ ಕಾಲಕ್ಕೆ ಭಾರಿ ದೊಡ್ಡ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ, ಸಿನಿಮಾದ ತಂತ್ರಜ್ಞಾನ, ನಿರ್ಮಾಣ ಚತುರತೆಯಿಂದ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಆ ನಂತರ ಕನ್ನಡದಲ್ಲಿ ಸ್ಪೈ ಸಿನಿಮಾಗಳು, ಥ್ರಿಲ್ಲರ್ ಸಿನಿಮಾಗಳು ಹೇರಳವಾಗಿ ಮೂಡಿ ಬರಲು ವೇದಿಕೆ ಹಾಕಿಕೊಟ್ಟ ಸಿನಿಮಾ ಸಹ ಇದಾಯ್ತು. ಆದರೆ ಮೊದಲ ಬಾರಿಗೆ ಈ ಸಿನಿಮಾದ ಚರ್ಚೆ ಬಂದಾಗ ಅಣ್ಣಾವ್ರು ಬಿದ್ದು-ಬಿದ್ದು ನಕ್ಕಿದ್ದರಂತೆ. ಈ ಬಗ್ಗೆ ಭಗವಾನ್ ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದರು.

ಡಾ ರಾಜ್​ಕುಮಾರ್, ದೊರೈ-ಭಗವಾನ್ ಅವರು ಬೆಂಗಳೂರಿನಲ್ಲಿ ಇಂಗ್ಲೀಷಿನ ಮೊದಲ ಬಾಂಡ್ ಸಿನಿಮಾ ‘ಡಾ ನೋ’ ಸಿನಿಮಾ ನೋಡಲು ಹೋಗಿದ್ದರಂತೆ. ‘ಡಾ ನೋ’ ಮೊಟ್ಟ ಮೊದಲ ಜೇಮ್ಸ್ ಬಾಂಡ್ ಸಿನಿಮಾ. ಅತ್ಯಂತ ಹಳೆಯ ಹಾಲಿವುಡ್​ ಸಿನಿಮಾ ಸರಣಿಗಳಲ್ಲಿ ಒಂದು. ಆ ಸಿನಿಮಾ 1962 ರಲ್ಲಿ ಬಿಡುಗಡೆ ಆಗಿತ್ತು. ಭಾರತಕ್ಕೆ ಬರುವಷ್ಟರಲ್ಲಿ ಕೆಲ ವರ್ಷಗಳೇ ಆಗಿದ್ದವು. ಅಣ್ಣಾವ್ರು, ದೊರೈ-ಭಗವಾನ್ ಅವರುಗಳು ‘ಡಾ ನೋ’ ಸಿನಿಮಾ ನೋಡಿದ ಬಳಿಕ ಹೋಟೆಲ್ ಒಂದರಲ್ಲಿ ದೋಸೆ ತಿನ್ನಲು ಹೋದರಂತೆ. ಅಲ್ಲಿಯೇ ‘ಜೇಡರ ಬಲೆ’ ಸಿನಿಮಾದ ಕತೆ ಹೊಳೆದಿದ್ದು.

ಮೊದಲಿಗೆ ದೊರೈ ಅವರು ‘ಡಾ ನೋ’ ಮಾದರಿಯ ಸ್ಪೈ ಸಿನಿಮಾವನ್ನು ಕನ್ನಡದಲ್ಲಿ ಮಾಡಿದರೆ ಹೇಗೆ ಎಂದರಂತೆ. ಅದಕ್ಕೆ ಅಣ್ಣಾವ್ರು ನಗಲು ಆರಂಭಿಸಿದರಂತೆ. ಅವರು ಬಾಯಲ್ಲಿಟ್ಟಿದ್ದ ದೋಸೆ, ಕೆಳಗೆ ಬಿದ್ದು, ನಗುವಿಗೆ ನೆತ್ತಿಗೆ ಹತ್ತಿ ಬಿಟ್ಟಿತಂತೆ ಅಷ್ಟು ನಗಲು ಆರಂಭಿಸಿಬಿಟ್ಟರಂತೆ ರಾಜ್​ಕುಮಾರ್. ಏಕೆಂದು ದೊರೈ ಕೇಳಿದಾಗ, ‘ಅಲ್ಲ ಆ ಹಾಲಿವುಡ್ ಸಿನಿಮಾ ಎಲ್ಲಿ, ನಮ್ಮ ಕನ್ನಡದ ಸಿನಿಮಾ ಎಲ್ಲಿ, ಆ ಮಟ್ಟದ ತಂತ್ರಜ್ಞಾನ ಇತರೆಗಳು ನಮ್ಮಲ್ಲಿ ತರಲು ಆಗುತ್ತದೆಯೇ? ನವಿಲು ನೋಡಿ ಕೆಂಬೂತ ಕುಣಿದಂತೆ ಆಗುತ್ತದೆ’ ಎಂದರಂತೆ ರಾಜ್​ಕುಮಾರ್.

ಇದನ್ನೂ ಓದಿ:54 ವರ್ಷದ ಬಳಿಕ ‘ಜೇಡರ ಬಲೆ’ ಚಿತ್ರದ ಶೀರ್ಷಿಕೆ ಮರುಬಳಕೆ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

ಆದರೆ ದೊರೈ ಅವರು ಹಠ ಬಿಡಲಿಲ್ಲವಂತೆ, ಅಣ್ಣಾವ್ರ ಆ ನಗುವನ್ನು ಸವಾಲಾಗಿ ಸ್ವೀಕರಿಸಿದ ದೊರೈ ಅವರು, ‘ನೀವು ಹೂ ಎನ್ನಿ ಸಾಕು, ನಾವು ಸಿನಿಮಾ ಮಾಡುತ್ತೇವೆ’ ಎಂದರಂತೆ. ಸರಿ ಅಣ್ಣಾವ್ರು ಸಹ ಸರಿಯೆಂದು ಒಪ್ಪಿಕೊಂಡರು. ಆ ಬಳಿಕ ‘ಜೇಡರ ಬಲೆ’ ಸಿನಿಮಾ ನಿರ್ಮಾಣ ಆಯ್ತು. ಅಣ್ಣಾವ್ರು ನಟಿಸಿದ ಮೊಟ್ಟ ಮೊದಲ ಬಾಂಡ್ ಸಿನಿಮಾ ಮಾತ್ರವೇ ಅಲ್ಲದೆ, ಕನ್ನಡದ ಮೊಟ್ಟ ಮೊದಲ ಬಾಂಡ್ ಸಿನಿಮಾ ಎಂಬ ಖ್ಯಾತಿಯನ್ನು ಪಡೆದುಕೊಂಡಿತು ಈ ಸಿನಿಮಾ.

1968ರ ಜನವರಿಯಲ್ಲಿ ‘ಜೇಡರ ಬಲೆ’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾದ ಯಶಸ್ಸಿನಿಂದ ಸ್ಪೂರ್ತಿಗೊಂಡು ಹಿಂದಿಯಲ್ಲಿ ‘ಆಂಖೆ’ ಹೆಸರಿನ ಸ್ಪೈ ಸಿನಿಮಾ ಮಾಡಲಾಯ್ತು. ಆದರೆ ಅದಕ್ಕಿಂತಲೂ ಮುಂಚೆ ತೆಲುಗಿನಲ್ಲಿ 1966 ರಲ್ಲಿ ‘ಗೂಢಚಾರಿ 116’ ಹೆಸರಿನ ಸ್ಪೈ ಥ್ರಿಲ್ಲರ್ ಸಿನಿಮಾವನ್ನು ಮಾಡಲಾಗಿತ್ತು. ಈ ಸಿನಿಮಾದ ನಾಯಕ ಮಹೇಶ್ ಬಾಬು ಅವರ ತಂದೆ ಕೃಷ್ಣ ಮತ್ತು ನಾಯಕಿ, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *