ಬೆಂಗಳೂರು, (ಆಗಸ್ಟ್ 13): ಅತ್ಯಾಚಾರ ಪ್ರರಕರಣದಲ್ಲಿ ಜೀವಾವಧಿ ಶಿಕ್ಷಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Pralwal Revanna) ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು…ಸಿಸಿಬಿ ಪೊಲೀಸರು (CCB Police) ದಾಳಿ ಮಾಡಿದಾಗ ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್, ಪೆನ್ಡ್ರೈವ್ ಹಾಗೂ ಡೈರಿ ಪತ್ತೆಯಾಗಿದ್ದು, ಮೊಬೈಲ್, ಪೆನ್ಡ್ರೈವ್ ಪರಿಶೀಲನೆ ಮಾಡಿದಾಗ ಅಶ್ಲೀಲ ವಿಡಿಯೋಗಳು ಸಿಕ್ಕಿವೆ ಎನ್ನಲಾಗಿತ್ತು. ಆದ್ರೆ, ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಪ್ರಜ್ವಲ್ ಬ್ಯಾರಕ್ನಲ್ಲಿ ಸಿಕ್ಕ ಪೆನ್ಡ್ರೈವ್ನಲ್ಲಿ ವಿಡಿಯೋಗಳು ಇಲ್ಲ ಎಂದು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಡಿಸಿಪಿ ಎಂ.ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಪೆನ್ಡ್ರೈವ್ನಲ್ಲಿ ವಿಡಿಯೋಗಳಿಲ್ಲ
ಈ ಸಂಬಂಧ ಮಾಧ್ಯಮಗಳಿ ಪ್ರತಿಕ್ರಿಯಿಸಿರುವ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಡಿಸಿಪಿ ಎಂ.ನಾರಾಯಣ,
ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆದಿದ್ದು, ಆ ವೇಳೆ ಹೈಸೆಕ್ಯೂರಿಟಿ ಸೆಲ್ನಲ್ಲಿ ನಿಷೇಧಿತ ವಸ್ತು ಪತ್ತೆಯಾಗಿವೆ. ರೆಡ್ಮಿ ಫೋನ್, ಚಾರ್ಜರ್, ಸಿಮ್, ಪೆನ್ಡ್ರೈವ್, ಡೇರಿ ಪತ್ತೆ ಆಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಿಸಿಬಿ ದೂರು ದಾಖಲಿಸಿದೆ. ಆದ್ರೆ, ಪೆನ್ಡ್ರೈವ್ನಲ್ಲಿ ವಿಡಿಯೋಗಳಿವೆ ಎಂಬ ವರದಿ ಸತ್ಯಕ್ಕೆ ದೂರುವಾದುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಸಿಕ್ಕ ಮೊಬೈಲ್, ಪೆನ್ಡ್ರೈವ್ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ
ಜೈಲಿನಲ್ಲಿ ಸಿಕ್ಕ ನಿಷೇಧಿತ ವಸ್ತುಗಳನ್ನ ಸೀಜಿಂಗ್ ಮಾಡಿದ್ದು, ಸೀಲ್ ಮಾಡಿ ತನಿಖಾಧಿಕಾರಿಗಳಿಗೆ ನೀಡಲಾಗಿದೆ. ಆರೋಪಿಗಳು ಮೊಬೈಲ್ಫೋನ್ನ ಪಾಸ್ವರ್ಡ್ ಸಹ ಹೇಳಿಲ್ಲ. ಫೋನ್ ಯಾರು ಬಳಸುತ್ತಿದ್ದರೆಂದು ತನಿಖೆಯಲ್ಲಿ ಗೊತ್ತಾಗಲಿದೆ. ಮೊಬೈಲ್ಫೋನ್ ಹೇಗೆ ಜೈಲಿನೊಳಗೆ ಬಂತೆಂದು ತನಿಖೆ ನಡೆಸುತ್ತೇವೆ. ಸೀಲ್ಡ್ ಕವರ್ನಲ್ಲಿರುವ ನಿಷೇಧಿತ ವಸ್ತುಗಳನ್ನು FSLಗೆ ಕಳಿಸಲಾಗುತ್ತೆ ಎಂದರು.
ಪ್ರಜ್ವಲ್ ರೇವಣ್ಣನನ್ನು ವಿಚಾರಣೆಗೊಳಪಡಿಸಿಲ್ಲ
ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರೈನನ್ನು ವಿಚಾರಣೆ ನಡೆಸಿಲ್ಲ. ಟೆಕ್ನಿಕಲ್ ಸಾಕ್ಷ್ಯದಾರಗಳು ಬಂದ ಬಳಿಕ ಆರೋಪಿಗಳ ವಿಚಾರಣೆ ನಡೆಯುತ್ತೆ. ಬಳಿಕ ಪಾಸ್ವರ್ಡ್, ಸಿಡಿಆರ್ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತೆ. ರೆಡ್ಮಿ ಮೊಬೈಲ್ ಬಳಸಿದ್ರೆ ಸಿಗ್ನಲ್ ಸಿಗುತ್ತೆಂದು ಕೈದಿಗಳು ತಿಳಿದುಕೊಂಡಿದ್ರು. ಜೈಲಿನಲ್ಲಿ ಜಾಮರ್ ಇದ್ದರೂ 2G, 3G ನೆಟ್ವರ್ಕ್ಗಳು ಸಿಗುತ್ತಿವೆ. ಭದ್ರತಾ ದೃಷ್ಟಿಯಿಂದ ರೆಡ್ಮಿ ಕಂಪನಿಗೂ ಕೂಡ ಪತ್ರ ಬರೆಯುತ್ತೇವೆ. ಈಗಾಗಲೇ ಜೈಲಿನಲ್ಲಿ ಈ ಹಿಂದೆ ಸಿಕ್ಕ ಸಿಮ್ಕಾರ್ಡ್ ಪರಿಶೀಲಿಸಲಾಗಿದ್ದು, ಎಲ್ಲವೂ ಫೇಕ್ ಐಡಿ ಮೂಲಕ ತೆಗೆದುಕೊಂಡಿದ್ದಾರೆ. ಎಲ್ಲದರ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಇನ್ನು ಈ ಪ್ರಕರಣದ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ವಿಭಾಗ ಪೊಲೀಸರು ತನಿಖೆ ನಡೆಸ್ತಿದ್ದಾರೆ, ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕೂಡ ತನಿಖೆ ನಡೆಸುವಂತೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ.
ಒಟ್ಟಿನಲ್ಲಿ ಜೈಲಿನಲ್ಲಿ ಮೊಬೈಲ್ ಸಿಕ್ಕ ಪ್ರಕರಣ ಸಂಚಲನ ಸೃಷ್ಟಿಸಿದ್ದು,ಜೈಲನ್ನು ಸರಿಪಡಿಸಲು ಸಾಧ್ಯವೇ ಇಲ್ಲವೇನೊ ಎಂಬ ವಾತಾವರಣ ಸೃಷ್ಟಿಯಾಗಿದೆ.