ನಾಯಕಿ ಅನುಪಮಾ ಪರಮೇಶ್ವರನ್ (Anupama) ಸದ್ಯ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣದಿಂದ ಚರ್ಚೆಯಲ್ಲಿದ್ದಾರೆ. ವಿಷಕಾರಿ ಸಂಬಂಧ ಹಾಗೂ ಬ್ರೇಕಪ್ ಬಗ್ಗೆ ಮಾತನಾಡುವಾಗ ಅವರು ಕಣ್ಣೀರು ಹಾಕಿದ್ದಾರೆ. ಖಿನ್ನತೆಯ ಸಮಯದಲ್ಲಿ ತಮಗೆ ಬೆಂಬಲವಾಗಿ ನಿಂತ ನಟರ ಬಗ್ಗೆಯೂ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಖಿನ್ನತೆಯ ಕರಾಳ ದಿನಗಳಲ್ಲಿ ನಟ ದುಲ್ಕರ್ ಸಲ್ಮಾನ್ ತಮ್ಮ ಬೆಂಬಲಕ್ಕೆ ನಿಂತರು ಎಂದು ಅನುಪಮಾ ತಿಳಿಸಿದ್ದಾರೆ. ತಾನು ನೋವಿನಲ್ಲಿದ್ದಾಗ ದುಲ್ಕರ್ ಅವರಿಂದ ತಪ್ಪದೇ ಸಂದೇಶ ಬರುತ್ತದೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟ ರಾಮ್ ಪೋಥಿನೇನಿ ಕೂಡ ತಮಗೆ ಕಷ್ಟದ ಸಮಯದಲ್ಲಿ ನೆರವಾದರು ಎಂದು ಹೇಳಿದ್ದಾರೆ. ಈ ಇಬ್ಬರು ನಟರ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ನಟಿ ಸ್ಪಷ್ಟಪಡಿಸಿದ್ದಾರೆ.
ಮಾಜಿ ಗೆಳೆಯನಿಂದ ತಾನು ನಾರ್ಸಿಸಿಸ್ಟಿಕ್ ನಿಂದನೆ ಅಂದರೆ ಮಾನಸಿಕ ಕಿರುಕುಳ ಅನುಭವಿಸಿದ್ದೆ ಎಂದು ಅನುಪಮಾ ಬಿಚ್ಚಿಟ್ಟಿದ್ದಾರೆ. ಅಂತಹ ಜನರು ಸದಾ ಇತರರನ್ನು ತಮ್ಮ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ ಎಂದು ನೋವು ತೋಡಿಕೊಂಡಿದ್ದಾರೆ. ಈ ಕಹಿ ಅನುಭವದಿಂದ ಹೊರಬರಲು ತಮಗೆ ಸಾಕಷ್ಟು ಸಮಯ ಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.
ಸಿನಿಮಾ ವೃತ್ತಿಜೀವನದ ವಿಚಾರಕ್ಕೆ ಬಂದರೆ, ಅನುಪಮಾ ಈ ವರ್ಷ ಈಗಾಗಲೇ ‘ಲಾಕ್ಡೌನ್’ ಹಾಗೂ ‘ಮರಿಚಿಕಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರು ಶರ್ವಾನಂದ್ ಜೋಡಿಯಾಗಿ ‘ಭೋಗಿ’ ಚಿತ್ರದಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ವೃತ್ತಿಪರ ಜೀವನದಲ್ಲಿ ಯಶಸ್ಸು ಕಾಣುತ್ತಿದ್ದರೂ ವೈಯಕ್ತಿಕ ಬದುಕಿನ ಕಹಿ ಘಟನೆಗಳು ಅವರ ಅಭಿಮಾನಿಗಳಿಗೆ ಆಘಾತ ತಂದಿವೆ. ನಟಿಯ ಈ ಧೈರ್ಯದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.
ಇದನ್ನೂ ಓದಿ: ‘ನನ್ನ ಸೋಶಿಯಲ್ ಮೀಡಿಯಾ, ನಾನು ಏನು ಬೇಕಾದ್ರೂ ಪೋಸ್ಟ್ ಮಾಡ್ತೀನಿ’; ಅನುಪಮಾ ಪರಮೇಶ್ವರನ್
ಅನುಪಮಾ ಪರಮೇಶ್ವರನ್ ಅವರು ತಮ್ಮ ಬಾಯ್ಫ್ರೆಂಡ್ ಯಾರು ಎಂದು ಹೇಳಿಲ್ಲ. ಚಿಯಾನ್ ವಿಕ್ರಮ್ ಮಗ ಧ್ರುವ್ ಅವರ ಬಾಯ್ಫ್ರೆಂಡ್ ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಇಬ್ಬರೂ ಮೊದಲು ಒಟ್ಟಿಗೆ ನಟಿಸಿದ್ದರು. ಹೀಗಾಗಿ, ಇಬ್ಬರ ಹೆಸರು ಚರ್ಚೆಯಲ್ಲಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
