ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಅದು ಸಹ ಝಿಂಬಾಬ್ವೆ ತಂಡದ ವಿರುದ್ಧ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ. ಈ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಆ ಚಿಂತೆಯೇ ಕಳಪೆ ಫೀಲ್ಡಿಂಗ್.
ಟೀಮ್ ಇಂಡಿಯಾ ಫೀಲ್ಡರ್ಗಳು ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕೈ ಬಿಟ್ಟಿರುವ ಒಟ್ಟು ಕ್ಯಾಚ್ಗಳ ಸಂಖ್ಯೆ ಬರೋಬ್ಬರಿ 10 ಎಂದರೆ ನಂಬಲೇಬೇಕು. ಈ ಕಳಪೆ ಫೀಲ್ಡಿಂಗ್ ಕಾರಣ ಟೀಮ್ ಇಂಡಿಯಾದ ಕ್ಯಾಚಿಂಗ್ ದಕ್ಷತೆ ಮತ್ತಷ್ಟು ಕುಸಿದಿದೆ.
- ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತದ ಕ್ಯಾಚಿಂಗ್ ದಕ್ಷತೆ ಕೇವಲ 64.2% ನಲ್ಲಿತ್ತು.
- ಝಿಂಬಾಬ್ವೆ ತಂಡವು ಈ ಸರಣಿಯಲ್ಲಿ 92.3% ನಷ್ಟು ಅತ್ಯುತ್ತಮ ಕ್ಯಾಚಿಂಗ್ ದಕ್ಷತೆಯನ್ನು ಪ್ರದರ್ಶಿಸಿದೆ.
ಅಂದರೆ ಮೂರು ಮ್ಯಾಚ್ಗಳಲ್ಲಿ ಝಿಂಬಾಬ್ವೆ ತಂಡ ಕೈ ಬಿಟ್ಟಿರುವುದು ಕೇವಲ 1 ಕ್ಯಾಚ್ ಮಾತ್ರ. ಆದರೆ ಇತ್ತ ಭಾರತೀಯ ಫೀಲ್ಡರ್ಗಳು ಬರೋಬ್ಬರಿ 10 ಕ್ಯಾಚ್ಗಳನ್ನು ಕೈಚೆಲ್ಲಿದ್ದಾರೆ.
ಕೈ ಜಾರಿದ 5 ಕ್ಯಾಚ್ಗಳು!
ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವು 35 ರನ್ಗಳ ಜಯ ಸಾಧಿಸಿತು. ಆದರೆ, ಈ ಒಂದೇ ಪಂದ್ಯದಲ್ಲಿ ಭಾರತೀಯ ಫೀಲ್ಡರ್ಗಳು 5 ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.
ಅದರಲ್ಲೂ ಟೀಮ್ ಇಂಡಿಯಾ ವೇಗಿ ಯಶ್ ಠಾಕೂರ್ ಎಸೆದ ಓವರ್ಗಳಲ್ಲೇ 3 ಕ್ಯಾಚ್ಗಳನ್ನು ಕೈಬಿಡಲಾಯಿತು. ಇದಲ್ಲದೆ, ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ರನ್-ಔಟ್ ಮಿಸ್ ಮಾಡುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟೀಮ್ ಇಂಡಿಯಾಗೆ ಫೀಲ್ಡಿಂಗ್ ಕೋಚ್ ಇದ್ದರೂ, ಇಷ್ಟೊಂದು ಕಳಪೆ ಮಟ್ಟದ ಕ್ಷೇತ್ರರಕ್ಷಣೆ ಪ್ರದರ್ಶಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಝಿಂಬಾಬ್ವೆ ವಿರುದ್ಧದ ಈ ಸರಣಿ ಜಯ ಯುವ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದು ನಿಜ. ಆದರೆ, ಕ್ರಿಕೆಟ್ನಲ್ಲಿ “ಕ್ಯಾಚ್ಗಳನ್ನು ಗೆದ್ದರೆ ಮ್ಯಾಚ್ಗಳನ್ನು ಗೆಲ್ಲಬಹುದು” ಎಂಬ ಹಳೆಯ ನಾಣ್ಣುಡಿ ಎಂದಿಗೂ ಸುಳ್ಳಾಗುವುದಿಲ್ಲ.
ಇದನ್ನೂ ಓದಿ: 5 ಓವರ್, 5 ಮೇಡನ್, 5 ವಿಕೆಟ್: ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ಗ್ರೀವ್ಸ್
ಮುಂಬರುವ ದೊಡ್ಡ ಸರಣಿಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧ ಇಂತಹ ಕಳಪೆ ಫೀಲ್ಡಿಂಗ್ ಮುಂದುವರಿದರೆ ಭಾರತ ಭಾರಿ ಬೆಲೆ ತೆರಬೇಕಾಗುತ್ತದೆ. ಹಾಗಾಗಿ, ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚಿಂಗ್ ಸಿಬ್ಬಂದಿ ಈ ‘ಕೈ ಚೆಲ್ಲುವ’ ಸಮಸ್ಯೆಗೆ ತಕ್ಷಣವೇ ಪರಿಹಾರ ಹುಡುಕಬೇಕಿದೆ.
