Headlines

ಡಿಕೆ ಶಿವಕುಮಾರ್ ಸರ್ಕಾರದ 2ನೇ ಸಚಿವ ಸಂಪುಟದ ಮಹತ್ವದ ನಿರ್ಣಯಗಳು ಹೀಗಿವೆ – Kannada News | Key Decisions Taken by the 2nd Cabinet of the DK Shivakumar Government

ಸಿಎಂ ಡಿಕೆ ಶಿವಕುಮಾರ್​​Image Credit source: tv9 kannada

ಬೆಂಗಳೂರು, ಜೂನ್​ 20: ಡಿಕೆ ಶಿವಕುಮಾರ್ (DK Shivakumar)​​ ಸಿಎಂ ಆದ ಬಳಿಕ ಇಂದು ಎರಡನೇ ಸಚಿವ ಸಂಪುಟ ಸಭೆ ಮಾಡಿದರು. ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಪ್ರಮುಖವಾಗಿ ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಹೊಸ ಇಲಾಖೆಯಲ್ಲಿ ಪ್ರತ್ಯೇಕ ಸಚಿವರು ಮತ್ತು IAS ಅಧಿಕಾರಿಗಳು ಇರಲಿದ್ದು, ಜನರ ಸಮಸ್ಯೆಗಳನ್ನ ಇತ್ಯರ್ಥ ಪಡಿಸಲಿದ್ದಾರೆ.

ಮುಖ್ಯಾಂಶಗಳು

  • ಎರಡನೇ ಸಚಿವ ಸಂಪುಟ ಸಭೆ ಮಾಡಿದ ಸಿಎಂ ಡಿಕೆ ಶಿವಕುಮಾರ್​
  • ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪನೆ
  • ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಭವನ

ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು 

ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಿಎಂ ಡಿಕೆ ಶಿವಕುಮಾರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಇಂದು ಎರಡನೇ ಕ್ಯಾಬಿನೆಟ್ ಮೀಟಿಂಗ್ ನಡೆದಿದೆ. ಸಮಸ್ಯೆ ಇದ್ದಾಗ ನ್ಯಾಯ ಕೊಡಿಸಲು ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪನೆ ಮಾಡಿದ್ದೇವೆ. ಈ ಇಲಾಖೆಯಡಿ 224 ಕ್ಷೇತ್ರಗಳಲ್ಲಿ ಎಲ್ಲಾ ಸಚಿವರು ಸ್ಥಳೀಯ ಶಾಸಕರ ಜೊತೆ ವಾರಕ್ಕೊಮ್ಮೆ ಸಭೆ ನಡೆಸಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ಸಾರ್ವಜನಿಕರ ಕುಂದು ಕೊರತೆ ನಿರ್ವಹಣೆಗೆ ಡಿಕೆಶಿ ದಿಟ್ಟ ಹೆಜ್ಜೆ: ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಸೇವೆ ಇಲಾಖೆ ಸ್ಥಾಪನೆ

ಬೆಂಗಳೂರು ನಗರದ ವೈದ್ಯಕೀಯ ಕಾಲೇಜಿನಲ್ಲಿ ಉಪಕರಣ ಖರೀದಿಗೆ 60 ಕೋಟಿ ರೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬಳ್ಳಾರಿಯ ಸಂಡೂರಿನಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. 235 ಕೋಟಿ ರೂ ವೆಚ್ಚದಲ್ಲಿ 620 ಬಸ್ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇನ್ನು ಈ ವೇಳೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಡೀಸೆಲ್ ಬೆಲೆ ಹೆಚ್ಚಾಗಿದೆ. ಕೆಎಸ್​​ಆರ್​ಟಿಸಿ ಉಳಿಸಬೇಕು, ಜನರಿಗೂ ಹೊರೆಯಾಗಬಾರದು. ರಾಜ್ಯದ ಹಿತಕ್ಕಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಭವನ

ದೆಹಲಿಯ ಕರ್ನಾಟಕ ಭವನ ನಿರ್ಮಾಣ ಕೆಲಸ ಸಮರ್ಪಕವಾಗಿಲ್ಲ, ಹೀಗಾಗಿ ಕಟ್ಟಡ ನವೀಕರಣ ಮಾಡೋದಕ್ಕೆ ಚಿಂತನೆ ನಡೆಸಿದ್ದೇವೆ. ಹೊಸ ತಂಡವನ್ನು ನಿಯೋಜನೆ ಮಾಡಬೇಕಿದೆ. ಐದಾರು ಹಿರಿಯ ಅಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ನೀಡುತ್ತೇವೆ. ರಾಜ್ಯದ ಅನೇಕ ಯೋಜನೆಗಳ ಕೆಲಸ ಕೇಂದ್ರದಲ್ಲಿ ಆಗಬೇಕಿದೆ. ದೆಹಲಿಯ ಲೀಗಲ್ ಸೆಲ್ ಕೂಡ ರೀಸ್ಟ್ರಕ್ಚರ್ ಮಾಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ; 50 ಲಕ್ಷ ಅನಿವಾಸಿ ಭಾರತೀಯರ ನೆರವಿಗೆ ನಿಂತ ರಾಜ್ಯ ಸರ್ಕಾರ

ಇನ್ನು UPSC ಓದುವ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ನಾಲ್ಕನೇ ಕರ್ನಾಟಕ ಭವನ ನಿರ್ಮಾಣ ಮಾಡುತ್ತೇವೆ. ಕಟ್ಟಡ ನಿರ್ಮಾಣಕ್ಕೆ 80 ಕೋಟಿ ರೂ ಹಣ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕರ್ನಾಟಕ ಭವನದಲ್ಲಿ 50% ಎಸ್​​ಸಿ, ಎಸ್​ಟಿ ವಿದ್ಯಾರ್ಥಿಗಳಿಗೆ ಅವಕಾಶ ಕೊಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್​ ತಿಳಿಸಿದ್ದಾರೆ.

ಖಾಲಿ ನಿವೇಶನಕ್ಕೆ ಒಸಿ, ಸಿಸಿ ಇಲ್ಲ

ವಸತಿ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರು ಸಂಪರ್ಕಕ್ಕೆ ಒಸಿ, ಸಿಸಿ ವಿಚಾರವಾಗಿ ಮಾತನಾಡಿದ ಸಿಎಂ, ಪೂರ್ಣಗೊಂಡಿರುವ ಹಳೆಯ ಕಟ್ಟಡ, ತಾತ್ಕಾಲಿಕ ವಿದ್ಯುತ್ ಸಂಪರ್ಕವಿದ್ದವರಿಗೆ ನೀರು ಹಾಗೂ ವಿದ್ಯುತ್ ಕೊಡಲಿದ್ದೇವೆ. ಖಾಲಿ ಇರುವ ನಿವೇಶನಕ್ಕೆ ಒಸಿ, ಸಿಸಿ ಕೊಡಲು ಸಾಧ್ಯವಿಲ್ಲ. ಸರ್ಕಾರದ ಆದೇಶ ಆದ ದಿನದಿಂದ 15 ದಿನ ಹೆಚ್ಚುವರಿ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು.

ನಾನು ಜೈಲಿಗೆ ಹೋಗಲು ತಯಾರಿಲ್ಲ ಎಂದ ಡಿಕೆ ಶಿವಕುಮಾರ್​

ಬಿಡದಿ ಟೌನ್‌ಶಿಪ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್​, ಹೆಚ್​ಡಿ ಕುಮಾರಸ್ವಾಮಿ ಮತ್ತು​ ಬಿಎಸ್ ಯಡಿಯೂರಪ್ಪ ಮಾಡಿದ್ದನ್ನೇ ಮುಂದುವರಿಸುತ್ತಿದ್ದೇವೆ. ನಾವೇನು ಹೊಸದಾಗಿ ಟೌನ್‌ಶಿಪ್ ಯೋಜನೆ ಮಾಡುತ್ತಿಲ್ಲ. ವಿರೋಧ ಪಕ್ಷದವರು ರಾಜಕಾರಣಕ್ಕಾಗಿ ಮಾತನಾಡುತ್ತಿದ್ದಾರೆ. ಯಾರಿಗೂ ನಾವು ಬಲವಂತ ಮಾಡಲು ಹೋಗುತ್ತಿಲ್ಲ. ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ತಯಾರಿಲ್ಲ. ಹೆಚ್​.ಡಿ.ಕುಮಾರಸ್ವಾಮಿ ರೆಡ್ ಝೋನ್ ಏಕೆ ಮಾಡಿದರು, ಅವರೇ ಡಿನೋಟಿಫೈ ಮಾಡಬಹುದಿತ್ತು ಎಂದರು.

ಭೂಮಿ ಕೊಡಲು ರೈತರೇ ಮುಂದೆ ಬಂದಿದ್ದಾರೆ

ಭೂಮಿ ನೀಡುತ್ತಿರುವ ರೈತರಿಗೆ ಒಳ್ಳೆಯ ಪರಿಹಾರ ಕೊಡುತ್ತಿದ್ದೇವೆ. ಭೂಮಿ ಕೊಟ್ಟ ರೈತರಿಗೆ 50% ಅಭಿವೃದ್ಧಿ ಜಾಗವನ್ನೂ ಕೊಡುತ್ತಿದ್ದೇವೆ. ಇನ್ನು ದೇವನಹಳ್ಳಿಯ ಚನ್ನರಾಯಪಟ್ಟಣ ರೈತರ ಭೂಸ್ವಾಧಿನ ವಿಚಾರ, ಭೂಮಿಯನ್ನು ಕೊಡಲು ರೈತರೇ ಮುಂದೆ ಬಂದಿದ್ದಾರೆ. ಭೂಮಿ ಕೊಡುವವರಿಗೆ ಮತ್ತೊಮ್ಮೆ ಅವಕಾಶ ಕೊಡಲಾಗುವುದು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *