Headlines

ಡೀಸೆಲ್​​ ಬೆಲೆ ಹೆಚ್ಚಳದಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಸಂಕಷ್ಟ: ತಿಂಗಳಿಗೆ ಕೋಟ್ಯಂತರ ರೂ ಹೊರೆ! – Kannada News | Hubballi: Rising Diesel Prices Add Crores in Monthly Burden to NWKRTC

ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆImage Credit source: tv9 kannada

ಹುಬ್ಬಳ್ಳಿ, ಮೇ 20: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ (Petrol, Diesel Price Hike) ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಕೇವಲ ಒಂದು ವಾರದಲ್ಲಿ ಎರಡು ಬಾರಿ ಇಂಧನ ದರ ಹೆಚ್ಚಳವಾಗಿದ್ದು, ಇದು ಕೇವಲ ಸಾಮಾನ್ಯ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿರುವುದಲ್ಲದೆ ರಾಜ್ಯದ ಸಾರಿಗೆ ನಿಗಮಗಳನ್ನೂ ಸಹ ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಈ ಡೀಸೆಲ್ ದರ ಏರಿಕೆ ದೊಡ್ಡ ಹೊಡೆತ ನೀಡಿದೆ. ಈಗಾಗಲೇ ಆರ್ಥಿಕ ನಷ್ಟದಲ್ಲಿ ತೊಳಲಾಡುತ್ತಿರುವ ಸಂಸ್ಥೆಗೆ, ಈ ಹೊಸ ಬೆಲೆ ಏರಿಕೆಯು ಮತ್ತೊಂದು ಆರ್ಥಿಕ ಹೊರೆಯನ್ನು ಹೊರಿಸಿದೆ.

ಮುಖ್ಯಾಂಶಗಳು

  • ಸಾರಿಗೆ ನಿಗಮಕ್ಕೆ ತಟ್ಟಿದ ಡೀಸೆಲ್ ಬೆಲೆ ಏರಿಕೆ ಬಿಸಿ
  • ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಂಕಷ್ಟ
  • ಟಿಕೆಟ್ ದರ ಏರಿಕೆ ನಿರ್ಧಾರ ಸರ್ಕಾರದ ಅಂಗಳದಲ್ಲಿ

ಮಾಸಿಕ 4 ಕೋಟಿ ರೂ ಹೆಚ್ಚುವರಿ ಹೊರೆ

ಯುದ್ದದಿಂದಾಗಿ ಸಿಲಿಂಡರ್ ಬೆಲೆ ಸೇರಿದಂತೆ ಈಗಾಗಲೇ ಅನೇಕ ವಸ್ತುಗಳು ಬೆಲೆಗಳು ಹೆಚ್ಚಾಗಿದ್ದು ಜನ ಸಾಮಾನ್ಯರು ಹತ್ತಾರು ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಕಳೆದ ಒಂದು ವಾರದಲ್ಲಿ ಎರಡು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳದಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬಿದ್ದಿತ್ತು. ಇದೀಗ ಸಾರಿಗೆ ನಿಗಮಗಳಿಗೂ ಸಂಕಷ್ಟ ಶುರುವಾಗಿದೆ. ಆರ್ಥಿಕ ನಷ್ಟದಲ್ಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಮತ್ತೊಂದು ಹೊರೆ ಬಿದ್ದಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ, ಡಿಸೇಲ್ ಬೆಲೆ ಹೆಚ್ಚಳದಿಂದ ಪ್ರತಿ ತಿಂಗಳು 4 ಕೋಟಿ ರೂ ಹೆಚ್ಚುವರಿ ಹೊರೆ ಬೀಳುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್, ಗ್ಯಾಸ್ ಬಗ್ಗೆ ಎದ್ದಿರುವ ಅಂತೆ ಕಂತೆಗಳಿಗೆ ತೆರೆ

ಏಳು ಜಿಲ್ಲೆಯ ವ್ಯಾಪ್ತಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಬಸ್ ಗಳಿವೆ. ಪ್ರತಿನಿತ್ಯ ಈ ಬಸ್​​ಗಳಿಗೆ ಮೂರು ಲಕ್ಷ ಲೀಟರ್ ಡಿಸೇಲ್ ಬೇಕಾಗುತ್ತದೆ. ಇನ್ನು ಸಂಸ್ಥೆ ಬಲ್ಕ್ ಆಗಿ ಡಿಸೇಲ್ ಖರೀದಿ ಮಾಡುವುದರಿಂದ ಈ ಮೊದಲು ಪ್ರತಿ ಲೀಟರ್ ಡಿಸೇಲ್ ಬೆಲೆ 87 ರೂ 94 ಪೈಸೆ ಇತ್ತು. ಆದರೆ ಕಳೆದ ಒಂದು ವಾರದಲ್ಲಿ ಎರಡು ಬಾರಿ ಹೆಚ್ಚಳದಿಂದ ಇದೀಗ ಪ್ರತಿ ಲೀಟರ್ ಡಿಸೇಲ್ ಬೆಲೆ 92 ರೂ.ಗೆ ಏರಿಕೆಯಾಗಿದೆ. ಅಂದರೆ ಸಂಸ್ಥೆಗೆ ಸರಿಸುಮಾರು ಪ್ರತಿ ದಿನ 12 ಲಕ್ಷ ರೂ ಹೆಚ್ಚುವರಿ ಬಿದ್ದಂತಾಗುತ್ತಿದ್ದು, ಪ್ರತಿ ತಿಂಗಳಿಗೆ 3.5ರಿಂದ 4 ಕೋಟಿ ರೂ ಹೊರೆಯಾಗುತ್ತಿದೆಯಂತೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಮೊದಲೇ ಆರ್ಥಿಕ ಸಂಕಷ್ಟದಲ್ಲಿದೆ. ಶಕ್ತಿ ಯೋಜನೆ ಹಣ ಸರಿಯಾಗಿ ಬಾರದಿರುವುದು ಆದಾಯಕ್ಕಿಂಕ ಖರ್ಚು ಹೆಚ್ಚಾಗಿರುವುದರಿಂದ ಸಂಸ್ಥೆ ಆರ್ಥಿಕವಾಗಿ ನರಳುವಂತೆ ಮಾಡಿದೆ. ಸದ್ಯದ ಮಟ್ಟಿಗೆ ಪ್ರತಿ ದಿನ ಬರುತ್ತಿದ್ದ ಟಿಕೆಟ್ ಹಣದಲ್ಲಿ ಬಹುಪಾಲು ಹಣವನ್ನು ಡಿಸೇಲ್​ಗೆ ಖರ್ಚು ಮಾಡುತ್ತಿತ್ತು. ಆದರೆ ಇದೀಗ ಸಂಸ್ಥೆಗೆ ಡಿಸೇಲ್ ಬೆಲೆ ಹೆಚ್ಚಳದಿಂದ ಮತ್ತೊಂದು ದೊಡ್ಡ ಹೊರೆ ಬಿದ್ದಂತಾಗಿದೆ.

ಸಾರಿಗೆ ಸಂಸ್ಥೆಯ ಎಂ.ಡಿ ಪ್ರಿಯಾಂಗಾ ಎಂ ಹೇಳಿದ್ದಿಷ್ಟು

ಇನ್ನು ಡಿಸೇಲ್ ಬೆಲೆ ಹೆಚ್ಚಳವಾಗಿದ್ದರು ಕೂಡ ಸರ್ಕಾರ ಇಲ್ಲಿವರಗೆ ಸಾರಿಗೆ ನಿಗಮಗಳ ಟಿಕೆಟ್ ಬೆಲೆಯನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ ಆದಾಯ ಹಿಂದಿನಷ್ಟೇ ಇದ್ದು, ಖರ್ಚು ಮಾತ್ರ ಹೆಚ್ಚಾಗುತ್ತಿದೆ. ಹೀಗಾಗಿ ಸಂಸ್ಥೆಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಮತ್ತೊಂದೆಡೆ ಸಂಸ್ಥೆಗೆ ಆಗುತ್ತಿರುವ ನಷ್ಟದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಸರ್ಕಾರದ ನಿರ್ದೇಶನದಂತೆ ನಡೆಯುತ್ತೇವೆ. ಟಿಕೆಟ್ ಹೆಚ್ಚಳ ಮಾಡುವುದು, ಬಿಡುವುದು ಸರ್ಕಾರದ ಕೈಯಲ್ಲಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂ.ಡಿ ಪ್ರಿಯಾಂಗಾ ಎಂ ಹೇಳಿದ್ದಾರೆ.

ಇದನ್ನೂ ಓದಿ: Petrol Diesel Price Hike: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ! ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕ್

ಯುದ್ದದಿಂದಾಗಿ ಅನೇಕ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿವೆ. ಆದರೆ ಇದೀಗ ಡಿಸೇಲ್, ಪೆಟ್ರೋಲ್ ಬೆಲೆ ಹೆಚ್ಚಳದಿಂದ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊಡೆತ ಬೀಳುತ್ತಿದೆ. ಹೀಗಾಗಿ ಸಾರಿಗೆ ನಿಗಮಗಳು ನಷ್ಟವನ್ನು ಸರಿದೂಗಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳುತ್ತವೆ ಟಿಕೆಟ್ ದರ ಹೆಚ್ಚಳ ಆಗುತ್ತದಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *