
ಚಿಕ್ಕಮಗಳೂರು, ಮಾರ್ಚ್ 17: ಅದೆಷ್ಟೇ ಜಾಗೃತಿ ಕೆಲಸಗಳನ್ನು ಸಂಚಾರಿ ಪೊಲೀಸರು ಮಾಡಿದರೂ ಕೆಲ ವಾಹನ ಸವಾರರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನಗಳ ಚಾಲನೆ ಹಲವರ ಅಭ್ಯಾಸವಾಗಿಹೋಗಿದೆ. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಹೆಚ್ಚೆಂದರೆ ದಂಡ ಹಾಕಬಹುದು ಎಂಬ ಉಡಾಫೆಯ ಮನಸ್ಥಿತಿಗೆ ಜನ ತಲುಪುತ್ತಿದ್ದಾರೆ. ಆದರೆ ಚಿಕ್ಕಮಗಳೂರಿನಲ್ಲಿ ನಡೆದ ಪ್ರಕರಣವೊಂದು ಅಂತವರಿಗೆ ಪಾಠವಾಗುವಂತಿದೆ. ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ಶಾಕ್ ಕೊಟ್ಟಿದ್ದು, ಟ್ರಾಫಿಕ್ ರೂಲ್ಸ್ ಇರುವ ಬೋರ್ಡ್ ಹಿಡಿದು ನಿಲ್ಲುವಂತೆ ಆದೇಶ ಮಾಡಿದೆ.
ಹೌದು, ಕಡೂರು ತಾಲೂಕಿನ ಬಿಸಲೆಹಳ್ಳಿ ಗ್ರಾಮದ ರಂಜಿತ್ ಕುಮಾರ್ ವಿರುದ್ಧ ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ದ ಕೇಸ್ ದಾಖಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಕಡೂರು JMFC ಕೋರ್ಟ್ ನಿರೀಕ್ಷೆಗೂ ಮೀರಿದ ಆದೇಶ ನೀಡಿದ್ದು, ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಟ್ರಾಫಿಕ್ ರೂಲ್ಸ್ ಇರುವ ಬೋರ್ಡ್ ಹಿಡಿದು ರಂಜಿತ್ ಕುಮಾರ್ ರಸ್ತೆಯಲ್ಲಿ ನಿಲ್ಲಬೇಕು ಎಂದು ತಿಳಿಸಿದೆ. ಪ್ರಕರಣ ಸಂಬಂಧ ಆರೋಪಿ ರಂಜಿತ್ ಕುಮಾರ್ ಕೂಡ ವಿಚಾರಣೆ ವೇಳೆ ತನ್ನ ತಪ್ಪು ಒಪ್ಪೊಕೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಸರ್ಕಾರದಿಂದಲೇ ಸಿಗಲಿದೆ ಉಚಿತ ನೀಟ್ ಕೋಚಿಂಗ್!
ಮರವಂಜಿ ಸರ್ಕಲ್/ ಮಲ್ಲೇಶ್ವರ ಸರ್ಕಲ್ನಲ್ಲಿ ಮಾರ್ಚ್ 17ರಂದು (ಇಂದು) ಬೆಳಿಗಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಟ್ರಾಫಿಕ್ ರೂಲ್ಸ್ ಇರುವ ಬೋರ್ಡ್ ಹಿಡಿದು ರಂಜಿತ್ ನಿಲ್ಲಬೇಕು ಎಂದಿರುವ ಕೋರ್ಟ್, ಈತ ಕಮ್ಯುನಿಟಿ ಸೇವೆ ಮಾಡುತ್ತಿರುವುದನ್ನು ನೋಡಿಕೊಳ್ಳಲು ಓರ್ವ ಪೊಲೀಸ್ ಸಿಬ್ಬಂದಿ ನಿಯೋಜನೆಗೂ ಸೂಚಿಸಿದೆ. ಸಂಜೆ 5 ಗಂಟೆಯ ಬಳಿಕ ಕೋರ್ಟ್ ಸೂಚನೆಯನ್ನು ಆತ ಪಾಲಿಸಿದ್ದಾನೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆಯೂ ಸೂಚಿಸಿದೆ. ಕೋರ್ಟ್ ಆದೇಶದ ಹಿನ್ನೆಲೆ ಮರವಂಜಿ ಸರ್ಕಲ್ನಲ್ಲಿ ರಂಜಿತ್ ಬೋರ್ಡ್ ಹಿಡಿದು ನಿಂತಿದ್ದು, ಪೊಲೀಸ್ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.