ರಾಜಕಾಲುವೆ ದುರಸ್ತಿ ಕಾಮಗಾರಿImage Credit source: Tv9 Kannada
ಬೆಂಗಳೂರು, ಜೂನ್ 15: ನಗರದ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್ ಆಗಿರುವ ಕಮರ್ಷಿಯಲ್ ಸ್ಟ್ರೀಟ್ ಬಳಿ ವಾಹನ ಸಂಚಾರವೇ ದುಸ್ತರವಾಗಿದೆ. ರಾಜಕಾಲುವೆ ದುರಸ್ತಿ ಹಾಗೂ ಪೈಪ್ ಲೈನ್ ಕಾಮಗಾರಿಗಾಗಿ ಮುಖ್ಯರಸ್ತೆಯನ್ನೇ ಬಂದ್ ಮಾಡಿ ಬರೋಬ್ಬರಿ ಒಂದು ತಿಂಗಳುಗಳೇ ಕಳೆದಿದ್ದು, ನಿಧಾನಗತಿಯ ಕಾಮಗಾರಿಯಿಂದಾಗಿ ವಾಹನ ಸವಾರರು ಮತ್ತು ಸ್ಥಳೀಯರು ಹೈರಾಣಾಗುತ್ತಿದ್ದಾರೆ. ಫ್ರೆಜರ್ ಟೌನ್ ಕಡೆಗೆ ತೆರಳಲು ವಾಹನ ಸವಾರರಿಗೆ ಬಹಳ ಕಿರಿಕಿರಿ ಉಂಟಾಗುತ್ತಿದೆ. ಸೂಕ್ತ ಪರ್ಯಾಯ ಮಾರ್ಗವೂ ಇಲ್ಲದ ಕಾರಣ ಸಮಸ್ಯೆ ಹೆಚ್ಚಿದೆ.
ಎಂಜಿ ರಸ್ತೆ ಕಡೆಯಿಂದ ಫ್ರೆಜರ್ ಟೌನ್ ಕಡೆಗೆ ತೆರಳಲು ಇದುವೇ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಅಕ್ಕಪಕ್ಕದ ಪರ್ಯಾಯ ಮಾರ್ಗದ ರಸ್ತೆಗಳು ಕಿರಿದಾಗಿರುವ ಕಾರಣ ಸುಗಮ ಸಂಚಾರ ಕಷ್ಟಕರ. ಹೀಗಿದ್ದರೂ ಒಂದು ತಿಂಗಳಿನಿಂದ ರಸ್ತೆ ಬಂದ್ ಮಾಡಿ ನಡೆಸುತ್ತಿರುವ ಕಾಮಗಾರಿ ಮಾತ್ರ ಕುಂಟುತ್ತಲೇ ಸಾಗಿದೆ. ಯಾವಾಗ ಕಾಮಗಾರಿ ಮುಗಿಬಹುದೆಂಬ ಸ್ಪಷ್ಟತೆಯೂ ಇಲ್ಲದ ಕಾರಣ ಸ್ಥಳೀಯರೂ ಕೂಡ ಪರದಾಡುವಂತಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಡಿರೌಡಿಗಳ ಕಿರುಕುಳ ತಪ್ಪಿಸಲು ವ್ಯಾಪಾರಿಗಳು ಆಗ್ರಹ; ಜೂ.1ರಂದು ಬೇಕರಿ-ಕಾಂಡಿಮೆಂಟ್ಸ್ ಬಂದ್
ವಾಹನ ಸವಾರರ ಆಕ್ರೋಶ
ಕಾಮಗಾರಿ ವಿಳಂಬದಿಂದ ಸಂಚಾರವೇ ದುಸ್ಥರವಾಗಿದೆ ಎಂದು ವಾಹನ ಸವಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಿಕೊಡಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಕಾಮಗಾರಿ ಆರಂಭಿಸಿ 4 ತಿಂಗಳಾಗಿದ್ದರೆ ರಸ್ತೆ ಬಂದ್ ಮಾಡಿ ತಿಂಗಳು ಕಳೆದಿದೆ. ಇದರಿಂದಾಗಿ ಬಹಳ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳೂ ಅಲವತ್ತುಕೊಂಡಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇತ್ತ ಗಮನಹರಿಸಿ ಶೀಘ್ರವೇ ಕಾಮಗಾರಿ ಮುಗಿಸುವ ಮೂಲಕ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕಿದೆ.
ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
