ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆ ಸಚಿವ ಸೋಮಣ್ಣ ಬಿಗ್ ಅಪ್​ಡೇಟ್ – Kannada News

ವಿ ಸೋಮಣ್ಣ ಹಾಗೂ ರೈಲ್ವೆ ಹಳಿಯ ಸಾಂದರ್ಭಿಕ ಚಿತ್ರImage Credit source: PTI

ಬೆಂಗಳೂರು, ಜೂನ್ 10: ರಾಜ್ಯದ ಅತ್ಯಂತ ಪ್ರಮುಖ ಹಾಗೂ ಬಹುನಿರೀಕ್ಷಿತ ರೈಲ್ವೆ ಯೋಜನೆಗಳಲ್ಲೊಂದಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ (Tumakuru-Chitradurga-Davangere Railway Line) ನಿರ್ಮಾಣ ಕಾರ್ಯಕ್ಕೆ ಕೊನೆಗೂ ವೇಗ ಸಿಕ್ಕಿದೆ. ಈ ಮಹತ್ವದ ಯೋಜನೆ 2028 ರ ಫೆಬ್ರವರಿ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ (V Somanna) ತಿಳಿಸಿದ್ದಾರೆ. ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ವಿವಿಧ ರೈಲ್ವೆ ಮೂಲಸೌಕರ್ಯ ಯೋಜನೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು

  • 2028ರ ಫೆಬ್ರವರಿಗೆ ನೇರ ರೈಲು ಮಾರ್ಗ ಓಪನ್.
  • ಶೇ 92 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣ.
  • ತುಮಕೂರಿನಲ್ಲಿ 32 ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿ.

1,801 ಕೋಟಿ ರೂ. ವೆಚ್ಚದ ಯೋಜನೆ: ಅಂತಿಮ ಹಂತದಲ್ಲಿ ಭೂಸ್ವಾಧೀನ

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆಯ ತಲಾ ಶೇ 50 ರಷ್ಟು ಆರ್ಥಿಕ ಸಹಭಾಗಿತ್ವದೊಂದಿಗೆ ಒಟ್ಟು 1,801 ಕೋಟಿ ರೂಪಾಯಿ ವೆಚ್ಚದಲ್ಲಿ ಈ 191 ಕಿಲೋಮೀಟರ್ ಉದ್ದದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಯೋಜನೆಗೆ ಅಗತ್ಯವಿರುವ ಒಟ್ಟು ಭೂಮಿಯ ಪೈಕಿ ಈಗಾಗಲೇ ಶೇಕಡಾ 92 ಕ್ಕೂ ಅಧಿಕ ಭೂಸ್ವಾಧೀನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗದ ಊರುಕೆರೆ-ತಿಮ್ಮರಾಜನಹಳ್ಳಿ ನಡುವಿನ 13.31 ಕಿಲೋಮೀಟರ್ ಉದ್ದದ ಮೊದಲ ಹಂತದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ತುಮಕೂರು-ರಾಯದುರ್ಗ ರೈಲು ಮಾರ್ಗವೂ ಸಿದ್ಧ

ಇದೇ ವೇಳೆ, ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಸಂಪರ್ಕಿಸುವ 2,496 ಕೋಟಿ ರೂಪಾಯಿ ವೆಚ್ಚದ 206 ಕಿಲೋಮೀಟರ್ ಉದ್ದದ ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗ ಯೋಜನೆಯ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ಈ ಪೈಕಿ ಈಗಾಗಲೇ 83 ಕಿಲೋಮೀಟರ್ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ. ತುಮಕೂರು-ಊರುಕೆರೆ ನಡುವಿನ ಮಾರ್ಗದ ಸುರಕ್ಷತಾ ಪರಿಶೀಲನೆ (Safety Inspection) ಮುಗಿದಿದ್ದು, ಪಾವಗಡ-ದೊಡ್ಡಹಳ್ಳಿ ಸೆಕ್ಷನ್ ಕೂಡ ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ಯೋಜನೆಗೆ ಶೇಕಡಾ 97 ರಷ್ಟು ಭೂಸ್ವಾಧೀನ ಮುಗಿದಿದ್ದು, ಬಾಕಿ ಉಳಿದಿರುವ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ.

ಸಚಿವ ವಿ. ಸೋಮಣ್ಣ ಅವರ ಲೋಕಸಭಾ ಕ್ಷೇತ್ರವಾದ ತುಮಕೂರಿನಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬರೋಬ್ಬರಿ 32 ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಂಡಿತನಹಳ್ಳಿ, ಮೈದಾಳ, ಬಡ್ಡಿಹಳ್ಳಿ, ಬಟವಾಡಿ, ಹೆಗ್ಗರೆ, ಮಲ್ಲಸಂದ್ರ, ಬೆಂಚೆಗೆರೆ, ನಿಟ್ಟೂರು-ಮೈಸೂರು, ನಂದಿಹಳ್ಳಿ ಗೇಟ್ ಸೇರಿದಂತೆ ಹಾಸನ ಮತ್ತು ಬಿದಿರಗುಡಿ ಮಾರ್ಗದ ಬಿ.ಹೆಚ್ ರಸ್ತೆಯ ಮೇಲ್ಸೇತುವೆಗಳನ್ನು ಒಳಗೊಂಡ ಈ ಎಲ್ಲಾ ಕಾಮಗಾರಿಗಳನ್ನು 2026-27ರ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ

ಅರಣ್ಯ ಇಲಾಖೆ ಅನುಮತಿ, ವಿದ್ಯುತ್ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಸ್ಥಳಾಂತರದಂತಹ ತಾಂತ್ರಿಕ ಸವಾಲುಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ ಅವರಿಗೆ ಸಚಿವರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *