ಹೈದರಾಬಾದ್, (ಏಪ್ರಿಲ್ 25): ತೆಲಂಗಾಣದ (Telangana) ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (KCR) ಅವರ ಪುತ್ರಿ ಮತ್ತು ಮಾಜಿ ಸಂಸದೆ ಕೆ. ಕವಿತಾ(K. Kavitha) ಅವರು ಇಂದು (ಏಪ್ರಿಲ್ 25) ಹೊಸ ಪಕ್ಷ ಸ್ಥಾಪಿಸಿ ಘೋಷಣೆ ಮಾಡಿದ್ದಾರೆ. ಕವಿತಾ ಅವರು ತಮ್ಮ ಪಕ್ಷಕ್ಕೆ ತೆಲಂಗಾಣ ರಾಷ್ಟ್ರ ಸೇನಾ (TRS) ಎಂದು ಹೆಸರಿಸಿದ್ದಾರೆ. ಇದು ಈ ಹಿಂದೆ ಅವರ ತಂದೆ ಕೆಸಿಆರ್ ಅವರು ಬಳಸುತ್ತಿದ್ದ ‘ತೆಲಂಗಾಣ ರಾಷ್ಟ್ರ ಸಮಿತಿ’ ಹೆಸರನ್ನು ನೆನಪಿಸುವಂತಿದ್ದು, ತೆಲಂಗಾಣದ ಮೂಲ ಅಸ್ಮಿತೆಯನ್ನು ಮರಳಿ ಪಡೆಯುವ ಸಂಕೇತವಾಗಿ ಬಳಸಲಾಗಿದೆ. ಈ ಮೂಲಕ ತಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದ ತಂದೆ ಕೆಸಿಆರ್, ಸೋದರ ಕೆ.ಟಿ.ರಾಮಾರಾವ್ಗೆ ಸೆಡ್ಡು ಹೊಡೆದಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದ ಆರೋಪದಡಿ ಕವಿತಾ ಜೈಲು ಸೇರಿದ್ದರು. ಅಲ್ಲದೇ ಪಕ್ಷದ ವಿಚಾರದ ಬಗ್ಗೆ ತಂದೆ, ಸೋದರನ ಜೊತೆ ಕಲಹ ಉಂಟಾಗಿತ್ತು. ಕಲಹದಿಂದ ಬೇಸತ್ತು ಕವಿತಾ ಅವರು ಸೆಪ್ಟೆಂಬರ್ 2025 ರಲ್ಲಿ ಭಾರತ್ ರಾಷ್ಟ್ರ ಸಮಿತಿಯಿಂದ (BRS) ಹೊರಬಂದಿದ್ದರು. ಆಂತರಿಕ ಭಿನ್ನಮತ ಮತ್ತು ಅವರ ಸಹೋದರ ಕೆ.ಟಿ. ರಾಮರಾವ್ ಅವರೊಂದಿಗಿನ ವೈಮನಸ್ಸಿನಿಂದಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನಂತರ ಅವರು ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
