ಥಿಯೇಟರ್​​​ನಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುವಾಗಲೇ ನಿಧನ ಹೊಂದಿದ ಖ್ಯಾತ ನಟ – Kannada News | Santhosh K. Nair Demise: Malayalam Actor, 65, Passes Away in Tragic Kerala Road Crash

ಮಲಯಾಳಂ ಚಿತ್ರರಂಗದ ಹಿರಿಯ ನಟ ಸಂತೋಷ್ ಕೆ. ನಾಯರ್ (65) ಅವರು ಮಂಗಳವಾರ (ಮೇ 5) ಮುಂಜಾನೆ ಕೇರಳದ ಪಥನಂತಿಟ್ಟದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ವ್ಯಾನ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಅವರ ಜೊತೆಗಿದ್ದ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1982ರಲ್ಲಿ ತೆರೆಕಂಡ ‘ಇದು ನಂಗಳುಡೆ ಕಥಾ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂತೋಷ್ ಅವರು, ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಇವರು, ವಿಶೇಷವಾಗಿ ಖಳನಟನಾಗಿ ಮತ್ತು ಹಾಸ್ಯ ನಟನಾಗಿ ಪ್ರೇಕ್ಷಕರ ಮನ ಗೆದ್ದಿದ್ದರು.

1960 ನವೆಂಬರ್ 12 ರಂದು ತಿರುವನಂತಪುರಂನಲ್ಲಿ ಜನಿಸಿದ ಸಂತೋಷ್, ಸುಶಿಕ್ಷಿತ ಕುಟುಂಬದಿಂದ ಬಂದವರು. ಅವರ ತಂದೆ ಸಿ.ಎನ್. ಕೇಶವನ್ ನಾಯರ್ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದರೆ, ತಾಯಿ ಪಿ. ರಾಜಲಕ್ಷ್ಮಿಯಮ್ಮ ನಿವೃತ್ತ ಶಿಕ್ಷಕಿಯಾಗಿದ್ದರು. ಸಂತೋಷ್ ಅವರ ಇಬ್ಬರು ಸಹೋದರಿಯರು ವೈದ್ಯಕೀಯ ಕ್ಷೇತ್ರ ಆಯ್ದುಕೊಂಡರೆ, ಇವರು ರಾಜಕೀಯ ಮತ್ತು ನಟನೆಯತ್ತ ಒಲವು ತೋರಿದರು.

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರೊಂದಿಗೆ ಸಂತೋಷ್ ಅವರಿಗೆ ಕಾಲೇಜು ದಿನಗಳಿಂದಲೇ ಒಡನಾಟವಿತ್ತು. ಇಬ್ಬರೂ ಎಂ.ಜಿ ಕಾಲೇಜಿನಲ್ಲಿ ಓದುವಾಗ ಸಮಕಾಲೀನರಾಗಿದ್ದರು. ಸಂತೋಷ್ ಗಣಿತ ವಿಷಯದಲ್ಲಿ ಪದವಿ ಪಡೆದರೆ, ಮೋಹನ್‌ಲಾಲ್ ವಾಣಿಜ್ಯ ವಿಷಯದಲ್ಲಿ ಶಿಕ್ಷಣ ಪೂರೈಸಿದ್ದರು.

ಸಂತೋಷ್ ಅವರ ಅಭಿನಯದ ಕೊನೆಯ ಚಿತ್ರ ‘ಭರತನಾಟ್ಯಮ್ 2 ಮೋಹಿನಿಯಾಟ್ಟಂ’. ಈ ಸಿನಿಮಾ ಥಿಯೇಟರ್​​ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಏಪ್ರಿಲ್ 10ರಂದು ಬಿಡುಗಡೆಯಾದ ಈ ಸಿನಿಮಾ 2024ರ ‘ಭರತನಾಟ್ಯಂ’ ಸಿನಿಮಾದ ಮುಂದುವರಿದ ಭಾಗವಾಗಿದೆ. ಕೃಷ್ಣದಾಸ್ ಮುರಳಿ ನಿರ್ದೇಶನದ ಈ ಚಿತ್ರವು ಮೇ 8 ರಿಂದ ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಸುರಜ್ ವೆಂಜಾರಮೂಡು ಮತ್ತು ವಿನಯ್ ಫೋರ್ಟ್ ಅವರಂತಹ ಪ್ರಮುಖ ನಟರು ಈ ಚಿತ್ರದಲ್ಲಿ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಹಿರಿಯ ನಟನ ಅನಿರೀಕ್ಷಿತ ಸಾವು ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಹಲವು ಗಣ್ಯರು ಸಂತೋಷ್ ಕೆ. ನಾಯರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *