ದಕ್ಷಿಣದ ನಟರ ಬಗ್ಗೆ ಶ್ರೆಯಾ ಸರನ್ ಮಾತು, ಪವನ್, ರಜನಿ, ಮಹೇಶ್ ಬಗ್ಗೆ ಹೇಳಿದ್ದೇನು? – Kannada News | Shriya Saran talks about South movie stars

ಶ್ರೆಯಾ ಸರನ್ (Shriya Saran), ಒಂದು ಸಮಯದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ರಜನೀಕಾಂತ್, ಪವನ್ ಕಲ್ಯಾಣ್, ಮಹೇಶ್ ಬಾಬು, ಜೂ ಎನ್​​ಟಿಆರ್ ಇನ್ನೂ ಹಲವಾರು ಸೂಪರ್ ಸ್ಟಾರ್ ನಟರುಗಳೊಟ್ಟಿಗೆ ಅವರು ನಟಿಸಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದಲೂ ಶ್ರೆಯಾ ಸರನ್ ಅವರಿಗೆ ಅವಕಾಶಗಳು ತುಸು ಕಡಿಮೆ ಆಗಿವೆ. ಶ್ರೆಯಾ, ಮದುವೆಯಾಗಿ ಒಬ್ಬ ಮಗಳ ತಾಯಿ ಆಗಿದ್ದಾರೆ. ಇದೀಗ ಶ್ರೆಯಾ ಸರನ್ ಅವರು ಪಾಡ್​​ಕಾಸ್ಟ್ ಒಂದರಲ್ಲಿ ಭಾಗಿ ಆಗಿದ್ದು, ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ದಕ್ಷಿಣದ ಸ್ಟಾರ್ ನಟರುಗಳ ಬಗ್ಗೆಯೂ ಮಾತನಾಡಿದ್ದಾರೆ.

ಪವನ್ ಕಲ್ಯಾಣ್ ಬಗ್ಗೆ ಮಾತನಾಡಿರುವ ಶ್ರೆಯಾ ಸರನ್, ‘ಅದ್ಭುತವಾದ ನಟ, ಅವರ ಕಣ್ಣುಗಳೇ ಸಾಕಷ್ಟು ಮಾತನಾಡುತ್ತವೆ’ ಎಂದಿದ್ದಾರೆ. ಅಂದಹಾಗೆ ಶ್ರೆಯಾ ಅವರು ಪವನ್ ಕಲ್ಯಾಣ್ ಜೊತೆಗೆ ‘ಬಾಲು ಎಬಿಸಿಡಿಇಎಫ್ಜಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಭಾರಿ ಪ್ರಚಾರದೊಂದಿಗೆ ಬಿಡುಗಡೆ ಆದ ಆ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ಮಹೇಶ್ ಬಾಬು ಬಗ್ಗೆ ಮಾತನಾಡಿರುವ ಶ್ರೆಯಾ ಸರನ್, ‘ಮಹೇಶ್ ಬಾಬು ಅವರ ನಗುವೆಂದರೆ ನನಗೆ ಬಹಳ ಇಷ್ಟ. ಅವರೊಬ್ಬ ಅದ್ಭುತ ವ್ಯಕ್ತಿ, ಅದ್ಭುತ ನಟ. ಆದರೆ ಅವರ ನಗುವಿನಲ್ಲಿ ಏನೋ ವಿಶೇಷವಿದೆ. ಅವರ ನಗು ಒಂದು ರೀತಿ ಬೆಳಕು ತಂದಂತೆ ಆಗುತ್ತದೆ. ಅವರಿಗೆ ವಯಸ್ಸೇ ಆಗುತ್ತಿಲ್ಲ. ಅವರ ಪತ್ನಿ, ಕುಟುಂಬ ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿಯ ಕಾರಣಕ್ಕೆ ಅವರಿಗೆ ವಯಸ್ಸೇ ಆಗುತ್ತಿಲ್ಲ ಎನಿಸುತ್ತದೆ’ ಎಂದಿದ್ದಾರೆ ಶ್ರೆಯಾ.

ಇದನ್ನೂ ಓದಿ:‘ಆವಾರಾಪನ್’ ಸೋಲಿನ ಬಳಿಕ ಏನಾಯ್ತು? ಶ್ರೆಯಾ ಬೇಸರದ ಮಾತು

ರಜನೀಕಾಂತ್ ಬಗ್ಗೆ ಮಾತನಾಡಿರುವ ನಟಿ ಶ್ರೆಯಾ, ‘ಯಶಸ್ಸು ಎಂದರೆ ರಜನೀಕಾಂತ್, ಯಶಸ್ಸನ್ನು ಅವರು ನೋಡುವ ರೀತಿಯೂ ಅದ್ಭುತ. ನಾನು ಮೊದಲ ಬಾರಿಗೆ ಅವರೊಟ್ಟಿಗೆ ನಟಿಸಿದ್ದು ಒಂದು ರೀತಿ ಅಚ್ಚರಿಯಾಗಿತ್ತು. ಶಂಕರ್ ಅವರು ಕರೆದು ಅವಕಾಶ ಕೊಟ್ಟರು. ಮುಹೂರ್ತದ ದಿನ ಬರುವಂತೆ ಹೇಳಿದರು. ಅಲ್ಲಿ ಹೋದರೆ ರೆಹಮಾನ್, ರಜನೀಕಾಂತ್ ಇನ್ನೂ ಕೆಲವು ದೊಡ್ಡವರು ಇದ್ದರು. ರಜನೀಕಾಂತ್ ಅವರು ಸಿನಿಮಾದ ಮುಹೂರ್ತಕ್ಕೆ ಅತಿಥಿ ಎಂದುಕೊಂಡಿದ್ದೆ. ಆದರೆ ಬಳಿಕ ಶಂಕರ್ ಅವರು, ರಜನೀಕಾಂತ್ ಅವರೇ ನಾಯಕ ಎಂದಾಗ ನನಗೆ ತಲೆ ತಿರುಗಿದಂತಾಗಿತ್ತು. ಅದೊಂದು ಅದ್ಭುತ ಅನುಭವ’ ಎಂದು ಶ್ರೆಯಾ ಹೇಳಿದ್ದಾರೆ. ಶಿವಾಜಿ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಶ್ರೆಯಾ ಸರನ್ ನಟಿಸಿದ್ದಾರೆ.

ಇಮ್ರಾನ್ ಹಾಶ್ಮಿ ಬಗ್ಗೆಯೂ ಮಾತನಾಡಿರುವ ಶ್ರೆಯಾ ಸರನ್, ‘ಅದ್ಭುತವಾದ ನಟ, ಅದ್ಭುತವಾದ ತಮಾಷೆ ಪ್ರವೃತ್ತಿ ಅವರಲ್ಲಿ ಇದೆ’ ಎಂದರು. ತಾವು ಇಮ್ರಾನ್ ಅವರ ಪತ್ನಿಯೊಟ್ಟಿಗೆ ಒಳ್ಳೆಯ ಗೆಳತಿ ಆಗಿದ್ದೇನೆ ಎಂದು ಸಹ ನಟಿ ಶ್ರೆಯಾ ಹೇಳಿದರು.

ಶ್ರೆಯಾ ಸರನ್ ಅವರು, ತೆಲುಗು ಹಾಗೂ ತಮಿಳಿನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಚಂದ್ರ’ ಮತ್ತು ‘ಅರಸು’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಿಂದಿಯಲ್ಲಿ ದೊಡ್ಡ ಯಶಸ್ಸು ಸಿಗಲಿಲ್ಲವಾದರೂ ‘ದೃಶ್ಯಂ’ ರೀಮೇಕ್ ಮೂಲಕ ಅಲ್ಲಿಯೂ ಯಶಸ್ಸು ಪಡೆದುಕೊಂಡರು. ಈಗ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *