ತಿರುವನಂತಪುರಂ, ಮೇ 06: ದೇವರ ನಾಡು ಕೇರಳಂನಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸಿದೆ. ಕಳೆದ ಹತ್ತು ವರ್ಷಗಳಿಂದ ಸತತವಾಗಿ ಆಡಳಿತ ನಡೆಸುತ್ತಿದ್ದ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ (LDF) ಸರ್ಕಾರವನ್ನು ಕಿತ್ತೊಗೆಯುವಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಯಶಸ್ವಿಯಾಗಿದೆ. ಈ ಭರ್ಜರಿ ಜಯದೊಂದಿಗೆ ಕಾಂಗ್ರೆಸ್ ಒಂದು ದಶಕದ ನಂತರ ಮರಳಿ ಗದ್ದುಗೆ ಏರುತ್ತಿದೆ. ಕಳೆದ ಎರಡು ಅವಧಿಗಳಲ್ಲಿ ಆಡಳಿತ ನಡೆಸಿದ್ದ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿದೆ. ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಮತ್ತು ಇತ್ತೀಚಿನ ವಿವಾದಗಳು ಎಲ್ಡಿಎಫ್ ಪತನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ನ ಭರವಸೆಗಳಿಗೆ ಜನಮನ್ನಣೆ ಸಿಕ್ಕಿದೆ.
2016ರಿಂದ ಸತತ ಸೋಲುಗಳನ್ನು ಕಂಡಿದ್ದ ಕಾಂಗ್ರೆಸ್ ಪಾಲಿಗೆ ಈ ಜಯ ಸಂಜೀವಿನಿಯಂತಿದೆ. ರಾಜ್ಯಾದ್ಯಂತ ನಡೆದ ತೀವ್ರ ಪ್ರಚಾರ ಮತ್ತು ಒಗ್ಗಟ್ಟಿನ ಹೋರಾಟವು ಯುಡಿಎಫ್ಗೆ ಭದ್ರವಾದ ನೆಲೆಯನ್ನು ಒದಗಿಸಿದೆ. ದಕ್ಷಿಣದ ಈ ಪ್ರಮುಖ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಗೆ ದೊಡ್ಡ ಶಕ್ತಿಯನ್ನು ನೀಡಿದೆ.
ಫಲಿತಾಂಶ ಹೊರಬರುತ್ತಿದ್ದಂತೆಯೇ ಕೇರಳದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ-ಬಿಳಿ-ಹಸಿರು ಬಾವುಟಗಳನ್ನು ಹಿಡಿದು ಬೀದಿಗಿಳಿದು ಸಂಭ್ರಮಿಸುತ್ತಿದ್ದಾರೆ. ಇದು ಕೇವಲ ಒಂದು ಪಕ್ಷದ ಗೆಲುವಲ್ಲ, ಬದಲಾವಣೆಯನ್ನು ಬಯಸಿದ್ದ ಕೇರಳಂನ ಜನರ ಗೆಲುವು” ಎಂದು ಸ್ಥಳೀಯ ನಾಯಕರು ಬಣ್ಣಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿ. ಡಿ. ಸತೀಶನ್, ಕೆ. ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ನಡುವೆ ತೀವ್ರ ಪೈಪೋಟಿ ನಡೆದಿದೆ. ಕೇರಳಂ ಸಿಎಂ ರೇಸ್ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ವಿ. ಡಿ. ಸತೀಶನ್ ಅವರದ್ದು.
ಕಳೆದ ಐದು ವರ್ಷಗಳಿಂದ ಕೇರಳಂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಪಿಣರಾಯಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಿದ ಅನುಭವ ಅವರಿಗಿದೆ. ಈ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿದ ಇವರಿಗೆ ಸದ್ಯ ಶಾಸಕರ ಬೆಂಬಲ ಹಾಗೂ ಹೈಕಮಾಂಡ್ ವಿಶ್ವಾಸವಿದೆ ಎನ್ನಲಾಗಿದೆ. ಇಂದು ತಿರುವನಂತಪುರಂನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ನಡೆಯುವ ಸಾಧ್ಯತೆ ಇದೆ. ಸಿಎಲ್ಪಿ ನಾಯಕನ ಆಯ್ಕೆಗೂ ಮುನ್ನ ಎಐಸಿಸಿ ವೀಕ್ಷಕರು ವಿ. ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಕೆ. ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
