ದಾಖಲೆ ಮಟ್ಟದಲ್ಲಿ ಬತ್ತಿದ ಕೆಆರ್​​ಎಸ್​​ ಡ್ಯಾಂ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಸಂಕಷ್ಟ! – Kannada News | KRS Dam Water Crisis: Bangalore, Mysore Face Drinking Water Shortage Amid Record Low Levels

ಮೈಸೂರು, ಏಪ್ರಿಲ್​​ 30: ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಡ್ಯಾಂನ ಸಂಗ್ರಹ ಮಟ್ಟ 94 ಅಡಿಗೆ ಇಳಿದಿದ್ದು, ಇದರಿಂದ ಲಭ್ಯ ನೀರಿನ ಪ್ರಮಾಣ 278 ಟಿಎಂಸಿಎಫ್‌ಟಿಗೆ ಇಳಿಕೆಯಾಗಿದೆ. ಸಂಗ್ರಹ ಶೇಖರಣೆ ತಳಮಟ್ಟಕ್ಕೆ ಸಮೀಪಿಸುತ್ತಿರುವ ಹಿನ್ನೆಲೆ ಉಳಿದ ನೀರನ್ನು ಜಾಗರೂಕತೆಯಿಂದ ಬಳಸಬೇಕೆಂದು ತಜ್ಞರು ಎಚ್ಚರಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿಗಾವಳಿ ಕೇಂದ್ರ (KSNDMC) ಮಾಹಿತಿ ಪ್ರಕಾರ, ಕಳೆದ ವರ್ಷ ಏಪ್ರಿಲ್ 29ರಂದು KRS ಮತ್ತು ಕಬಿನಿ ಜಲಾಶಯಗಳಲ್ಲಿ ಕ್ರಮವಾಗಿ 19.50 ಟಿಎಂಸಿಎಫ್‌ಟಿ ಮತ್ತು 9.25 ಟಿಎಂಸಿಎಫ್‌ಟಿ ನೀರು ಇತ್ತು. ಈ ವರ್ಷ ಅದು 18.52 ಟಿಎಂಸಿಎಫ್‌ಟಿ ಮತ್ತು 6.23 ಟಿಎಂಸಿಎಫ್‌ಟಿ ಆಗಿದೆ.

ಸಾಮಾನ್ಯವಾಗಿ ಈ ಅವಧಿಯಲ್ಲಿ KRS ಜಲಾಶಯದ ಮಟ್ಟ 100 ಅಡಿ ಇರುತ್ತದೆ. ತಾಪಮಾನ ಹೆಚ್ಚಾದಂತೆ ನೀರಿನ ಆಳ ಕಡಿಮೆಯಾಗುತ್ತಿದ್ದು, ಪಾಚಿ ಬೆಳವಣಿಗೆ ಹೆಚ್ಚಾಗಿ ನೀರಿನ ಗುಣಮಟ್ಟ ಕುಸಿಯುತ್ತದೆ. ಇದರಿಂದ ನೀರಿನ ರುಚಿ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬಿದ್ದು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಜಿ ನೀರಾವರಿ ಕಾರ್ಯದರ್ಶಿ ಕ್ಯಾಪ್ಟನ್ ರಾಜಾ ರಾವ್ ತಿಳಿಸಿದ್ದಾರೆ. KSNDMC ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರ ಪ್ರಕಾರ, ಪ್ರಸ್ತುತ ಲೈವ್ ಸ್ಟೋರೇಜ್ ಸುಮಾರು 10 ಟಿಎಂಸಿಎಫ್‌ಟಿ ಇದ್ದು, ಅದರಲ್ಲಿ 7 ಟಿಎಂಸಿಎಫ್‌ಟಿ ಕ್ಕಿಂತ ಹೆಚ್ಚು ನೀರನ್ನು ಬೆಂಗಳೂರು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಪೂರೈಕೆ ಮಾಡಲಾಗುತ್ತದೆ. KRSನಿಂದ ಟಿ.ಕೆ. ಹಳ್ಳಿ ವರೆಗೆ ಸಾಗುವ ವೇಳೆ ಸುಮಾರು 0.8 ರಿಂದ 1 ಟಿಎಂಸಿಎಫ್‌ಟಿ ನೀರು ಆವಿಯಾಗುತ್ತದೆ. ಹೀಗಾಗಿ ನಾವು ಗಂಭೀರ ಪರಿಸ್ಥಿತಿಯ ಅಂಚಿನಲ್ಲಿದ್ದೇವೆ. ಜನರು ನೀರನ್ನು ಮಿತವಾಗಿ ಬಳಸಬೇಕು. ಮಳೆಗಾಲ ಜೂನ್‌ನಲ್ಲಿ ಆರಂಭವಾದರೂ ಜಲಾಶಯಕ್ಕೆ ನೀರಿನ ಹರಿವು ತಕ್ಷಣವೇ ಶುರುವಾಗುವುದಿಲ್ಲ. ಜೂನ್ 15ರವರೆಗೆ ಈಗಿರುವ ನೀರನ್ನು ಬಳಸಿ ನಿರ್ವಹಿಸಬೇಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ; ವಾಹನಗಳನ್ನ ತೊಳೆಯದಂತೆ ಸೂಚನೆ

ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಮೂಲಗಳ ಪ್ರಕಾರ, ಕಾವೇರಿ ಕಣಿವೆಯ ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಸಮರ್ಪಕ ಮಳೆಯ ಕೊರತೆ ಉಂಟಾಗಿದೆ. ಈ ಎಲ್ಲಾ ಜಿಲ್ಲೆಗಳು ಮಳೆಯ ಕೊರತೆಯ ‘ರೆಡ್’ ವರ್ಗದಲ್ಲಿ ಇದ್ದು, ಇದೇ ಕಾರಣಕ್ಕೆ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೂ ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ದಿ ನ್ಯೂ ಇಂಡಿಯನ್​​ ಎಕ್ಸ್ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *