ದಾವಣಗೆರೆ: ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 9ನೇ ತರಗತಿ ಬಾಲಕ ಸಾವು – Kannada News | Class 9 Student Dies of Suspected Heart Attack in Davanagere’s Goguddu Village

ದಾವಣಗೆರೆ, ಫೆಬ್ರವರಿ 24: ಕರ್ನಾಟಕದಲ್ಲಿ (Karnataka) ಇತ್ತೀಚೆಗೆ ಕಿರಿಯ ವಯಸ್ಸಿನವರಲ್ಲಿ ಹೃದಯಾಘಾತ (Heart Attack), ಅದರಿಂದಾಗಿ ಸಾವುಗಳು ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ಜೋರಾಗಿದೆ. ಇದರ ನಡುವೆಯೇ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ 15 ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗೋಗುದ್ದು ಗ್ರಾಮದ ಚಮನ್‌ಸಾಬ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಜಾಮಿಲ್ (15) ಮೃತ ಬಾಲಕ. ಆತ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಶಾಲೆಗೆ ರಜೆ ಹಿನ್ನೆಲೆ ಮನೆಗೆ ಬಂದಿದ್ದ ಮುಜಾಮಿಲ್ ಇಂದು ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಅಸ್ವಸ್ಥನಾಗಿ ಕುಸಿದುಬಿದ್ದಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ, ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯಂತೆ, ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.

ಈ ಘಟನೆ ಗೋಗುದ್ದು ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಮಕ್ಕಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ

ಕರ್ನಾಟಕದಲ್ಲಿ ಇತ್ತೀಚೆಗೆ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಕಳೆದ ವರ್ಷ ಹಾಸನ ಜಿಲ್ಲೆಯೊಂದರಲ್ಲೇ ಒಂದೂವರೆ ತಿಂಳ ಅವಧಿಯಲ್ಲಿ ಸುಮಾರು 26 ಮಂದಿ ಹಾರ್ಟ್ ಅಟ್ಯಾಕ್​ನಿಂದ ಮೃತಪಟ್ಟಿದ್ದು ಆತಂಕ ಮೂಡಿಸಿತ್ತು. ಇದೇ ಜನವರಿಯಲ್ಲಿ ಚಾಮರಾಜನಗರದಲ್ಲಿ 8 ವರ್ಷದ ಬಾಲಕಿ ಶಾಲೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಇಂತಹ ಘಟನೆಗಳ ತನಿಖೆಗಾಗಿ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಶಾಲೆಗಳಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೃದಯ ತಪಾಸಣೆ ನಡೆಸಲು ಮತ್ತು ಸಿಪಿಆರ್ (CPR) ತರಬೇತಿ ನೀಡಲು ಮುಂದಾಗಿದೆ.

ಇದನ್ನೂ ಓದಿ: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ; ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಜ್ಞ ವೈದ್ಯರು ಸಹ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದು, ಪ್ರತಿದಿನ 30 ನಿಮಿಷಗಳ ನಡಿಗೆ, ಜಂಕ್ ಫುಡ್ ನಿಯಂತ್ರಣ ಮತ್ತು ಒತ್ತಡ ಮುಕ್ತ ಜೀವನ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಏತನ್ಮಧ್ಯೆ, ಅತಿಯಾದ ಬೆವರುವಿಕೆ, ಎದೆ ಉರಿ (ಗ್ಯಾಸ್ಟ್ರಿಕ್ ಎಂದು ಭ್ರಮಿಸಬೇಡಿ), ಎಡಗೈ ಅಥವಾ ದವಡೆ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *