ಬೆಂಗಳೂರು, ಏ.14: ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ನಡುವೆ ಉಂಟಾಗಿದ್ದ ಅಸಮಾಧನಕ್ಕೆ ಇದೀಗ ಮತ್ತೊಂದು ತಲೆದಂಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ದಾವಣಗೆರೆ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪ ನಸೀರ್ ಅಹಮದ್ ಅವರ ಮೇಲಿದೆ. ಈ ಕಾರಣದಿಂದಾಗಿ ಅವರನ್ನು ಮುಖ್ಯಮಂತ್ರಿಗಳ ಆಪ್ತ ರಾಜಕೀಯ ಕಾರ್ಯದರ್ಶಿಯ ಹುದ್ದೆಯಿಂದ ತೆಗೆದುಹಾಕಲಾಗಿದೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹಮದ್, ನಸೀರ್ ಅಹಮದ್ ಅವರು ಬಾಗಲಕೋಟೆ ಚುನಾವಣಾ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳೇ ಅವರಿಗೆ ಬಾಗಲಕೋಟೆಯಲ್ಲಿ ಇರಲು ಸೂಚಿಸಿದ್ದರು. ದಾವಣಗೆರೆಗೆ ಬಂದು ಹೋಗುವ ಕುರಿತು ನಸೀರ್ ಅಹಮದ್ ಕೇಳಿಕೊಂಡಾಗ, ಬಾಗಲಕೋಟೆಯಲ್ಲಿಯೇ ಉಳಿದು ಕೆಲಸ ಮಾಡಲು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಮುಖ್ಯಮಂತ್ರಿಗಳ ಸೂಚನೆಯಂತೆ ನಸೀರ್ ಅಹಮದ್ ಬಾಗಲಕೋಟೆಯಲ್ಲಿ 10 ದಿನಗಳ ಕಾಲ ಕಾರ್ಯ ನಿರ್ವಹಿಸಿದ್ದರು ಎಂದು ಜಮೀರ್ ಅಹಮದ್ ಹೇಳಿದ್ದಾರೆ. ಇನ್ನು ಒಂದು ವಾರಗಳ ಹಿಂದೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮತ್ತು ಎಂಎಲ್ಸಿ ಅಬ್ದುಲ್ ಜಬ್ಬಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜನೆ ಮಾಡಿ ಹೊಸದಾಗಿ ಮರು ನಿರ್ಮಾಣ ಮಾಡುವುದಾಗಿ ಹೇಳಿದರು. ಇದೀಗ ಈ ರಾಜಕೀಯ ಬಿಕ್ಕಟ್ಟಿನ ಮುಂದುವರಿದ ಭಾಗವಾಗಿ ಮುಖ್ಯಮಂತ್ರಿಗಳ ಆಪ್ತ ರಾಜಕೀಯ ಕಾರ್ಯದರ್ಶಿಯ ತಲೆದಂಡವಾಗಿದೆ. ಇದೀಗ ಇದರ ಪರಿಣಾಮ ಸಚಿವ ಜಮೀರ್ ಮೇಲೆಯೂ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಿಡಿಯೋ ಸುದಗ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
