ದಿಲೀಪ್ ರಾಜ್ ಕೊನೆಯ ಕ್ಷಣಗಳು ಹೇಗಿತ್ತು? ಅಂಬ್ಯುಲೆನ್ಸ್ ನೀಡಿದ್ದರೆ ಉಳಿಯುತ್ತಿತ್ತು ಜೀವ? – Kannada News | Dileep Raj Demise: Auto driver Explains Wife Vidya’s Tragic Fight; Hospital Negligence Questioned

ಕನ್ನಡದ ಜನಪ್ರಿಯ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಇಡೀ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೇ 13ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ದಿಲೀಪ್ ರಾಜ್ ಅವರನ್ನು ಉಳಿಸಿಕೊಳ್ಳಲು ಅವರ ಪತ್ನಿ ಶ್ರೀವಿದ್ಯಾ ನಡೆಸಿದ ಹೋರಾಟ ಈಗ ಕಣ್ಣೀರು ತರಿಸುವಂತಿದೆ. ಆ ಕೊನೆಯ ಕ್ಷಣಗಳಲ್ಲಿ ನಡೆದಿದ್ದೇನು ಎಂಬುದನ್ನು ಸ್ವತಃ ಆಟೋ ಚಾಲಕ ದೇವೇಂದ್ರ ನಾಯ್ಡು ವಿವರಿಸಿದ್ದಾರೆ.

‘ನಾನು ದಿಲೀಪ್ ಅವರ ಮನೆಯ ಹತ್ತಿರವೇ ಇದ್ದೆ. ಬೆಳಿಗ್ಗೆ ಸುಮಾರು 6:10ಕ್ಕೆ ಅವರ ಪತ್ನಿ ಶ್ರೀವಿದ್ಯಾ  ಆತಂಕದಿಂದ ಕರೆದರು. ಕೂಡಲೇ ಹೋದೆ. ನಾನು ಮತ್ತು ಅವರ ಮನೆಯ  ಭದ್ರತಾ ಸಿಬ್ಬಂದಿ ಸೇರಿ ದಿಲೀಪ್ ಅವರನ್ನು ಆಟೋದಲ್ಲಿ ಕೂರಿಸಿಕೊಂಡೆವು. ಆ ಸಮಯದಲ್ಲಿ ಅವರಿಗೆ ಸಿಪಿಆರ್ (CPR) ಕೂಡ ಮಾಡಿದೆವು. ಸ್ವಲ್ಪ ಉಸಿರಾಟ ಇತ್ತು. ಆದರೆ 6:15ರ ಸುಮಾರಿಗೆ ರಾಜರಾಜೇಶ್ವರಿ ನಗರದ ಆರ್ಚ್ ಹತ್ತಿರ ಬರುತ್ತಿದ್ದಂತೆ ದೊಡ್ಡ ಉಸಿರು ಬಿಟ್ಟರು’ ಎಂದು ದೇವೇಂದ್ರ ನಾಯ್ಡು ಆ ಕ್ಷಣಗಳನ್ನು ನೆನೆದಿದ್ದಾರೆ.

‘ದಿಲೀಪ್ ಅವರ ಸ್ಥಿತಿ ಕಂಡು ಪತ್ನಿ ಶ್ರೀವಿದ್ಯಾ  ಅವರು ಮೊದಲು ಜಯದೇವ ಆಸ್ಪತ್ರೆಗೆ ಹೋಗೋಣ ಎಂದಿದ್ದರು. ಆದರೆ ಅದು ದೂರವಾಗುತ್ತದೆ ಎಂಬ ಕಾರಣಕ್ಕೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೊದಲು ಹೋದ ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ. ಸಿಬ್ಬಂದಿಗಳು ಕೇವಲ ಬಿಪಿ ಚೆಕ್ ಮಾಡಿ, ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದರು. ಕೆಆರ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಯಾವುದೇ ಸ್ಪಂದನೆ ಬರಲಿಲ್ಲ’ ಎಂದು ಆಟೋ ಚಾಲಕ ವಿವರಿಸಿದ್ದಾರೆ.

ಅಂಬ್ಯುಲೆನ್ಸ್ ನೀಡದ ಆಸ್ಪತ್ರೆ ವಿರುದ್ಧ ಆಕ್ರೋಶ:

ದಿಲೀಪ್ ಅವರನ್ನು ಉಳಿಸಿಕೊಳ್ಳಲು ಮತ್ತೊಂದು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಸಹಾಯ ಕೇಳಿದಾಗ ಕೆಆರ್ ಆಸ್ಪತ್ರೆಯವರು ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ಅಲ್ಲಿ ಎರಡು ಅಂಬ್ಯುಲೆನ್ಸ್ ಇತ್ತು. ಆದರೂ ಅವರು ನಮಗೆ ಸಹಾಯ ಮಾಡಲಿಲ್ಲ. ಬಹುಶಃ ಭಯದಿಂದ ಇರಬಹುದು ಅಥವಾ ಅವರಿಗೆ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿದಿರಬಹುದು. ಆದರೆ ಮಾನವೀಯತೆ ದೃಷ್ಟಿಯಿಂದ ಅಂಬ್ಯುಲೆನ್ಸ್ ನೀಡಿದ್ದರೆ ಇಂದು ದಿಲೀಪ್ ಅವರು ನಮ್ಮೊಂದಿಗೆ ಇರುತ್ತಿದ್ದರೇನೋ’ ಎಂದು ಆಟೋ ಚಾಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಲವ್ ಮಾಕ್ಟೇಲ್ 3’ ಚಿತ್ರ ಒಟಿಟಿಯಲ್ಲಿ ಗಮನ ಸೆಳೆಯುವಾಗಲೇ ಕೊನೆಯುಸಿರೆಳೆದ ದಿಲೀಪ್ ರಾಜ್

ಆಸ್ಪತ್ರೆಯಲ್ಲಿ ಪತ್ನಿಯ ಆಕ್ರಂದನ:

‘ಕೊನೆಗೆ ಕಾರ್ ಮೂಲಕ ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ಸುದ್ದಿ ಕೇಳುತ್ತಿದ್ದಂತೆ ದಿಲೀಪ್ ಪತ್ನಿ ಇಡೀ ಆಸ್ಪತ್ರೆಗೆ ಕೇಳಿಸುವಂತೆ ಜೋರಾಗಿ ಕಿರುಚಾಡಿ ಅತ್ತಿದ್ದಾರೆ. ಎಲ್ಲಾ ದೇವರಿಗೂ ಬೇಡಿಕೊಂಡರು, ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ಪ್ರಾರ್ಥಿಸಿದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು’ ಎಂದು ದೇವೇಂದ್ರ ನಾಯ್ಡು ಭಾವುಕರಾಗಿ ವಿವರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *