ದಿಲ್ಜಿತ್ ದೋಸಾಂಜ್ ‘ಸತ್ಲುಜ್’ ಸಿನಿಮಾ ಒಟಿಟಿಯಿಂದ ಡಿಲೀಟ್ ಆಗಿದ್ದಕ್ಕೆ ಸಿಕ್ತು ಕಾರಣ – Kannada News | Diljit Dosanjh Satluj Removed from ZEE5 Here is what Happened

ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ ಸಿನಿಮಾ (Satluj Movie) ಇತ್ತೀಚೆಗಷ್ಟೇ ಜೀ5 ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಶಾಕಿಂಗ್ ವಿಷಯ ಎಂದರೆ ಈ ಸಿನಿಮಾ ಈಗ ಜೀ5 ಪ್ಲಾಟ್‌ಫಾರ್ಮ್‌ನಿಂದ ದಿಢೀರ್ ನಾಪತ್ತೆಯಾಗಿದೆ. ಈ ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ ಒಟಿಟಿಯಿಂದ ಡಿಲೀಟ್ ಮಾಡಲಾಗಿದೆ. ಈ ಚಿತ್ರದಲ್ಲಿರುವ ಕೆಲವು ದೃಶ್ಯಗಳು ಭಾರತ ವಿರೋಧಿ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆಯಂತೆ. ಹೀಗಾಗಿ ಚಿತ್ರದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಮೂಲತಃ ‘ಪಂಜಾಬ್ 95’ ಎಂಬ ಹೆಸರನ್ನು ಹೊಂದಿದ್ದ ಈ ಸಿನಿಮಾ ಕಳೆದ ಮೂರು ವರ್ಷಗಳಿಂದ ಸೆನ್ಸಾರ್ ಮಂಡಳಿ ಕೈಯಲ್ಲಿ ಸಿಲುಕಿಕೊಂಡಿತ್ತು. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಬರೋಬ್ಬರಿ 127 ಕಟ್‌ಗಳನ್ನು ಮಾಡುವಂತೆ ಸೂಚಿಸಿತ್ತು ಎಂದು ಚಿತ್ರತಂಡ ಈ ಹಿಂದೆ ಆರೋಪಿಸಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿನಿಮಾಗೆ ಅನುಮತಿ ಸಿಗದ ಕಾರಣ ಇದನ್ನು ಕಳೆದ ಶುಕ್ರವಾರ ‘ಸತ್ಲುಜ್’ ಎಂಬ ಹೆಸರಿನಲ್ಲಿ ನೇರವಾಗಿ ಜೀ5 ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಒಟಿಟಿ ಕಂಟೆಂಟ್‌ಗಳಿಗೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರದ ಅಗತ್ಯವಿಲ್ಲ. ಆದರೆ, ಇದು ಸೂಕ್ಷ್ಮ ವಿಷಯ ಆಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಈ ಸಿನಿಮಾ ಪಂಜಾಬ್‌ನ ಹೆಸರಾಂತ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ನೈಜ ಜೀವನವನ್ನು ಆಧರಿಸಿದೆ. ಪಂಜಾಬ್‌ನಲ್ಲಿ ಉಗ್ರಗಾಮಿ ಕೃತ್ಯಗಳು ಹೆಚ್ಚಾಗಿದ್ದ 1980 ಮತ್ತು 90ರ ಅವಧಿಯಲ್ಲಿ ನಡೆದಿದ್ದ ಕೆಲವು ಕರಾಳ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲಿ ನಡೆದಿದ್ದ ಕಾನೂನುಬಾಹಿರ ಹತ್ಯೆಗಳು ಮತ್ತು ರಹಸ್ಯ ಶವಸಂಸ್ಕಾರಗಳ ಸತ್ಯವನ್ನು ಹೊರತರುವಲ್ಲಿ ಜಸ್ವಂತ್ ಸಿಂಗ್ ಶ್ರಮಿಸಿದ್ದರು. ಈ ಚಿತ್ರದಲ್ಲಿ ದೇಶದ ಭದ್ರತೆಗೆ ಧಕ್ಕೆ ತರುವಂತಹ ಅಂಶಗಳಿವೆ ಎಂಬ ಕಾರಣಕ್ಕೆ ಈಗ ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ.

ಚಿತ್ರವನ್ನು ಒಟಿಟಿಯಿಂದ ತೆಗೆದುಹಾಕಿರುವ ಬಗ್ಗೆ ಜೀ5 ಸಂಸ್ಥೆಯು ಅಧಿಕೃತ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದೆ. ಮುಂದಿನ ಆದೇಶದವರೆಗೆ ಭಾರತದಲ್ಲಿ ಈ ಸಿನಿಮಾ ಲಭ್ಯವಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಆದರೆ ನಾವು ಚಿತ್ರತಂಡದ ಸೃಜನಶೀಲತೆಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದೆ. ಸೂಕ್ತ ಕಾನೂನು ಪ್ರಕ್ರಿಯೆಗಳ ಮೂಲಕ ಸಿನಿಮಾವನ್ನು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಮರಳಿ ತರಲು ಪ್ರಯತ್ನಿಸುವುದಾಗಿ ಜೀ5 ಭರವಸೆ ನೀಡಿದೆ.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಬ್ಯಾನ್, ಈಗ ಒಟಿಟಿಯಿಂದಲೂ ಹೊರಕ್ಕೆ, ಯಾವುದು ಈ ‘ಸಟ್ಲುಜ್’ ಸಿನಿಮಾ?

ಇತ್ತ ನಟ ದಿಲ್ಜಿತ್ ದೋಸಾಂಜ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಬಂದು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ರಾಜಕೀಯ ನಾಯಕರು ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸರ್ಕಾರವು ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *