ಬೆಂಗಳೂರು, ಆಗಸ್ಟ್ 14): ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ (independence day) ಧ್ವಜಾರೋಹಣಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ (zameer ahmed Khan) ವಿನಾಯಿತಿ ಕೇಳಿ ಸಿಎಂಗೆ ಬರೆದ ಪತ್ರ ಭಾರೀ ಸಂಚಲನ ಮೂಡಿಸಿದೆ. ಇದು ಇಂದು (ಆಗಸ್ಟ್ 14) ಸದದನಲ್ಲೂ ಬಿಜೆಪಿ ನಾಯಕರು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆದಂದು ಧ್ವಜಾರೋಹಣಕ್ಕೆ ಸಮಯ ಇಲ್ಲ ಎಂದು ಹೇಳುವ ಮೂಲಕ ಜಮೀರ್ ಅಹಮದ್ ದೇಶದ್ರೋಹ ಎಸಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ವಿಪಕ್ಷ ನಾಯಕರ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಸಂಘಟನೆಯಲ್ಲಿ ಬ್ಯುಸಿಯಾಗಿದ್ದೇನೆ ಎಂಬುದು ನೆಪ
ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, “ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿಜವಾದ ಬಣ್ಣ ಮತ್ತೊಮ್ಮೆ ನಡುರಸ್ತೆಯಲ್ಲಿ ಬಯಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಆಗಸ್ಟ್ 15ರ ಪವಿತ್ರ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡಲು ನನಗೆ “ಸಮಯವಿಲ್ಲ”, ಹಾಗಾಗಿ ಅದರಿಂದ ವಿನಾಯಿತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ ಮತ್ತು ಪಕ್ಷದ ಸಂಘಟನೆಯಲ್ಲಿ ಬ್ಯುಸಿಯಾಗಿದ್ದೇನೆ ಎಂಬುದು ಇವರು ನೀಡಿರುವ ಲಜ್ಜೆಗೆಟ್ಟ ನೆಪ” ಎಂದು ಕಿಡಿ ಕಾರಿದ್ದಾರೆ.
ರಾಷ್ಟ್ರಧ್ವಜ ಹಾರಿಸುವುದಕ್ಕೂ ಮನಸ್ಸಿಲ್ಲದಷ್ಟು ದೇಶದ್ರೋಹಿಗಳು
“ರಾಷ್ಟ್ರಧ್ವಜ ಹಾರಿಸುವುದಕ್ಕೂ ಮನಸ್ಸಿಲ್ಲದಷ್ಟು ದೇಶದ್ರೋಹಿಗಳು ಈ ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನಿಗೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಪವಿತ್ರ ಕರ್ತವ್ಯಕ್ಕಿಂತ ಪಕ್ಷ ರಾಜಕೀಯವೇ ದೊಡ್ಡದಾಯಿತೇ? ಸಚಿವ ಜಮೀರ್ ಮತ್ತು ಈ ಕಾಂಗ್ರೆಸ್ ಸರ್ಕಾರಕ್ಕೆ ರಾಷ್ಟ್ರದ ಹೆಮ್ಮೆ, ನಮ್ಮ ಕ್ರಾಂತಿಕಾರಿಗಳ ಬಲಿದಾನ ಮತ್ತು ಪವಿತ್ರ ತ್ರಿವರ್ಣ ಧ್ವಜಕ್ಕಿಂತ ಅಧಿಕಾರದ ದಾಹ ಹಾಗೂ ಚುನಾವಣಾ ಲೆಕ್ಕಾಚಾರಗಳೇ ಮೊದಲ ಆದ್ಯತೆಯಾಗಿದೆ” ಎಂದಿದ್ದಾರೆ.
ಈ ಅಹಂಕಾರ ಮತ್ತು ರಾಷ್ಟ್ರವಿರೋಧಿ ಮನಸ್ಥಿತಿ
“ಈ ಅಹಂಕಾರ ಮತ್ತು ರಾಷ್ಟ್ರವಿರೋಧಿ ಮನಸ್ಥಿತಿ ಕಾಂಗ್ರೆಸ್ ಸಂಸ್ಕೃತಿಯಲ್ಲೇ ರಕ್ತಗತವಾಗಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಇಂತಹ ದೇಶದ್ರೋಹಿ ಧೋರಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಂಬಲ ಸಿಗುತ್ತಿದೆ. ದೇಶದ ಸ್ವಾತಂತ್ರ್ಯೋತ್ಸವಕ್ಕಿಂತ ಚುನಾವಣಾ ತಂತ್ರವೇ ಮುಖ್ಯ ಎನ್ನುವ ನಾಯಕರಿಗೆ ಈ ಮಣ್ಣಿನ ಮೇಲಿರುವ ನಿಷ್ಠೆ ಎಂಥದ್ದು ಎಂಬುದು ಈಗ ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಥವಾಗಿದೆ” ಎಂದು ಟೀಕಿಸಿದ್ದಾರೆ.
ಸದನದಲ್ಲಿ ಪ್ರಸ್ತಾಪಿಸಿದ ಸುನಿಲ್ ಕುಮಾರ್
ಇನ್ನು ಜಮೀರ್ ಅಹಮ್ಮದ ಖಾನ್ ಅವರ ಪತ್ರ ಬರೆದಿರುವುದನ್ನು ಬಿಜೆಪಿ ಶಾಸಕ ಸುನಿಲ್ ಕುಮಾರ್ ಸಹ ಸದನಲ್ಲಿಂದು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬಿದ್ದರು. ರಾಷ್ಟ್ರಧ್ವಜ ಹಾರಿಸಲು ಸಮಯ ಇಲ್ಲದ ಸಚಿವರು ಏಕೆ ಬೇಕು? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಡಿಸಿಎಂ ಪರಮೇಶ್ವರ್, ಸಮರ್ಥನೆ ಮಾಡಿಕೊಳ್ಳಲು ಮುಂದಾದರು. ಇದಕ್ಕೆ ಡಾ ಅಶ್ವತ್ಥ್ ನಾರಾಯಣ ಸಹ ಎದ್ದು ನಿಂತು ಭಾರತೀಯನಾಗಿರುವವನು ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
