ದೇಸಿ ಶ್ವಾನ ದತ್ತು ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ: ಅನಾಥ ನಾಯಿಗಳನ್ನು ಎತ್ತಿ ಮುದ್ದಾಡಿದ ಸಾರ್ವಜನಿಕರು – Kannada News | ‘Adopt Me Second Innings’ Drive Connects Stray Dogs with Forever Homes in Bengaluru

ಸಮಾಜದಲ್ಲಿ ಮನುಷ್ಯರ ರೀತಿ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಆದರೆ ಅವುಗಳ ನಿಯಂತ್ರಣ ಕೂಡ ಮುಖ್ಯ. ಬೀದಿ ನಾಯಿಗಳ ನಿಯಂತ್ರಣ ಕೇವಲ ಜಿಬಿಎ ಜವಾಬ್ದಾರಿ ಮಾತ್ರವಲ್ಲ. ಜನಸಾಮಾನ್ಯರೂ ಕೂಡ ಪ್ರಾಣಿಗಳ ಪೋಷಣೆಗೆ ಕೈಜೋಡಿಸಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ಅನಾಥ ನಾಯಿಗಳಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿತ್ತು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಪ್ರಾಣಿ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ “ಅಡಾಪ್ಟ್ ಮೀ ಸೆಕೆಂಡ್ ಇನ್ನಿಂಗ್ಸ್” ಅಭಿಯಾನದಡಿ ದೇಸಿ ಶ್ವಾನ ದತ್ತು ಕಾರ್ಯಕ್ರಮವನ್ನು ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಆಯೋಜಿಸಲಾಗಿತ್ತು.

ಅಪಘಾತಕ್ಕೊಳಗಾದ, ಮಾಲೀಕರಿಂದ ತ್ಯಜಿಸಲ್ಪಟ್ಟ ಹಾಗೂ ಚಿಕಿತ್ಸೆ ಪಡೆದು ಚೇತರಿಸಿಕೊಂಡ 30ಕ್ಕೂ ಹೆಚ್ಚು ದೇಶಿ ಶ್ವಾನಗಳನ್ನು ದತ್ತು ಸ್ವೀಕಾರಕ್ಕೆ ಲಭ್ಯವಾಗುವಂತೆ ಮಾಡಲಾಗಿತ್ತು. ಸಾರ್ವಜನಿಕರು ಕೂಡ ದೇಸಿ ಶ್ವಾನಗಳನ್ನು ತಮ್ಮ ಕುಟುಂಬದ ಸದಸ್ಯರನ್ನಾಗಿ ದತ್ತು ಪಡೆಯುವ ಅವಕಾಶವನ್ನು ಬಳಸಿಕೊಂಡರು. ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ ಎಸ್ ರಮೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ವಾನಗಳನ್ನು ದತ್ತು ಪಡೆಯಲು ಸಾಧ್ಯವಾಗದವರಿಗೆ ಅವುಗಳ ಆಹಾರ, ಚಿಕಿತ್ಸೆ ಹಾಗೂ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ವಹಿಸುವ ಮೂಲಕ ಪರೋಕ್ಷವಾಗಿ ಬೆಂಬಲ ನೀಡುವ ಅವಕಾಶವನ್ನೂ ಕಲ್ಪಿಸಲಾಗಿತ್ತು. ದತ್ತು ನೀಡಲಾದ ಎಲ್ಲ ಶ್ವಾನಗಳಿಗೆ ರೇಬೀಸ್, 7-ಇನ್-1 (ಡಿ.ಎಚ್.ಪಿ.ಪಿ.ಐ.ಎಲ್.) ಲಸಿಕೆ ಹಾಗೂ ಟಿಕ್-ಚಿಗಟೆ ನಿಯಂತ್ರಣ ಚಿಕಿತ್ಸೆ ಸೇರಿದಂತೆ ಅಗತ್ಯ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗಿತ್ತು.

ಸಾರ್ವಜನಿಕರು ದೇಸಿ ಶ್ವಾನಗಳನ್ನು ತಮ್ಮ ಕುಟುಂಬದ ಸದಸ್ಯರನ್ನಾಗಿ ದತ್ತು ಪಡೆಯುವ ಅವಕಾಶವನ್ನು ಬಳಸಿಕೊಂಡಿದ್ದು ವಿಶೇಷವಾಗಿತ್ತು. ಒಟ್ಟಾರೆ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪದ ಮಧ್ಯೆ ಅವುಗಳ ನಿಯಂತ್ರಣ ಹಾಗೂ ಪೋಷಣೆಗೆ ಸಾರ್ವಜನಿಕರು ಕೈಜೋಡಿಸಿರುವುದಕ್ಕೆ ಕಾರ್ಯಕ್ರಮ ಸಾಕ್ಷಿಯಾಗಿದೆ.

Published On – 11:44 am, Sun, 19 July 26

Source link

Leave a Reply

Your email address will not be published. Required fields are marked *