ಬೆಂಗಳೂರು, (ಜುಲೈ 18): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಬಣ ಬಡಿದಾಟ ಮತ್ತು ನಾಯಕತ್ವದ ಗೊಂದಲದ ಏರ್ಪಟ್ಟಿದೆ. ಇದರ ಮಧ್ಯೆ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ದೋಸ್ತಿ ನಡುವೆ ಸಮನ್ವಯತೆ ಕೊರತೆ ಎದುರಾಗಿದೆ. ಹೌದು…ಮೈತ್ರಿ ಮಾಡಿಕೊಂಡಾಗಿನಿಂದಲೂ ಮಿತ್ರ ಪಕ್ಷಗಳ ನಾಯಕರ ನಡುವೆ ಯಾವುದೇ ಎಲ್ಲವೂ ಸರಿ ಇಲ್ಲ ಎನ್ನುವುದು ಈಗಾಗಲೇ ಅನೇಕ ಉದಾಹರಣೆಗಳು ಇವೆ. ಇದರ ನಡುವೆ ಇದೀಗ ಬಿಡದಿ ಪಾದಯಾತ್ರೆ ವಿಚಾರವಾಗಿ ದೋಸ್ತಿಗಳ ನಡುವೆಯೇ ಗೊಂದಲ ಏರ್ಪಟ್ಟಿದೆ. ಬಿಡದಿ ಟೌನ್ಶಿಪ್ (Bidadi Township) ವಿರೋಧಿಸಿ ಬಿಜೆಪಿಗೂ ಮೊದಲೇ ಜೆಡಿಎಸ್ (JDS) ಪಾದಯಾತ್ರೆ ದಿನಾಂಕ ಘೋಷಣೆ ಮಾಡಿದೆ. ಜುಲೈ 30, 31 ಮತ್ತು ಆಗಸ್ಟ್ 1 ರಂದು ಸುಮಾರು 38 ಕಿಲೋಮೀಟರ್ಗಳ 3 ದಿನಗಳ ಪಾದಯಾತ್ರೆಯನ್ನ ಜೆಡಿಎಸ್ ಘೋಷಣೆ ಮಾಡಿದೆ. ಇದರೊಂದಿಗೆ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಮತ್ತೆ ಸಮನ್ವಯದ ಕೊರತೆ ಇದೆ ಎಂಬುವುದು ಸಾಬೀತಾದಂತಾಗಿದೆ.
ಪ್ರತ್ಯೇಕ ಪಾದಯಾತ್ರೆ ಘೋಷಿಸಿದ ಜೆಡಿಎಸ್
ಬಿಡದಿ ಟೌನ್ ಶಿಪ್ ಪಾದಯಾತ್ರೆ ಮಾಡುವ ಬಗ್ಗೆ ಬಿಜೆಪಿ ಘೋಷಣೆ ಮಾಡಿತ್ತು. ಜೆಡಿಎಸ್ ನಾಯಕರ ಜೊತೆ ಚರ್ಚಿಸಿ ಪಾದಯಾತ್ರೆ ದಿನಾಂಕವನ್ನು ಫಿಕ್ಸ್ ಮಾಡುವುದಾಗಿ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದರು. ಈ ಬಗ್ಗೆ ಚರ್ಚಿಸಲು ಜೆಡಿಎಸ್ ನಾಯಕರನ್ನು ಸಂಪರ್ಕಿಸಲು ಬಿಜೆಪಿ ನಾಯಕರು ಯತ್ನಿಸಿದ್ದರು. ಆದ್ರೆ, ಸಾಧ್ಯವಾಗಿಲ್ಲ. ಇದರ ನಡುವೆಯೇ ಇಂದು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಘೋಷಿಸಿದೆ. ಬಿಜೆಪಿ ನಾಯಕರ ಚರ್ಚೆಗೂ ಮುನ್ನವೇ ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಘೋಷಣೆ ಮಾಡುವ ಮೂಲಕ ಮಿತ್ರ ಪಕ್ಷಗಳ ನಾಯಕರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಬಹಿರಂಗವಾಗಿದೆ.
ಇದನ್ನೂ ನೋಡಿ: ವಿವಾದದ ನಡುವೆಯೇ ಬಿಡದಿ ಟೌನ್ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಜೆಡಿಎಸ್ ಪಾದಯಾತ್ರೆ ರೂಟ್ ಮ್ಯಾಪ್
- ಜುಲೈ 30 ಬೆಳಗ್ಗೆ-ಬೈರಮಂಗಲ ವೃತ್ತದಿಂದ ಬಿಡದಿ ವೃತ್ತ 8km
ಮಧ್ಯಾಹ-ಬಿಡದಿ ವೃತ್ತದಿಂದ ಕ್ರೈಸ್ಟ್ ವಿವಿ- 7 km
ಒಟ್ಟು 15 km. - ಜುಲೈ 31 ಬೆಳಗ್ಗೆ- ಕ್ರೈಸ್ಟ್ ವಿವಿ ಗೇಟ್ನಿಂದ ಜೆಕೆ ಗ್ರ್ಯಾಂಡ್ ಅರೆನಾ (ನೈಸ್ ಜಂಕ್ಷನ್) 6km ಮಧ್ಯಾಹ್ನ- ನೈಸ್ ಜಂಕ್ಷನ್ನಿಂದ ಆರ್.ಆರ್. ನಗರ ಕಮಾನು 10km ಒಟ್ಟು – 16km
- ಆಗಸ್ಟ್ 1 ಬೆಳಗ್ಗೆ- ಆರ್.ಆರ್. ಜಂಕ್ಷನ್ನಿಂದ ಫ್ರೀಡಂ ಪಾರ್ಕ್ 7 km ಮಧ್ಯಾಹ್ನ ಫ್ರೀಡಂ ಪಾರ್ಕ್ನಲ್ಲಿ ಸಮಾವೇಶ.
ಬಿಜೆಪಿ ಎಂಎಲ್ಸಿ ಹೇಳಿದ್ದೇನು?
ಇನ್ನು ಈ ಬಗ್ಗೆ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಪ್ರತಿಕ್ರಿಯಿಸಿದ್ದು, ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಪಾದಯಾತ್ರೆ ಮಾಡುವುದಾಗಿ ಹೇಳಿದ್ದೆವು. ಈಗ ಜೆಡಿಎಸ್ ನಾಯಕರು ಪಾದಯಾತ್ರೆ ದಿನಾಂಕ ಘೋಷಿಸಿದ್ದಾರೆ. ಪಾದಯಾತ್ರೆ ವಿಚಾರವಾಗಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.ಟೌನ್ಶಿಪ್ ಯೋಜನೆ ವಿಚಾರದಲ್ಲಿ ಇಬ್ಬರದ್ದೂ ಒಂದೇ ನಿಲುವು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುತ್ತೇವೆ. ಹೋರಾಟದ ಬಗ್ಗೆ ಉಭಯ ಪಕ್ಷಗಳ ನಾಯಕರು ಚರ್ಚೆಮಾಡ್ತಾರೆ. ಒಂದೇ ಪಾದಯಾತ್ರೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಉಭಯ ನಾಯಕರು ಚರ್ಚಿಸಿ ಶೀಘ್ರ ದಿನಾಂಕ ಘೋಷಣೆ ಮಾಡ್ತೇವೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿಯಲ್ಲಿ ಮುಂದುವರಿದಿರುವ ಆಂತರಿಕ ಭಿನ್ನಾಭಿಪ್ರಾಯ, ಬಣ ರಾಜಕೀಯ ಹಾಗೂ ನಾಯಕತ್ವದ ಗೊಂದಲದ ನಡುವೆ ಇತ್ತ ಜೆಡಿಎಸ್, ಕುಮಾರಸ್ವಾಮಿಯವರನ್ನು ಮೈತ್ರಿಕೂಟದ ಪ್ರಮುಖ ಮುಖವಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ. ಇದರ ಮಧ್ಯೆ ಜೆಡಿಎಸ್, ಬಿಡದಿ ಟೌನ್ಶಿಪ್ ವಿಚಾರದಲ್ಲಿ ಮಿತ್ರ ಪಕ್ಷ ಬಿಜೆಪಿ ನಾಯಕ ಅಭಿಪ್ರಾಯ ಕೇಳದೇ ಏಕಾಂಗಿಯಾ ಪಾದಯಾತ್ರೆ ಘೋಷಣೆ ಮಾಡಿರುವುದು ಉಭಯ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿದೆ. ಇದು ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
